ಮುರುಘಾಮಠದಲ್ಲಿ ಕುಂಬಾರ ಗುಂಡಯ್ಯ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಬಸವಣ್ಣನವರು ಸಮಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಶೋಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಸದಾಶಯದಿಂದ ಅವರೆಲ್ಲರಿಗೂ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದನ್ನು ಯಾರೂ ಮರೆಯುವಂತಿಲ್ಲ.

ಅದರ ಮುಂದುವರಿದ ಭಾಗವಾಗಿ ಈ ಶತಮಾನದಲ್ಲಿ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಅದೇ ಮಾರ್ಗದಲ್ಲಿ ಸಾಗಿ ಅಲಕ್ಷಿತ ಸಮುದಾಯಗಳಿಗೆ ಸರಿಯಾದ ದಿಕ್ಕನ್ನು ತೋರಿಸಲು ಸೂಕ್ತ ನಿರ್ದೇಶನವನ್ನು ನೀಡುತ್ತಿರುವುದು ಸಮಾನತೆಯ ಕುರುಹು ಆಗಿದೆ ಎಂದು ಚಿತ್ರದುರ್ಗ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿಂದು ನಡೆದ ಶಿವಶರಣ ಕುಂಬಾರ ಗುಂಡಯ್ಯ ಮತ್ತು ಅವರ ಪತ್ನಿ ಶರಣೆ ಕೇತಲದೇವಿ ಅವರುಗಳ ಜಯಂತಿ (ಶರಣೋತ್ಸವ) ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ನಮ್ಮದು ಸಣ್ಣ ಸಮಾಜ. ನಾವು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಸಹಕಾರದ ಅಗತ್ಯವಿದೆ. ಅದು ಮುಂದಿನ ದಿನಗಳಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ನೀಡಿದರೆ ಎಲ್ಲರಂತೆ ನಾವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಪ್ರೋತ್ಸಾಹವನ್ನು ಕೋರಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ, ಸಕಲ ಜೀವರಾಶಿಗಳಿಗೂ ಆಹಾರ, ಆಶ್ರಯ ಇತರ ಸಕಲೈಶ್ವರ್ಯಗಳನ್ನು ಒದಗಿಸಿರುವುದು ಮಣ್ಣು. ಅಂತಹ ಶ್ರೇಷ್ಠ ಎನಿಸಿದ ಮಣ್ಣಿನಿಂದ ಹಲವು ರೀತಿಯ ಗೃಹೋಪಯೋಗಿ ವಸ್ತುಗಳನ್ನು ತಮ್ಮ ಕೌಶಲ್ಯದಿಂದ ತಯಾರು ಮಾಡುತ್ತಿದ್ದ ಶಿವಶರಣ ಕುಂಬಾರ ಗುಂಡಯ್ಯ ಮತ್ತವರ ಪತ್ನಿ ವಿಶೇಷ ವ್ಯಕ್ತಿತ್ವದವರು.

ತನ್ನ ಕಸುಬಿನ ಜತೆಗೆ ಬಸವಣ್ಣನವರ ಆಶಯಕ್ಕೆ ಒತ್ತುಕೊಟ್ಟು ನಡೆದವರು. ನಮ್ಮ ಹಿರಿಯರು ಹುಣ್ಣಿಮೆ ಅಮಾವಾಸ್ಯೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಇಂದು ಮಣ್ಣೆತ್ತಿನ ಅಮಾವಾಸ್ಯೆ. ಇದಕ್ಕು ವೈಜ್ಞಾನಿಕ ಮತು ತಾತ್ವಿಕ ನೆಲೆಗಟ್ಟು ಇದೆ. ವೈಚಾರಿಕ ಚಿಂತನೆಯ ನೆಲೆಗಟ್ಟಿನಲ್ಲಿ ರೂಪಿತಗೊಂಡ ದಿನಗಳನ್ನು ಕೆಲವರು ಅವುಗಳನ್ನು ಭಯಪಡಿಸಲು ಬಳಸಿಕೊಂಡಿದ್ದಾರೆ. ಶ್ರೀಮಠವು ಎಲ್ಲಾ ದಿನಗಳಿಗೂ ಮಹತ್ವ ನೀಡಿದೆ. ನಾಲ್ಕಾರು ದಶಕಗಳಿಂದ ಇದು ನಡೆದಿದ್ದು, ಅಮಾವಾಸ್ಯೆಯ ದಿನದಂದು ನೂರಾರು ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಡೆದಿರುವುದು ವಿಶೇಷ.

ಕುಂಬಾರ ಗುಂಡಯ್ಯನವರಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದ್ದ ಕಾರಣ ಈ ವಿಶೇಷ ದಿನದಂದು ಅವರ ಜಯಂತಿ ಆಚರಿಸಲಾಗುತ್ತಿದೆ ಎಂದು ನುಡಿದರು.

ಮತ್ತೊಂದು ಮಹತ್ವದ ಸಂಗತಿ ಏನೆಂದರೆ ಕಳೆದ ಶತಮಾನದಲ್ಲಿ ಮನೆಯ ಜಗುಲಿ ಮೇಲಿಟ್ಟು ಪೂಜಿಸುತ್ತಿದ್ದ ತಾಡೋಲೆ ಕಟ್ಟುಗಳನ್ನು ಬಿಚ್ಚಿ ಅವುಗಳಲ್ಲಿದ್ದ ಅನರ್ಘ್ಯ ವಚನಗಳನ್ನು ಹೊರತಂದು ಸಂಶೋಧಿಸಿ ಬಹಳ ಪರಿಶ್ರಮ ವಹಿಸಿ ನಮ್ಮ ಮುಂದೆ ಇಟ್ಟವರು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು. ಅಂಥ ವಚನಗಳನ್ನು ಬಯಲಿಗೆ ತಂದು ಶರಣರನ್ನು ಪರಿಚಯಿಸಿದ ಅವರ ಜಯಂತಿಯನ್ನು ವಚನ ಸಂರಕ್ಷಣೆಯ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶ ನೀಡಿದೆ. ಹಾಗಾಗಿ ಬರುವ ಜುಲೈ ೨ರಂದು ಆ ಸಮಾರಂಭವು ಶ್ರೀಮಠದಲ್ಲಿ ಹೆಚ್ಚಿನ ಮಹತ್ವ ಕೊಟ್ಟು, ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಅವರು ಅರ್ಥವಾಗಬೇಕಿರುವ ಕಾರಣ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆಂದು ನುಡಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಶ್ರೀಗಳು ಚಾಲನೆ ನೀಡಿದರು.

ಸಮ್ಮುಖ ವಹಿಸಿದ್ದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕುಂಬಾರ ಗುಂಡಯ್ಯ ದಂಪತಿಗಳ ವ್ಯಕ್ತಿತ್ವ ಅನ್ಯೋನ್ಯತೆಯಿಂದ ಕೂಡಿದ್ದು ಸಾರವತ್ತದ ತತ್ತ÷್ವಬದ್ಧ ಜೀವನದೊಂದಿಗೆ ತಮ್ಮ ವಿಶೇಷ ಕೌಶಲ್ಯದಿಂದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದರು. ಹದವಾದ ಮಣ್ಣಿನಿಂದ ನಾಜೂಕಾದ ವಿಶೇಷ ವಸ್ತುಗಳನ್ನು ತಯಾರು ಮಾಡುತ್ತಿದ್ದರು. ಗುಂಡಯ್ಯನವರು ತಯಾರಿಸುತ್ತಿದ್ದ ಮಡಿಕೆ, ಕುಡಿಕೆ, ಪಡಿಗೆ, ಇತರ ವಸ್ತುಗಳಿಗೆ ಪತ್ನಿ ಕೇತಲಾದೇವಿ ಅದಕ್ಕೆ ಒಪ್ಪುವ ಚಿತ್ರಗಳನ್ನು ಅವುಗಳ ಮೇಲೆ ಆಕರ್ಷಕವಾಗಿ ಚಿತ್ರಿಸುತ್ತಿದ್ದರು. ಇವರದು ಆದರ್ಶ ಕುಟುಂಬವಾಗಿತ್ತೆಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಕುಂಬಾರ ಸಮಾಜದ ಹಾಗೂ ಮಠದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ವೈ. ಮೃತ್ಯುಂಜಯ, ತಿಪ್ಪೇರುದ್ರಪ್ಪ, ಸುನಿಲ್‌ಕುಮಾರ್, ರ‍್ರಿಸ್ವಾಮಿ, ಬಯಲಮ್ಮ, ಬಸವೇಶ್ವರ ವಿದ್ಯಾಸಂಸ್ಥೆಯ ಶಂಕರಪ್ಪ ಕೋಣನವರ, ಪೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಮಾರಂಭವು ನಗರದ ಎಸ್.ಜೆ.ಎಂ. ಪದವಿಪೂರ್ವ ಕಾಲೇಜಿನ ನಿರ್ವಹಣೆಯಲ್ಲಿ ನಡೆಯಿತು. ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ಗುಂಡಯ್ಯ ದಂಪತಿಗಳ ರಚನೆಯ ವಚನಗಳನ್ನು ಹಾಡಿದರು. ಪ್ರಾಚಾರ್ಯರಾದ ಡಾ.ಎಂ.ಆರ್. ಚಿದಾನಂದಪ್ಪ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಪ್ರೊ. ವಿಶ್ವನಾಥ್ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ. ಸಂತೋಷ ಶರಣು ಸಮರ್ಪಣೆ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
1 Comment
  • ಬಸವ ಕಲ್ಯಾಣದಲ್ಲಿ ಶರಣ ನವರಾತ್ರಿ ಮಾಡಲು ಲಿಂಗಾಯತರಿಂದ ದುಡ್ಡು ಸಂಗ್ರಹಣೆ ಪಂಚ ಪೀಠ ಭಕ್ತರು, ವೀರಶೈವರು ಮಾಡಿದ್ದಾರೆ.
    ಆ ಊರಿನ ಪ್ರತಿ ಕುಟಿಗೂ ಕಮಾನು ಮತ್ಇಂದಲ್ತಈ,ಹ ಪೂಜ್ಯ ಶರಣರ ಮೂರ್ತಿ ಸ್ಥಾಪನೆ, ನಗರಸಭೆ ಅನುಮಾತಿ ಪಡೆದು ಮಾಡಿರಿ.

Leave a Reply

Your email address will not be published. Required fields are marked *