ನಂಜನಗೂಡು
ಶರಣತತ್ವ ಪ್ರಸಾರ ವೇದಿಕೆಯ ಅಧ್ಯಕ್ಷರಾದ ಕಾ.ಸು. ನಂಜಪ್ಪನವರ ಎರಡನೆಯ ಪುತ್ರ ಗಿರೀಶ ಫೆಬ್ರವರಿ 5ರಂದು ಲಿಂಗೈಕ್ಯರಾದರು.
ಮನೆಯವರ ಒಮ್ಮತದಂತೆ ಅವರ ಅಂತಿಮ ಸಂಸ್ಕಾರ ಕಾರ್ಯವನ್ನು ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲೇ ಮಾಡುವುದೆಂದು ತಿರ್ಮಾನ ಮಾಡಿ, ರಾತ್ರಿ ಶರಣರ ವಚನ ಭಜನೆಯನ್ನು ನಡೆಸಲಾಯಿತು.
6ರಂದು ಶರಣ ಚಿಂತಕ ಚೌಹಳ್ಳಿ ಲಿಂಗರಾಜಪ್ಪನವರ ಮಾರ್ಗದರ್ಶನದಲ್ಲಿ ವಚನ ಪಠಣದೊಂದಿಗೆ ಹಾಗೂ ಮನೆಯ ಸದಸ್ಯರೆಲ್ಲರು ಇಷ್ಟಲಿಂಗ ಪೂಜೆ ಮಾಡಿಕೊಂಡರು. ಮತ್ತು ದೊಡ್ಡಹುಂಡಿ ಗ್ರಾಮದ ಮಹಿಳಾ ಭಜನ ತಂಡದವರಿಂದ ಭಜನೆ ನಡೆಸಲಾಯಿತು.

ಮೈಸೂರಿನ ಲಿಂಗಾಯತ ರುದ್ರ ಭೂಮಿಯಲ್ಲಿ ಸಮಾಧಿಗೆ ಯಾವುದೇ ಬಣ್ಣ ಬಳಿಯದೆ ಮತ್ತು ಪದಾರ್ಥಗಳನ್ನು ವ್ಯರ್ಥ ಮಾಡದೆ ಸಂಪೂರ್ಣವಾಗಿ ವಿಭೂತಿ, ಬಿಲ್ವಪತ್ರೆ, ಹೂಗಳಿಂದ ಅಂತ್ಯಕ್ರಿಯೆ ನೇರವೇರಿಸಲಾಯಿತು.
ವಚನಗಳಲ್ಲಿ ಶರಣರು ಮರಣವೇ ಮಹಾನವಮಿ ಎಂದಿರುವುದಾಗಿ ಚೌಹಳ್ಳಿ ಲಿಂಗರಾಜಪ್ಪನವರು ತಿಳಿಸಿದರು. ಮನೆಯವರೆಲ್ಲಾ ಲಿಂಗೈಕ್ಯರ ಒಳ್ಳೆಯ ಕೆಲಸಗಳನ್ನು ನೆನೆದು ಮುಂದೆ ಸಂತೋಷದಿಂದ ಜೀವನ ನಡೆಸಬೇಕೆಂದರು.
ಯಾವುದೇ ಮೌಢ್ಯಾಚರಣೆ ಇಲ್ಲದೇ ನಡೆದ ಕಾರ್ಯಕ್ರಮವನ್ನು ಸಂಬಂಧಿಕರು ಹಾಗೂ ಹಾಜರಿದ್ದವರೆಲ್ಲರು ನೋಡಿ ಇದು ಬಹಳ ಉತ್ತಮ ಕಾರ್ಯಕ್ರಮವೆಂದು ಸಮಾಧಾನಪಟ್ಟರು.
ಅಂತಿಮ ಸಂಸ್ಕಾರ ಕಾರ್ಯದಲ್ಲಿ ಮೂಡುಗೂರು ಪೂಜ್ಯ ಇಮ್ಮಡಿ ಉದ್ಧಾನಸ್ವಾಮಿಗಳು ಪಾಲ್ಗೊಂಡು ಗುರುಪೂಜೆ ನೇರವೇರಿಸಿದರು.
ಗಿರೀಶ ಅವರ ಕಂಪನಿಯ ಸಹೋದ್ಯೋಗಿಗಳು, ಬಂಧು ಬಾಂಧವರು, ಮಿತ್ರರು, ಬಸವಪರ ಸಂಘಟನೆಗಳ ಸದಸ್ಯರು ಭಾಗಿಯಾಗಿದ್ದರು.

ಮೌಲ್ಯಯುತ, ಅರ್ಥಗರ್ಭಿತವಾದ ಕಾರ್ಯಕ್ರಮ. ಆಹಾರ ಪದಾರ್ಥ ಚೆಲ್ಲದೆ ಲಿಂಗೈಕ್ಯರ ಒಳ್ಳೆಯ ಕಾರ್ಯಗಳನ್ನ ನೆನೆದು ಸಂಸ್ಕಾರದೊಂದಿಗೆ ಕಾರ್ಯಕ್ರಮ ನಡೆದಿರುವುದು ಉತ್ತಮವಾಗಿದೆ
ಇಂತಹ ಮೌಡ್ಯರಹಿತ ಆಚರಣೆಗಳು ಇನ್ನೂ ಹರಡಬೇಕು ಜಾಸ್ತಿ ಆಗಬೇಕು
ನಿಜಕ್ಕೂ ಒಳ್ಳೆಯ ನಡೆ ಇದು. ಇದನ್ನು ನಡೆಸಿಕೊಟ್ಟ ನಂಜನಗೂಡು ಶರಣರೆಲ್ಲರಿಗೂ ಶರಣು ಶರಣಾರ್ಥಿಗಳು. ಆದರೂ ಒಂದು ಸಣ್ಣ ಪ್ರಶ್ನೆ, ಶರಣ ತತ್ವದ ತಳಹದಿ ಮೇಲಿಂದ ಕೇಳುವ ಧೈರ್ಯ ಮಾಡುತ್ತಿದ್ದೇನೆ : ದೇಹದ ಮೇಲೆ ಗುರುಗಳು ತಮ್ಮ ಪಾದ ಇಡುವುದು ನಮ್ಮ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಈ ಅನಿಷ್ಟ ಪದ್ಧತಿಯನ್ನೂ ಕೈಬಿಡಲಾಗಿತ್ತೇ? ಬಿಟ್ಟಿದ್ದರೆ ತುಂಬಾನೇ ಸಂತೋಷ ಮತ್ತು ಮತ್ತೊಮ್ಮೆ ತಮಗೆಲ್ಲ ಅಭಿಮಾನದ ನಮನಗಳು.
ಈ ನಮ್ಮ ಬಸವ ಸಂಸ್ಕೃತಿ ಬೆಳೆಯಬೇಕು, ಇದೊಂದು ಆದರ್ಶವಾದ ಆಚರಣೆ ನಮ್ಮ ಸಮಾಜದಲ್ಲಿ ರೂಢಿಗೆ ಬರಬೇಕು.