ಚಿತ್ರದುರ್ಗ:
ನಾವು ಬಹು ಹಿಂದಿನಿಂದಲೂ ಪ್ರಕೃತಿ ಧರ್ಮವನ್ನು ನಂಬಿ ಋತುಮಾನಕ್ಕೆ ತಕ್ಕಂತೆ ನಮ್ಮ ಆಚರಣೆಗಳನ್ನು ಅನುಸರಿಸಿಕೊಂಡು ಬಂದವರು. ಅದು ನಮ್ಮ ಪೂರ್ವಿಕರ ಕೊಡುಗೆಯೂ ಸಹ. ಭಾರತದ ಸಂಸ್ಕೃತಿಗೆ ಮಾರುಹೋದ ಪಾಶ್ಚಿಮಾತ್ಯರೇ ಇಲ್ಲಿನ ನಡೆ- ನುಡಿ ಆಚರಣೆಯ ಬಗೆಗೆ ಖುಷಿಪಟ್ಟು ಹಾಡಿ ಹೋಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಧ್ಯವಾದರೆ ಅನುಸರಿಸಿ ನಡೆಯುತ್ತಿದ್ದಾರೆ. ವಿಷಾದದ ಸಂಗತಿ ಎಂದರೆ ನಾವು ಅವರ ಸಂಸ್ಕೃತಿಯ ಅನುಸರಣೆಯಲ್ಲಿ ನಮ್ಮ ವೈಜ್ಞಾನಿಕ, ವೈಚಾರಿಕ, ಸತ್ಸಂಪ್ರದಾಯಗಳನ್ನು ಎಲ್ಲೋ ಒಂದು ಕಡೆ ಮರೆಮಾಚಿ ನಮ್ಮದಲ್ಲದ ಆಚರಣೆಗಳನ್ನು ಅನುಸರಿಸುತ್ತ, ಬೇಡದಾದ ನಡವಳಿಕೆಯತ್ತ ವಾಲುತ್ತಿದ್ದೇವೆ.
ಕ್ಯಾಲೆಂಡರ್ ವರ್ಷವನ್ನು ನಾವು ಅದ್ದೂರಿಯಾಗಿ ಸ್ವಾಗತಿಸುವ, ಆಚರಿಸುವ ಸಂದರ್ಭದಲ್ಲಿದ್ದೇವೆ. ಮೊದಲೇ ಹೇಳಿದಂತೆ ನಮ್ಮದು ಪ್ರಕೃತಿ ಧರ್ಮ. ಅದು ಚೈತ್ರ ಮಾಸದ ಪ್ರಕೃತಿಯೊಂದಿಗಿನ ಸಂಬಂಧದ ದ್ಯೋತಕವಾದ ಯುಗಾದಿ ನಮಗೆ ನೂತನ ವರ್ಷಾರಂಭ.
ಅಂದು ನಾವು ಸಂಭ್ರಮಿಸಬೇಕೆಂದು ಅದು ಹೇಳುತ್ತದೆ. ನಮ್ಮ ಪೂರ್ವಿಕರು ಆ ಬಗೆಗೆ ಮಾಹಿತಿ ನೀಡಿದ್ದಾರೆ., ಅದು ಸತ್ಯವೂ ಹೌದು. ಬದುಕಿನಲ್ಲಿ ಬರೀ ಖುಷಿ ಇಲ್ಲ, ಬದಲಿಗೆ ಅಲ್ಲಿ ಕಷ್ಟವೂ ಇದೆ. ಅದಕ್ಕಾಗಿ ಸಿಹಿ ಕಹಿಯ ಹೂರಣದ ಮಿಶ್ರಣ ಎಂದು.
ಕೆಲ ಹಬ್ಬಗಳ ಆಚರಣೆಗಳಲ್ಲಿ ಕೇವಲ ಬಾಹ್ಯವಾಗಿ ತಿನಿಸುಗಳನ್ನು ಉಂಡು- ತಿಂದು ಒಂದು ದಿನ ಸನ್ನಡತೆಯವರಾದರೆ ಸಾಕೇ…? ಪ್ರತಿದಿನ ನಮ್ಮ ವ್ಯಕ್ತಿತ್ವ ಸುಧಾರಣೆಯತ್ತ ಗಮನ ಹರಿಸುವ, ಒಳ್ಳೆಯ ವಿಚಾರಗಳ ಅನುಷ್ಠಾನಕ್ಕೆ ಮನಸ್ಸು ಮಾಡಬೇಕಿದೆ.
ಇದೊಂದು ಸಾಂಕೇತಿಕವಾದ ವರ್ಷಾರಂಭವಷ್ಟೇ. ಬನ್ನಿ ನಾವು ಪ್ರಕೃತಿ ಧರ್ಮ ಪಾಲನೆ ಮಾಡೋಣ. ಯಾಕೆಂದರೆ ಅಲ್ಲಿ ವಿಕಾರ ಇಲ್ಲ. ವಿಕಾಸ ಪ್ರಧಾನವಾದ ನಡೆಗೆ ಅವಕಾಶವಿದೆ. ಯಾಂತ್ರಿಕ ಆಚರಣೆಗೊಂದಿಷ್ಟು ಕಡಿವಾಣ ಹಾಕಿ ನಾಡು – ನುಡಿಯತ್ತ ಗಮನ ಹರಿಸಿ, ನಮ್ಮ ಸಂಸ್ಕೃತಿಯನ್ನ ವೈಭವಿಕರಿಸಿ, ಮುಂದಿನ ಪೀಳಿಗೆಗೆ ಸನ್ಮಾರ್ಗದ ಪಥವನ್ನ ಬಿಟ್ಟು ಹೋಗುವ ಸಂಕಲ್ಪ ಮಾಡಿ ನಡೆಯೋಣ.
