ನಂಜನಗೂಡು
ಮೇ 25ರಂದು ಪಟ್ಟಣದಲ್ಲಿ ನಡೆಯಲಿರುವ ಬಸವ ಜಯಂತಿಯ ಪ್ರಚಾರ ರಥಕ್ಕೆ ಮಲ್ಲನ ಮೂಲೆ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಸೋಮವಾರ ಮಠದ ಆವರಣದಿಂದ ಚಾಲನೆ ನೀಡಿದರು.
ಬಸವ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಅದ್ದೂರಿಯಾಗಿ ನಡೆಸಿ ಕೊಡುವಂತೆ ಶ್ರೀಗಳು ಕರೆ ನೀಡಿದರು.
ಪ್ರಚಾರ ರಥ ತಾಂಡವಪುರ ಗ್ರಾಮದ ಮೂಲಕ ಸುತ್ತೂರು ಸೇರಿ ನಂತರ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸಂಚರಿಸಲಿದೆ.
ಮೇ 25 ರಂದು ಬೆಳಗ್ಗೆ 8.30ಕ್ಕೆ ವಿವಿಧ ಕಲಾತಂಡಗಳು, ವಾದ್ಯಗೋಷ್ಠಿ, ಭಜನಾ ತಂಡ, ವೀರಗಾಸೆ, ನಂದಿಧ್ವಜ ಸೇರಿದಂತೆ ಬಸವ ಪುತ್ಥಳಿಯೊಂದಿಗೆ ಸಾಗಲಿರುವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11.30ಕ್ಕೆ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಸುತ್ತೂರು ಶ್ರೀ, ನವಿಲೂರು ಮಠಾಧ್ಯಕ್ಷರು ಹಾಗೂ ಶ್ರೀ ಚನ್ನಬಸವ ಮಹಾಸ್ವಾಮಿಗಳು ನಡೆಸಿ ಕೊಡಲಿದ್ದಾರೆ.
ತಾಲೂಕು ವೀರಶೈವ ಘಟಕದ ಅಧ್ಯಕ್ಷ ಸಿಂಧುವಳಿ ಕೆಂಪಣ್ಣ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ದರ್ಶನ್ ಧ್ರುವನಾರಾಯಣ್, ಶಾಸಕ ಗಣೇಶ್ಪ್ರಸಾದ್, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬಿ.ಹರ್ಷವರ್ಧನ್ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದಾರೆ ಎಂದರು.
ದಳಪತಿ ಮಹದೇವಪ್ಪ, ನಂಜಮಣಿ ಗುರುಮಲ್ಲಪ್ಪ, ಶಿವಪ್ಪ ದೇವರು, ಬದನವಾಳು ಮಹೇಶ್, ಹುಳಿಮಾವು ಪರಶಿವಮೂರ್ತಿ, ದುಗ್ಗಹಳ್ಳಿ ಶಿವನಾಗಪ್ಪ, ಮಹೇಶ್ ಕಡಜಟ್ಟಿ, ಸುಧಾ ಚಿಕ್ಕಮಾದಪ್ಪ, ಮಡಹಳ್ಳಿ ನಟರಾಜು, ಗುರು ಮಲ್ಲಪ್ಪ, ಮಹದೇವಸ್ವಾಮಿ, ರಾಜೇಂದ್ರ, ಕೋಮಲಾ, ಗುರು ಹಾಗೂ ಇತರ ಮುಖಂಡರು ಹಾಜರಿದ್ದರು.