ಬಾಗಲಕೋಟೆ
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸ ನೀಡಿದ ನಾಗರತ್ನಾ ಭಾವಿಕಟ್ಟಿ, ‘ಚಿತ್ತರಗಿಯ ಮಹಾಂತ ಶ್ರೀಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆ ಹಾಕಿ ಎಂಬ ಅಭಿಯಾನ ಪ್ರಾರಂಭಿಸಿದರು. ವ್ಯಸನಮುಕ್ತ ಸಮಾಜ ನಿರ್ಮಿಸುವ ಪಣತೊಟ್ಟು ಇಡೀ ಜೀವನ ಅದಕ್ಕಾಗಿ ಮುಡುಪಾಗಿಟ್ಟಿದ್ದರು’ ಎಂದು ಸ್ಮರಿಸಿಕೊಂಡರು.
ಸಾನಿಧ್ಯ ವಹಿಸಿದ್ದ ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ‘ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಹಾಗೂ ನೈತಿಕತೆಯ ಸುಂದರ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ವ್ಯಸನಮುಕ್ತರಾಗಬೇಕು. ದುಶ್ಚಟಗಳನ್ನು ಪ್ರಚೋದಿಸಲು ಪ್ರಖ್ಯಾತರು, ಸಿರಿವಂತರು ಹಾಗೂ ನಟರನ್ನು ಬಳಸಿಕೊಂಡು ಜಾಹೀರಾತುಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರು ಪ್ರಗತಿಯಾಗುತ್ತಾರೆ, ಸಾಮಾನ್ಯ ಜನರು ರೋಗಗ್ರಸ್ಥರಾಗಿ ದುರ್ಬಲರಾಗುತ್ತಾರೆ. ವಿದ್ಯಾರ್ಥಿಗಳು ದುಶ್ಚಟ ವಿರೋಧಿ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.
‘ದುಶ್ಚಟಗಳಿಂದಾಗುವ ದುಷ್ಪರಿಣಾಮ ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಅಮೆರಿಕದಲ್ಲಿ ಸಿಗರೇಟ್ ಸೇವನೆಯಿಂದ ರೋಗಗ್ರಸ್ಥರಾಗಿದ್ದನ್ನು ಜನರೇ ಗಮನಿಸಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದರಿಂದ ಐದು ಸಿಗರೇಟ್ ಕಂಪನಿಗಳು ಮುಚ್ಚಿವೆ. ನಮ್ಮಲ್ಲೂ ಬದಲಾವಣೆಯಾಗಬೇಕಿದೆ. ಮಹಾಂತ ಶಿವಯೋಗಿಗಳು ಜೀವನಪೂರ್ತಿ ದುಶ್ಚಟಗಳ ನಿರ್ಮೂಲನೆ ಅಭಿಯಾನ ನಡೆಸಿ ಲಕ್ಷಾಂತರ ಕುಟುಂಬಗಳನ್ನು ಕಾಪಾಡಿದ್ದಾರೆ’ ಎಂದು ಹೇಳಿದರು.
ಬಾಗಲಕೋಟೆ- ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರೂ ಮಹಾತ್ಮರ ವಚನಗಳನ್ನು ಹೇಳುತ್ತಾರೆ ಹೊರತು, ಅವುಗಳನ್ನು ಪಾಲಿಸುತ್ತಿಲ್ಲ. ಆದರ್ಶದ ಮಾತುಗಳನ್ನು ಹೇಳಿದರೆ ಸಾಲದು, ನಡೆದುಕೊಳ್ಳುವುದು ಮುಖ್ಯವಾಗಿದೆ’ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಸಿ. ಮಿರ್ಜಿ ಮಾತನಾಡಿದರು. ವ್ಯಸನಮುಕ್ತ ದಿನ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸಮಾರಂಭದಲಿ ಬಸವ ಪ್ರಸಾದ ಶ್ರೀ, ಸಂಗನಬಸವ ಶ್ರೀ, ಬಸವರಾಜ ಶ್ರೀಗಳು, ರಾಜ್ಯ ಮಾವು ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಜಿ.ಎಸ್.ಗೌಡರ ಮತ್ತಿತರರು ಉಪಸ್ಥಿತರಿದ್ದರು.