‘ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿರುವ ಬಸವ ಜಯಂತಿ ಹೆಮ್ಮೆಯ ವಿಷಯ’

ನ್ಯಾಮತಿ

ತಾಲೂಕು ಆಡಳಿತ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳಿಂದ ಬಸವ ಜಯಂತಿಯನ್ನು ಆಚರಿಸಲಾಯಿತು.

ಹರ್ಡೇಕರ್ ಮಂಜಪ್ಪ, ಮೃತ್ಯುಂಜಯ ಶ್ರೀ, ಜಯದೇವ ಮುರುಘರಾಜೇಂದ್ರ ಶ್ರೀಗಳ ಅಣತಿಯಂತೆ ದಾವಣಗೆರೆ ಶ್ರೀ ವಿರಕ್ತ ಮಠದಲ್ಲಿ 113 ವರ್ಷಗಳ ಹಿಂದೆ ಪ್ರಾರಂಭವಾದ ಬಸವ ಜಯಂತಿ ಆಚರಣೆ ನಮ್ಮ ನಾಡಿನಲ್ಲಿಯೇ ಅಷ್ಟೇ ಅಲ್ಲ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿದೆ.

ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ಅಂಚೆ ಇಲಾಖೆ ಅಂಚೆ ಚೀಟಿಯ ಮೇಲೆ, ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳ ಮೇಲೆ ಬಸವಣ್ಣನವರ ಭಾವಚಿತ್ರವನ್ನು ಮುದ್ರಿಸಿವೆ. ಹಾಗೂ ಭಾರತದ ಪಾರ್ಲಿಮೆಂಟ್ ನಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟಿನ ಮುಂದೆ ಬಸವಣ್ಣನವರ ಮೂರ್ತಿಯನ್ನು ಅನಾವರಣ ಮಾಡಿರುವುದು ಅವರ ವಿಚಾರಗಳಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಾಧ್ಯಾನತೆಯನ್ನು ಸೂಚಿಸುತ್ತದೆ ಎಂದು ಉಪನ್ಯಾಸ ನೀಡಿದ ಶಿಕ್ಷಕಿ ಜಯಶೀಲ ಗಂಗಾಧರ್ ನವಿಲೆ ತಿಳಿಸಿದರು.

ಪ್ರಪಂಚದ ಪ್ರಗತಿಪರ ರಾಷ್ಟ್ರಗಳನಿಸಿಕೊಂಡ ಇಂಗ್ಲೆಂಡ್ ಅಂತ ದೇಶಗಳು ಬಸವಣ್ಣನವರಿಂದ ಪ್ರಭಾವಿತರಾಗಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಮಾನವೀಯತೆ, ಸಮಾನತೆ ಆರ್ಥಿಕ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದಾರೆ, ಆ ಸಾಹಿತ್ಯದ ಮಹತ್ವ ಎಷ್ಟಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ಬಸವಣ್ಣ ಜನಿಸಿ ಒಂಬತ್ತು ಶತಮಾನಗಳು ಆಗುತ್ತಾ ಬಂದರೂ ಇಂದಿಗೂ ಸಹ ಮುಂದೆಯೂ ಅವರ ಜಯಂತೋತ್ಸವವನ್ನು ಆಚರಿಸುತ್ತಾರೆ. ಅದಕ್ಕೆ ಕಾರಣ ಬಸವಣ್ಣನವರು ನಮಗೆ ಕೊಟ್ಟ ಸತ್ಯ, ತ್ಯಾಗ, ಸಮಾನತೆ, ಭಾತೃತ್ವ ಮುಂತಾದ ಜೀವನ ಮೌಲ್ಯಗಳ ಪರಿಕಲ್ಪನೆ ಎಂದು ದಾವಣಗೆರೆ ಜಿಲ್ಲಾ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ರಂಗನಾಥ ಏ.ಕೆ. ತಿಳಿಸಿದರು.

ವಚನ ಸಾಹಿತ್ಯದ ಕೋಡುಗೆ ಅಪೂರ್ವವಾದದ್ದು. ಕನ್ನಡ ಸಾಹಿತ್ಯದಲ್ಲಿ ಏನಿದೆ ಎಂದು ಯಾರಾದರೂ ಕೇಳಿದರೆ ನೂರಾರು ಶರಣರು ಬರೆದ ವಚನ ಸಾಹಿತ್ಯದಂತ ಅಮೂಲ್ಯ ಕೊಡುಗೆ ಇದೆ ಎಂದು ಹೇಳಬಹುದು. ಕಲ್ಯಾಣ ಕ್ರಾಂತಿಯ ನಂತರ ಅನೇಕ ವಚನಗಳು ನಾಶವಾಗಿವೆ. ಕೊನೆಗೆ ವಚನಕಾರರು ತಮಗೆ ಅನುಕೂಲವಾದ ಕಡೆಗೆ ಪ್ರಯಾಣಿಸಿ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಇಂದು ಆ ಗದ್ದುಗೆಗಳು ದೇವಸ್ಥಾನಗಳಾಗಿ ಬದಲಾಗಿವೆ ಎಂದು ಹಿರಿಯ ಸಾಹಿತಿಗಳಾದ ಜೆ.ಎನ್. ಬಸವರಾಜಪ್ಪ ಅವರು ನುಡಿದರು.

ವಚನ ಸಾಹಿತ್ಯವನ್ನು ಓದಿದ ನಂತರ ಈ ಕ್ಷಣದಿಂದ, ಈ ದಿನದಿಂದ ವಚನಗಳ ಸಾರದಂತೆ ಉತ್ತಮರಾಗಲು ಸಾಧ್ಯವಾಗುತ್ತದೆ‌ ಎಂದು ತಾಲೂಕು ತಹಶೀಲ್ದಾರ್ ಆದ ಎಂ.ಪಿ. ಕವಿರಾಜ ನುಡಿದರು.

ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಲಿಂಗರಾಜ ಹವಳದ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಹೆಚ್. ಮಹೇಶ್ವರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ವಿಶಾಲ ಲಿಂಗರಾಜ್ ಪ್ರಾರ್ಥಿಸಿದರು. ಆರುಂಡಿ ನಾಗರಾಜ್ ಸ್ವಾಗತಿಸಿದರು, ಶಿಕ್ಷಕ ಎಸ್‌.ಜಿ. ಬಸವರಾಜಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಮಹಿಳಾ ಭಜನಾ ಮಂಡಳಿಯಿಂದ ವಚನ ಭಜನೆ ನಡೆಯಿತು. ಕುಮಾರಿ ದಿವ್ಯ ಸಾವಳಗಿ, ಆಕಾಶ್ ಅವರಿಂದ ವಚನಗಾಯನ ನಡೆಯಿತು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಸುರಹೊನ್ನೆ ಮತ್ತು ನ್ಯಾಮತಿಗಳಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia

Share This Article
Leave a comment

Leave a Reply

Your email address will not be published. Required fields are marked *