ರಾಯಚೂರು
ನಗರದ ಬಸವ ಕೇಂದ್ರದಲ್ಲಿ ಬಸವಾದಿ ಶರಣರಾದ ವೀರಘಂಟಿ ಮಡಿವಾಳ ಮಾಚಿದೇವರು ಹಾಗೂ ದೇವರ ದಾಸಿಮಯ್ಯನವರ ಸ್ಮರಣೊತ್ಸವ ಕಾರ್ಯಕ್ರಮ ನಡೆಯಿತು.
ಶರಣ ಡಾ. ಶಿವಕುಮಾರ ಮಾಟೂರ ಮಾತನಾಡಿ, ಮಡಿವಾಳ ಮಾಚಿದೇವರ ನಿಲುವು ಕಠೋರ. ಬಟ್ಟೆ ತೊಳೆಯುವ ಸತ್ಯ-ಶುದ್ಧ ಕಾಯಕ ಅವರದಾಗಿತ್ತು. ಈ ಕಾರಣದಿಂದಲೇ ಅವರು ನನ್ನಿಂದ ಎಲ್ಲರ ಬಟ್ಟೆಗಳನ್ನು ಕುರುಡರಂತೆ ತೊಳೆಯಲು ಸಾಧ್ಯವಿಲ್ಲ. ನನ್ನ ಕುಲವೃತ್ತಿಯ ಕೆಲವು ನಿಯಮ ನಿಬಂಧನೆಗಳಿವೆ ಎಂದು ತನ್ನ ಗುರು ಕಲಿದೇವರಿಗೆ ತಿಳಿಸಿದ್ದರಾಲ್ಲದೆ, ಭಕ್ತಿಪಥದಲ್ಲಿ ನಡೆಯುವ ಉತ್ತಮರ ವಸ್ತ್ರಗಳನ್ನು ಮಾತ್ರ ಒಗೆಯುವೆ.
ಕೊಲೆ -ಸುಲಿಗೆಖೋರರ ಬಟ್ಟೆ ತೊಳೆಯಲಾರೆ ಎಂದು ಧೈರ್ಯದಿಂದಲೇ ಹೇಳುತ್ತಿದ್ದರು. ಮಾಚಯ್ಯನವರು ಬಟ್ಟೆ ತೊಳೆಯುವ ಕಾಯಕದೊಂದಿಗೆ ಜನರ ಮೈಲಿಗೆಯನ್ನು ತೊಳೆದ ಮಹಾನ್ ಶರಣರಾಗಿದ್ದರು ಎಂದರು.
ಶರಣ ಬೆಟ್ಟಪ್ಪ ಕಸ್ತೂರಿ ಮಾತನಾಡಿ, ಶರಣನಾದವನು ದೇಹದ ಮೇಲಿನ ವ್ಯಾಮೋಹವನ್ನು ಸುಟ್ಟು, ಮನಸ್ಸಿನ ಲಜ್ಜೆಯನ್ನು ಮರೆತು, ಭಾವದಿಂದಾಗುವ ಭ್ರಮೆಯನ್ನು ಕುಟ್ಟಿ, ಹೊಟ್ಟು ಮಾಡಿ ಗಾಳಿಗೆ ತೂರಿ, ಸದ್ಬಕ್ತಿಯಿಂದ ನೈಜತೆಯನ್ನು ಅರಿತುಕೊಂಡು ಗುರು ಲಿಂಗ ಜಂಗಮರು ನಮ್ಮ ಮನೆ ಮತ್ತು ಮನದ ದೇವರಾಗಬೇಕು, ಇದೇ ಸದಾಚಾರವೆಂಬುದು ಮಡಿವಾಳ ಮಾಚಿದೇವರ ನಿಲುವಾಗಿತ್ತೆಂದು ಹೇಳಿದರು.
ಶರಣೆ ಮುಕ್ತಾ ಅಕ್ಕನವರು ಮಾತನಾಡಿ, ದೇವರ ದಾಸಿಮಯ್ಯನವರು ಅಪಾರ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆದು ಪ್ರಖರ ವೈಚಾರಿಕ ನೆಲೆಗಟ್ಟಿನ ಅಸದೃಶ್ಯ ವ್ಯಕ್ತಿತ್ವ ಹೊಂದಿದವರಾಗಿದ್ದರೆಂದರು.
ಸಿ. ಬಿ. ಪಾಟೀಲ, ಮಹಾದೇವಪ್ಪ ಏಗನೂರ, ಸುಮಂಗಲಾ ಹಿರೇಮಠ, ವೆಂಕಣ್ಣ ಆಶಾಪುರ ಮಾತಮಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರಾಚನಗೌಡ ಕೋಳೂರವರು, ಶರಣರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಬದುಕು ಸಾರ್ಥಕವೆಂದರು.
ವಚನಗಾಯನ ರಾಘವೇಂದ್ರ ಆಶಾಪುರ ಹಾಗೂ ಸಂಗಡಿಗರು ನಡೇಸಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ ಮಾಡಿಸಿದರು. ಬಸವರಾಜ ವಕೀಲರು ಸ್ವಾಗತಿಸಿದರು. ಎಸ್. ಶಂಕರಗೌಡರು ಪ್ರಾಸ್ತವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ನಾಗರಾಜ ಪಾಟೀಲ ವಂದಿಸಿದರು.