ಬೆಂಗಳೂರು ಸಮಾವೇಶದಲ್ಲಿ ಶಂಕರ ಬಿದರಿ ಅಜ್ಞಾನದ ಹೇಳಿಕೆಗೆ ಖಂಡನೆ
ಬೆಂಗಳೂರು
ರಾಷ್ಟ್ರೀಯ ಬಸವ ದಳದ ಬೆಂಗಳೂರು ಜಿಲ್ಲಾ ಸಮಾವೇಶ ರವಿವಾರ ನಡೆಯಿತು.
ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು:
೧) ‘ನಾನು ಲಿಂಗಾಯತ’ ಎಂಬ ಅಭಿಯಾನಕ್ಕೆ ಚಾಲನೆ ಕೊಡುವುದು:
ಲಿಂಗಾಯತ ಎಂದರೆ ಏನು? ಲಿಂಗಾಯತ ಧರ್ಮದ ಅರಿವನ್ನು ಎಲ್ಲ ಲಿಂಗಾಯತರಿಗೆ ಹಾಗೂ ಎಲ್ಲ ವರ್ಗದ ಶರಣರಿಗೆ ಸ್ಪಷ್ಟಪಡಿಸುವದು.
ಲಿಂಗಾಯತರ ಅಸ್ಮಿತೆಯಾಗಿರುವ ಧರ್ಮಪಿತ ಗುರುಬಸವಣ್ಣನವರ ಕಲ್ಯಾಣ ಕ್ರಾಂತಿ ಹಾಗೂ ಶರಣರ ತ್ಯಾಗ ಬಲಿದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು ಹಾಗೂ ಅಭಿಮಾನವನ್ನು ಹೆಚ್ಚಿಸುವದು ಅಭಿಯಾನದ ಮೂಲ ಉದ್ದೇಶ. ಬರುವ ಗುರುಬಸವ ಜಯಂತಿಯಂದು ಇದಕ್ಕೆ ಚಾಲನೆ ಕೊಡುವುದು.

೨) ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಗುರುಬಸವ ಜಯಂತಿಯನ್ನು ಆಚರಿಸುವದು:
ಬೃಹತ್ತಾಗಿ ಬೆಳೆದಿರುವ ಬೆಂಗಳೂರು ಮಹಾನಗರದ ಎಲ್ಲ ಬಡವಣೆಗಳಲ್ಲಿ ಎಲ್ಲಾ ಜಾತಿ ವರ್ಗದವರನ್ನು ಸೇರಿಸಿಕೊಂಡು ಗುರುಬಸವ ಜಯಂತಿಯನ್ನು ಆಚರಿಸುವದು ಹಾಗೂ ನಾವೆಲ್ಲರೂ ಒಂದೇ ಎನ್ನುವ ಸಮಾನತಾ ಭಾವವನ್ನು ಹೆಚ್ಚಿಸುವ ಕಾರ್ಯಗಳನ್ನು ಹಮ್ಮಿಕೊಳ್ಳವದು.
೩) ಶಂಕರ ಬಿದರಿಯವರ ಹೇಳಿಕೆಗೆ ತೀವ್ರ ಖಂಡನೆ
ಐಪಿಎಸ್ ಅಧಿಕಾರಿಗಳಾಗಿ ನಿವೃತ್ತಿ ಹೊಂದಿರುವ ಅ.ಭಾ.ವೀ.ಲಿಂ. ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿಯವರ ಧಾರ್ಮಿಕ ಅಜ್ಞಾನದ ಹೇಳಿಕೆಗೆ ರಾಷ್ಟ್ರೀಯ ಬಸವ ದಳ ತೀವ್ರವಾಗಿ ಖಂಡಿಸುತ್ತದೆ. ಪರಮಪೂಜ್ಯ ಮಾತಾಜಿಯವರು ಯಾವಾಗಲು ಹೇಳುತ್ತಿದ್ದರು, ಏನೆಂದರೆ – ” ಕರ್ನಾಟಕದಲ್ಲಿ ವೀರಶೈವ ಎಂದು ಹೇಳಿಕೊಳ್ಳುವವರೆಲ್ಲ ಲಿಂಗಾಯತರು. ಲಿಂಗವನ್ನು ಕಟ್ಟಿಕೊಡಿರುವವರೆಲ್ಲ ಲಿಂಗಾಯತರು ಆದರೆ ಧಾರ್ಮಿಕ ಜ್ಞಾನದ ಕೊರತೆಯಿಂದ ಕೆಲವರು ನಾವು ವೀರಶೈವರು ಎಂದು ಹೇಳಿಕೊಳ್ಳುತ್ತಿದ್ದಾರೆ”. ರೇಣುಕಾಚಾರ್ಯ ಇತಿಹಾಸವಿಲ್ಲದ ಕಾಲ್ಪನಿಕ ಗುರು ಹಾಗೂ ಸಿದ್ದಾಂತಶಿಖಾಮಣಿ ಕಪೋಲಕಲ್ಪಿತ ಗ್ರಂಥ. ಹೀಗಾಗಿ ನಾವೆಲ್ಲರೂ ಒಂದೇ ಆದರೆ ಎಲ್ಲರೂ ಲಿಂಗಾಯತರೇ ಹೊರತು ವೀರಶೈವರಲ್ಲ.

೪) ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ರಾಷ್ಟ್ರೀಯ ಬಸವ ದಳ ಸ್ಥಾಪನೆ:
ಬೆಂಗಳೂರನ್ನು ಸಂಪೂರ್ಣ ಬಸವಮಯ ಮಾಡುವ ಉದ್ದೇಶದಿಂದ ಸುಮಾರು ೨೫ ಬಡಾವಣೆಗಳಿಗೆ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು ಹಾಗು ಪದಾಧಿಕಾರಿಗಳ ಆಯ್ಕೆಯೊಂದಿಗೆ ಘಟಕಗಳನ್ನು ರಚಿಸಲಾಯಿತು. ಬರುವ ಗುರುಬಸವ ಜಯಂತಿಯಂದು ವಿದ್ಯುಕ್ತವಾಗಿ ಇವಕ್ಕೆ ಚಾಲನೆಯನ್ನು ಕೊಡಲಾಗುವದು.

ಸಮಾವೇಶದಲ್ಲಿ ಪೂಜ್ಯ ಬಸವರತ್ನ ಮಾತಾಜಿ, ಬಸವಯೋಗಿ ಸ್ವಾಮೀಜಿ, ಲಾವಣ್ಯವತಿ ಮಾತಾಜಿ, ಕೇಂದ್ರ ಸಮಿತಿ ರಾಷ್ಟ್ರೀಯ ಬಸವದಳ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಲಿಂಗಾಯತ, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ವೀರೇಶಪ್ಪ, ಪ್ರಕಾಶ ಜೀರಗೆ, ರಾಷ್ಟ್ರೀಯ ಬಸವದಳ, ಲಿಂಗಾಯತಧರ್ಮ ಮಹಾಸಭಾ, ಬಸವತತ್ವಪರ ಸಂಘಟನೆಗಳ ಒಕ್ಕೂಟದ ನೂರಾರು ಸದಸ್ಯರು ಹಾಜರಿದ್ದರು.