ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಭದ್ರಾವತಿ

ಪಟ್ಟಣದ ಬಸವ ಮಂಟಪದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಸವದಳದ ಶಿವಮೊಗ್ಗ ಜಿಲ್ಲಾ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಬೆಳಿಗ್ಗೆ 4:30 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಅನುಸಂಧಾನ, ವಿಶ್ವಗುರು ಬಸವೇಶ್ವರ ಪೂಜಾ ವಚನ ಅನುಷ್ಠಾನ, ಜಂಗಮಸೇವೆ ಕಾರ್ಯಕ್ರಮಗಳು ಪೂಜ್ಯ ಬಸವಯೋಗಿ ಮಹಾಸ್ವಾಮಿಗಳು, ಎನ್. ಚಂದ್ರಮೌಳಿ, ಶರಣಪ್ಪ ಮತ್ತು ಗಂಗಾವತಿ ಹಾಗೂ ಭದ್ರಾವತಿಯ ಶರಣ ಶರಣೆಯರ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ದೇವವಾರದ ಸಾಮೂಹಿಕ ಪ್ರಾರ್ಥನೆಯ ನಂತರ ಪೂಜ್ಯ ಗಂಗಾ ಮಾತಾಜಿ ಅವರು ಬಸವ ಧ್ವಜಾರೋಹಣ ಮಾಡುವ ಮೂಲಕ ಸಮಾವೇಶ ಪ್ರಾರಂಭಗೊಂಡಿತು. ರಾಜ್ಯ ಅಧ್ಯಕ್ಷ ಕೆ. ವೀರೇಶಕುಮಾರ ಇವರು ಪ್ರಾಸ್ತಾವಿಕವಾಗಿ ಚಿಂತನೆ ಮಾಡಿದರು.

ಸಮಸ್ತ ಬಸವತತ್ವಪರ ಸಂಘಟನೆಗಳು ಸಂಘಟಿತರಾಗಿ ಒಗ್ಗಟ್ಟಿನಿಂದ ಬಸವತತ್ವ ಅನುಷ್ಠಾನ, ಪ್ರಚಾರ ಹಾಗೂ ಸಂಘಟನೆಯಲ್ಲಿ ಭಾಗಿಯಾದರೆ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ (ಸ್ವತಂತ್ರ ಧರ್ಮ) ಮನ್ನಣೆ ಪಡೆಯಬಹುದು ಎಂದು ಡಾ. ಗಂಗಾದೇವಿ ಮಾತಾಜಿ ಹೇಳಿದರು.

ಎನ್. ಚಂದ್ರಮೌಳಿ ಮಾತನಾಡಿ ಲಿಂಗಾಯತ ಧರ್ಮಿಯರನ್ನು ವಿಶ್ವಗುರು ಬಸವೇಶ್ವರ ಪೂಜಾವೃತ ಅನುಷ್ಠಾನ ಆಚರಿಸುವಂತೆ ಮಾರ್ಗದರ್ಶನ ನೀಡಿದರೆ, ಸತ್ಯನಾರಾಯಣ ಪೂಜಾವ್ರತ, ವರಮಹಾಲಕ್ಷ್ಮಿ ವ್ರತಗಳಿಂದ ಜನ ದೂರ ಸರಿಯುತ್ತಾರೆ ಎಂದು ಹೇಳಿದರು.

ಕೆ. ವೀರೇಶಕುಮಾರ ಇಷ್ಟಲಿಂಗ ಯೋಗ ಅನುಸಂಧಾನ, ವಚನ ಪಠಣ, ಸಾಮೂಹಿಕ ಪ್ರಾರ್ಥನೆಗಳು, ಬಸವ ಮಂಟಪಗಳ ನಿರ್ಮಾಣ ಮಾಡುವ ಮೂಲಕ ಲಿಂಗಾಯತ ಧರ್ಮೀಯರನ್ನು ಜಾಗೃತಗೊಳಿಸಬೇಕಾಗಿದೆ ಎಂದರು.

ಕೆ. ಬಸವರಾಜಪ್ಪ ಮಾತನಾಡಿ, ತರೀಕೆರೆಯ ಅಕ್ಕನಾಗಮ್ಮ ತಾಯಿ ಅವರ ಗದ್ದುಗೆ, ಬಳ್ಳಿಗಾವಿಯ ಅಲ್ಲಮಪ್ರಭುದೇವರ ಗದ್ದುಗೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನಡೆಸುತ್ತಿರುವ ಪ್ರಯತ್ನದ ಬಗ್ಗೆ ವಿವರಿಸಿದರು.

ಭಾಗವಹಿಸಿದ್ದ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭೆ, ಕದಳಿ ವೇದಿಕೆ ಸದಸ್ಯರು ಸಹ ಚಿಂತನೆ ನಡೆಸಿ, ವಿಶ್ವಗುರು ಬಸವಣ್ಣನವರ ತತ್ವ ಪ್ರಚಾರದಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ತಾಯಿಯವರಿಂದ ಪ್ರಭಾವಿತರಾಗಿ ಬಸವ ತತ್ವ ಪ್ರಚಾರ, ಅನುಷ್ಠಾನ, ಸಂಘಟನೆ ಮಾಡುತ್ತಿರುವುದಾಗಿ ಹೇಳಿದರು.

ಮಹಾಲಿಂಗಪ್ಪ ಮಾತನಾಡುತ್ತಾ, ಭಕ್ತಿ, ಶ್ರದ್ಧೆ, ದಾಸೋಹತತ್ವದ ಮೂಲಕ ಪ್ರೀತಿಯಿಂದ ಸಮಸ್ತ ಬಸವ ತತ್ವಪರ ಸಂಘಟನೆಗಳನ್ನು ಒಂದು ಮಾಡೋಣ ಎಂದರು.

ಮಧ್ಯಾಹ್ನ 3 ಗಂಟೆಗೆ ಎರಡನೇ ಸಭೆ ಪ್ರಾರಂಭಗೊಂಡು, ಪೂಜ್ಯ ಮಾತಾಜಿಯವರು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಮಾಡಿದ್ದನ್ನು ಘೋಷಿಸಿದರು.

ನಂತರ ಪೂಜ್ಯ ಬಸವಯೋಗಿ ಮಹಾಸ್ವಾಮಿಗಳು ಸಂಘಟನೆಯ ಮಹತ್ವಗಳ ಬಗ್ಗೆ ಚಿಂತನೆ ಮಾಡುತ್ತಾ, ಸಭೆ ತೆಗೆದುಕೊಂಡ ನಿರ್ಣಯಗಳನ್ನು ಸಭೆಗೆ ವಿವರಿಸಿದರು.

1) ರಾಷ್ಟ್ರೀಯ ಬಸವದಳದ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಿ ಅವರಿಗೆ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.

2) ವಿವಿಧ ಬಸವ ತತ್ವಪರ ಸಂಘಟನೆಗಳ ಸಂಯೋಗದೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಮಟ್ಟದಲ್ಲಿ ವಚನ ಸಾಹಿತ್ಯದ ಪ್ರಚಾರ, ಅನುಷ್ಠಾನ ಹಾಗೂ ಸಾಮೂಹಿಕ ಪ್ರಾರ್ಥನೆಗಳ ಸಂಘಟನೆ ಮಾಡುವುದು.

3) ಆಗಸ್ಟ್ ಮೂರರಂದು ಬೆಂಗಳೂರು ರಾಜಾಜಿನಗರದಲ್ಲಿರುವ ಬಸವ ಮಂಟಪದ ಸುವರ್ಣ ಮಹೋತ್ಸವದಲ್ಲಿ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲು ಕರೆ.

4) ವರ್ಷ 2026ರಲ್ಲಿ ನಡೆಯುವ ಜನಗಣತಿಯಲ್ಲಿ, ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಲು ಜನಜಾಗೃತಿ ಅಭಿಯಾನ ಆಯೋಜನೆ.

5) ತೆಲಂಗಾಣ ರಾಷ್ಟ್ರೀಯ ಬಸವದಳ ಘಟಕದಿಂದ, ಆಗಸ್ಟ್ 31 ವಾರಣಾಸಿಯಲ್ಲಿ ಆಯೋಜಿಸಿರುವ ಬಸವಧರ್ಮ ಸಮಾವೇಶದಲ್ಲಿ ಭಾಗವಹಿಸಲು ಕರೆ.

6) ಸಪ್ಟೆಂಬರ್ 2025 ರಲ್ಲಿ ನಡೆಯುವ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಬಸವಧರ್ಮ ಪೀಠ ಹಾಗೂ ರಾಷ್ಟ್ರೀಯ ಬಸವದಳ ಸಂಘಟನೆಗಳು ಪೂರ್ಣಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವದು.

ಪುಟ್ಟ ಮಕ್ಕಳಿಂದ ವಚನಗಾಯನ ನಡೆಯಿತು. ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ನಡೆಯಿತು.

ಸುಮಾ ಸುನೀಲ ಕಾರ್ಯಕ್ರಮ ನಿರೂಪಿಸಿದರು. ವಿಜಯ ನಾಗರಾಜ ವಂದನಾರ್ಪಣೆ ಮಾಡಿದರು. ಜಯಘೋಷಗಳೊಂದಿಗೆ ಕಾರ್ಯಕರ್ತರ ಸಮಾವೇಶ ಮಂಗಳಗೊಂಡಿತು. ಎಲ್ಲರಿಗೂ ಪ್ರಸಾದ ಸೇವೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *