ರೇಣುಕಾಚಾರ್ಯರು ವೀರಶೈವ ಕೃತಿಗಳು ಸೃಷ್ಟಿಸಿದ ಕಲ್ಪನೆ

ಪಂಚಾಚಾರ್ಯರ ಪ್ರಭಾವವನ್ನು ಬೆಳೆಸಲು 16ನೇ ಶತಮಾನದ ನಂತರ ವೀರಶೈವ ಕೃತಿಗಳು ರೇಣುಕಾಚಾರ್ಯರ ಕಲ್ಪಿತ ಪಾತ್ರವನ್ನು ಸೃಷ್ಟಿಸಿದವು

ಕಲಬುರಗಿ

(ಕಲಬುರಗಿ ನಗರದ ಮುಖ್ಯ ರಸ್ತೆಗೆ ರೇಣುಕಾಚಾರ್ಯರ ಹೆಸರನ್ನು ಇಡಲು ಬಂದಿರುವ ಪ್ರಸ್ತಾವನೆಯನ್ನು ಬಸವ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.

ಕಲ್ಪಿತ ವ್ಯಕ್ತಿ ರೇಣುಕಾಚಾರ್ಯರ ಬದಲು ಐತಿಹಾಸಿಕ ಬಸವಾದಿ ಶರಣರ ಹೆಸರಿಡಬೇಕೆನ್ನುವುದು ಅವರ ವಾದ.

ರೇಣುಕಾಚಾರ್ಯರ ಕಲ್ಪನೆಯ ಮೇಲೆ ಡಾ. ಎಂ. ಎಂ. ಕಲ್ಬುರ್ಗಿಯವರ ಸಂಶೋಧನೆಯ ಆಧಾರದ ಮೇಲೆ ಈ 7 ಪ್ರಶ್ನೆ ಉತ್ತರಗಳನ್ನು ಸಿದ್ದಪಡಿಸಲಾಗಿದೆ.)

1) ರೇಣುಕಾಚಾರ್ಯರು ಯಾರು?

ಪಂಚಾಚಾರ್ಯರಲ್ಲಿ ಬಹಳ ಪ್ರಮುಖವಾದ ಆಚಾರ್ಯರು ರೇಣುಕಾಚಾರ್ಯರು. ವೀರಶೈವ ಕೃತಿಗಳ ಪ್ರಕಾರ ಇವರು ಪ್ರಭಾವಶಾಲಿಯಾದ ರಂಭಾಪುರಿ ಪೀಠದ ಸಂಸ್ಥಾಪಕರು.

ಕೃತಯುಗದಲ್ಲಿ ಅವರು ಏಕೋತ್ತರಸ್ಥಲವನ್ನು ಅಗಸ್ತ್ಯಮುನಿಗೆ ಬೋಧಿಸಿದರು ಎಂದು ವೀರಶೈವರ ಪ್ರಮುಖ ಗ್ರಂಥ ಸಿದ್ಧಾಂತ ಶಿಖಾಮಣಿ ಹೇಳುತ್ತದೆ.

2) ಇವರು ಕಾಲ್ಪನಿಕ ಎನ್ನಲು ಕಾರಣವೇನು?

ಪಂಚಾಚಾರ್ಯರು ಲಿಂಗದಿಂದ ಉದ್ಭವಿಸಿದರು ಅನ್ನುವುದು ಬೆಟ್ಟದ ಗಾತ್ರದ ರಾಕ್ಷಸರಿದ್ದರು ಅನ್ನುವಂತಹ ಪುರಾಣದ ಕತೆಯಷ್ಟೇ. ಕಲಿಯುಗದಲ್ಲಾಗಲಿ ಕೃತಯುಗದಲ್ಲಾಗಲಿ ಲಿಂಗದಿಂದ ಯಾರಾದರೂ ಉದ್ಭವಿಸಿದರು ಎಂದರೆ ಅದೊಂದು ಆಧಾರರಹಿತ ಧಾರ್ಮಿಕ ನಂಬಿಕೆಯಷ್ಟೇ.

ಪಂಚಾಚಾರ್ಯರು ವೀರಶೈವ ಕೃತಿಗಳ ಶುದ್ಧ ಕಲ್ಪನೆ. 16ನೇ ಶತಮಾನವರೆಗೆ ಎಲ್ಲೂ ಯಾವ ಪಂಚಾಚಾರ್ಯರ ಉಲ್ಲೇಖವಿಲ್ಲ. ಈಗಿರುವ ಐವರಲ್ಲಿ ನಾಲ್ಕು ಆಚಾರ್ಯರು ವೀರಶೈವಾಮೃತ ಮಹಾಪುರಾಣದಲ್ಲಿ (ಕ್ರಿ. ಶ. 1530) ಮೊದಲ ಬಾರಿ ಕಾಣಿಸಿಕೊಳ್ಳುತ್ತಾರೆ.

ಪಂಚಾಚಾರ್ಯರು ಸ್ಥಾವರ ಲಿಂಗದಿಂದ ಮೊದಲು ಉದ್ಭವಿಸುವುದು ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1698). ರೇವಣಾಚಾರ್ಯರ ಲಿಂಗೋದ್ಬವದ ಚಿತ್ರಗಳು ಮೊದಲು ೧೯ನೇ ಶತಮಾನದ ಪುಸ್ತಕಗಳಲ್ಲಿ ಪ್ರಕಟವಾಗಿ, ನಂತರ ವಿಗ್ರಹಗಳಾದವು.

3) ವೀರಶೈವರ ಪ್ರಮುಖ ಗ್ರಂಥ ಸಿದ್ಧಾಂತ ಶಿಖಾಮಣಿಯಲ್ಲಿ ಇವರ ವಿವರಗಳಿವೆಯಲ್ಲ?

ರೇಣುಕಾಚಾರ್ಯರು ಪುರಾಣದ ಅಗಸ್ತ್ಯನಷ್ಟು ಪ್ರಾಚೀನರು ಎಂದು ಹೇಳುವ ವೀರಶೈವ ಕೃತಿ ‘ಸಿದ್ಧಾಂತ ಶಿಖಾಮಣಿ’ ರಚನೆಯಾಗಿದ್ದು 16ನೇ ಶತಮಾನದಲ್ಲಿ. ಅದರ ಕರ್ತೃ ಶಿವಯೋಗಿ ಶಿವಾಚಾರ್ಯ ಒಬ್ಬ ಕಾಲ್ಪನಿಕ ವ್ಯಕ್ತಿ (ಯಾರೋ ಬರೆದು ‘ಶಿವಯೋಗಿ ಶಿವಾಚಾರ್ಯ’ ಹೆಸರಿನಲ್ಲಿ ಪ್ರಕಟಿಸಿದರು.)

ಶರಣರ ವಚನಗಳು ಸೇರಿದಂತೆ 16ನೇ ಶತಮಾನದವರೆಗೆ ಬರುವ ಯಾವ ಕೃತಿಯಲ್ಲೂ ಸಿದ್ಧಾಂತ ಶಿಖಾಮಣಿ ಅಥವಾ ಶಿವಯೋಗಿ ಶಿವಾಚಾರ್ಯನ ಪ್ರಸ್ತಾಪವೇ ಕಾಣಿಸುವುದಿಲ್ಲ.

4) ರೇಣುಕಾಚಾರ್ಯರ ಮೇಲೆ ಶಾಸನಗಳ ಆಧಾರವಿದೆಯೇ?

ವೀರಶೈವ ಕೃತಿಗಳ ಪ್ರಕಾರ ಆಂಧ್ರಪ್ರದೇಶದ ಕೊಲ್ಲಿಪಾಕೆಯ ಸೋಮೇಶ್ವರ ಲಿಂಗದಲ್ಲಿ ರೇಣುಕಾಚಾರ್ಯರು ಉದ್ಬವಿಸಿದರು. ಕೃತಯುಗದಲ್ಲಿ ಏಕೋತ್ತರಸ್ಥಲವನ್ನು ಅಗಸ್ತ್ಯ ಮುನಿಗೆ ಭೋದಿಸಿದರು.

ಕೊಲ್ಲಿಪಾಕೆಯಲ್ಲಿ ೩೬ ಕನ್ನಡ ಶಾಸನಗಳು ಸಿಕ್ಕಿವೆ. ಅವುಗಳಲ್ಲಿ ಅಲ್ಲಿನ ಜೈನ, ವೈಷ್ಣವ, ಶೈವ ಧರ್ಮಗಳ ವಿವರಣೆಯಿದೆ. ಯಾವುದರಲ್ಲೂ ಪಂಚಾಚಾರ್ಯರ ಅಥವಾ ರೇಣುಕಾಚಾರ್ಯರ ಉಲ್ಲೇಖವಿಲ್ಲ.

ಶಾಸನಗಳ ಪ್ರಕಾರ ಸೋಮೇಶ್ವರ ದೇವಸ್ಥಾನ ನಿರ್ಮಾಣವಾಗಿದ್ದೇ ೧೧ನೇ ಶತಮಾನದಲ್ಲಿ. ಆದರೆ ಅಲ್ಲಿನ ಲಿಂಗದಿಂದ ಉದ್ಭವಿಸಿದ ರೇಣುಕಾಚಾರ್ಯರ ಕಾಲವನ್ನು ವೀರಶೈವ ಕೃತಿಗಳು ಕೃತ ಯುಗಕ್ಕೆ ಎಳೆಯುತ್ತವೆ.

5) ರೇಣುಕಾಚಾರ್ಯರ ಕಲ್ಪನೆ ಹುಟ್ಟಿದ್ದು ಹೇಗೆ?

ಕಾಳಾಮುಖ, ಪಾಶುಪತಗಳಂತಹ ಬಸವ ಪೂರ್ವ ಶೈವ ಪಂಥಗಳು ಶರಣರಲ್ಲಿ ಲೀನವಾದರೂ ಕೆಲವೆಡೆ ಪ್ರತ್ಯೇಕವಾಗಿಯೇ ಉಳಿದುಕೊಂಡಿದ್ದವು. ಈ ಪರಂಪರೆಗಳನ್ನು ವಶಪಡಿಸಿಕೊಳ್ಳಲು ವೀರಶೈವರು ಅವುಗಳ ಇತಿಹಾಸ ಬದಲಿಸಿ ಹೊಸ ಪುರಾಣ ಜೋಡಿಸಿದರು.

ಆ ಕಾಲದಲ್ಲಿ ಪ್ರಸಿದ್ಧ ನಾಥ ಗುರು ರೇವಣಸಿದ್ದರ ಪಂಥ ಪ್ರತ್ಯೇಕವಾಗಿ ಉಳಿದಿತ್ತು. ಕರ್ನಾಟಕ, ಮಹಾರಾಷ್ಟ್ರದ ಭಾಗಗಳಲ್ಲಿ ಅಪಾರ ಭಕ್ತರಿದ್ದ ಈ ಪಂಥವನ್ನು ವಶಪಡಿಸಿಕೊಳ್ಳಲು ವೀರಶೈವರು ರೇಣುಕಾಚಾರ್ಯರ ಕಲ್ಪನೆ ಸೃಷ್ಟಿಸಿದರು.

6) ರೇವಣಸಿದ್ದರು ಯಾರು?

ಕುರುಬ ಕುಟುಂಬದಲ್ಲಿ ಜನಿಸಿದ ರೇವಣ ಸಿದ್ದರು ಪ್ರಖ್ಯಾತ ನಾಥ ಗುರುಗಳಾಗಿದ್ದರು.
ದೀರ್ಘಾಯುಷಿಯಾಗಿದ್ದ ಇವರು ಬಸವಣ್ಣನವರಿಗಿಂತ ಮುಂಚೆ ಹುಟ್ಟಿ ಕಲ್ಯಾಣ ಕ್ರಾಂತಿಯ ಕೊನೆಯವರೆಗೆ ಬದುಕಿದ್ದರು.

ಇವರಂತೆಯೇ ಕುರುಬ ಸಮಾಜದಿಂದ ಬಂದು ನಾಥ ಗುರುವಾಗಿದ್ದ ಸಿದ್ದರಾಮರು ಇವರ ಕಿರಿಯರು. ಬಸವಣ್ಣನವರು ಕಟ್ಟಿದ ಶರಣ ಚಳುವಳಿಯಲ್ಲಿ ಸಿದ್ದರಾಮರು ತಮ್ಮ ಭಕ್ತರ ಜೊತೆ ಸೇರಿಕೊಂಡರು. ಆದರೆ ಅವರಿಬ್ಬರ ಹಿಂದಿನ ತಲೆಮಾರಿನ ರೇವಣಸಿದ್ದರು ನಾಥರಾಗಿಯೇ ಉಳಿದುಕೊಂಡರು.

7) ರೇವಣಸಿದ್ದರು ರೇಣುಕಾಚಾರ್ಯರಾಗಿದ್ದು ಹೇಗೆ?

೧೩ನೇ ಶತಮಾನದ ನಂತರ ಮುನ್ನೂರು ವರ್ಷ ರೇವಣಸಿದ್ದರ ಮೇಲೆ ಯಾವುದೇ ಕೃತಿ ರಚನೆಯಾಗಲಿಲ್ಲ. ನಂತರ ಬಂದ ವೀರಶೈವ ಕೃತಿಗಳಲ್ಲಿ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡರು.

ವೀರಶೈವ ಮಹಾಪುರಾಣ (೧೫೩೦) ಅವರನ್ನು ಮೊದಲ ಬಾರಿಗೆ ಆಚಾರ್ಯರನ್ನಾಗಿ ಚಿತ್ರಿಸಿತು. ಗುರುರಾಜ ಚಾರಿತ್ರ, ಚತುರಾಚಾರ್ಯ ಪುರಾಣ ಕಾವ್ಯಗಳೂ ಅದೇ ಕಲ್ಪನೆಯನ್ನು ಮುಂದುವರೆಸಿದವು.

ರೇವಣಸಿದ್ದೇಶ್ವರ ಕಾವ್ಯ, ರೇವಣಸಿದ್ದೇಶ್ವರ ಪುರಾಣಗಳಂತಹ ವೀರಶೈವ ಕೃತಿಗಳಲ್ಲಿ ಅವರೇ ಕಥಾನಾಯಕರಾದರು. ನಿಧಾನವಾಗಿ ರೇವಣಸಿದ್ಧರು ರೇವಣಾಚಾರ್ಯ, ರೇಣುಕಾಚಾರ್ಯರಾಗಿ ಬದಲಾದರು.

ಕೊಲ್ಲಿಪಾಕೆಯ ಸೋಮೇಶ್ವರ ಲಿಂಗದಿಂದ ‘ಉದ್ಬವಿಸಿ’ ಪಂಚಾಚಾರ್ಯರಾದರು. ಕೆಳದಿ ಸಾಮ್ರಾಜ್ಯದ ಬಾಳೇಹಳ್ಳಿಯ ರಂಭಾಪುರಿ ಪೀಠದ ಸಂಸ್ಥಾಪಕರಾಗಿಯೂ ಬಿಂಬಿತರಾದರು.

ಶರಣರಿಂದ ದೂರವಿದ್ದ ರೇವಣಸಿದ್ಧರಿಗೆ ಇಷ್ಟಲಿಂಗ ಹಿಡಿಸಲಾಯಿತು. ಷಟ್ಸ್ಥಲದ ಮತ್ತೊಂದು ರೂಪವಾದ ಏಕೋತ್ತರಸ್ಥಲವನ್ನು ಅವರೇ ಅಗಸ್ತ್ಯ ಮುನಿಗೆ ಬೋಧಿಸಿದರು ಎಂಬ ಪುರಾಣವೂ ಸೃಷ್ಟಿಯಾಯಿತು.

೧೨ನೇ ಶತಮಾನದಲ್ಲಿ ಬದುಕಿದ್ದ ಅವರ ಕಾಲ ಕೃತಯುಗದಷ್ಟು ಹಿಂದಕ್ಕೆ ಒಯ್ಯಲಾಯಿತು. ನಾಥ ಸಿದ್ದರಾಗಿ ಜೀವಿಸಿದ್ದ ಅವರು ವೀರಶೈವ ಧರ್ಮವನ್ನು ಅಗಸ್ತ್ಯರಿಗೆ ಭೋದಿಸಿದರೆಂಬ ಕಲ್ಪನೆಯೂ ಸೃಷ್ಟಿಯಾಯಿತು.

ರೇವಣಸಿದ್ದರಿಗೆ ಪುರಾಣ ಕಟ್ಟುವ ಪ್ರಯತ್ನ ವೈದಿಕ ಕವಿ ಹರಿಹರನಿಂದಲೇ ಶುರುವಾಗಿತ್ತು. ಸ್ಥಾವರ ಲಿಂಗದಿಂದ ಉದ್ಭವ, ಮೂರು ಕೋಟಿ ಲಿಂಗದ ಸ್ಥಾಪನೆಯಂತಹ ಕಥೆಗಳನ್ನು ಹೆಣೆದಿದ್ದೂ ಅವನೇ. ವೀರಶೈವ ಕವಿಗಳು ಆ ಕಥೆಗಳನ್ನೇ ಬಳಸಿಕೊಂಡರು.

ರೇವಣಸಿದ್ದರು ರೇವಣಾಚಾರ್ಯ ಅಥವಾ ರೇಣುಕಾಚಾರ್ಯರಾಗಿ ಬದಲಾಗಿದ್ದು ಇತಿಹಾಸದ ಮೈಲುಗಲ್ಲುಗಳಲ್ಲಿ ಒಂದು.

8) ರಂಭಾಪುರಿ ಪೀಠವನ್ನು ರೇಣುಕಾಚಾರ್ಯರು ಸ್ಥಾಪಿಸಿದರೆ?

ಬಾಳೆಹೊನ್ನೂರಿನ ರಂಭಾಪುರಿ ಪೀಠ ಸ್ಥಾಪನೆಯಾಗಿದ್ದು ೧೫ನೇ ಶತಮಾನದಲ್ಲಿ. ಮೂಲತಃ ವೀರಭದ್ರ ಭಕ್ತಿಯ ನಾಥ ಪಂಥಕ್ಕೆ ಸೇರಿದ್ದ ಈ ಪೀಠ ಕ್ರಮೇಣ ಪಂಚಾಚಾರ್ಯ ಪರಂಪರೆಗೆ ಸೇರಿಕೊಂಡಿತು. ಹಾಗೆಯೇ ರೇಣುಕಾಚಾರ್ಯರು ಈ ಪೀಠದ ಕಲ್ಪನೆಯೂ ಶುರುವಾಯಿತು.

ಕಲ್ಬುರ್ಗಿ ಕಲಿಸಿದ್ದು: ಬಸವ ಮೀಡಿಯಾದಲ್ಲಿ ಸಮಗ್ರ ಕಲ್ಬುರ್ಗಿ ಚಿಂತನೆ

Share This Article
Leave a comment

Leave a Reply

Your email address will not be published. Required fields are marked *