ಉಳವಿ:
ವಚನ ಸಾಹಿತ್ಯವನ್ನು ಸಹ್ಯಾದ್ರಿಯ ವನಸಿರಿಯ ಮಡಿಲಿನಲ್ಲಿ ಸಂರಕ್ಷಣೆ ಮಾಡಿ ಲಿಂಗಾಯತ ಧರ್ಮವನ್ನು ಉಳಿಸಿದ್ದು ಮಾತ್ರವಲ್ಲ, ಕನ್ನಡ ಸಾರಸ್ವತ ಲೋಕದ ಶ್ರೀಮಂತಿಕೆಗೆ ಚಿನ್ಮಯಜ್ಞಾನಿ ಚನ್ನಬಸವಣ್ಣನವರು ಕಾರಣರಾದರು.
ಆದ್ದರಿಂದ ವಿವಿಧೆಡೆ ಜರುಗುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಶರಣರ ವಚನ ಸಾಹಿತ್ಯದ ಬಗ್ಗೆಯೇ ವಿಶೇಷ ಚಿಂತನಗೋಷ್ಠಿ ಏರ್ಪಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕ್ರಮಕೈಗೊಳ್ಳಬೇಕು ಎಂದು ಧಾರವಾಡದ ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚಿಗೆ ಲಿಂಗಾಯತ ಧರ್ಮೀಯರ ಪವಿತ್ರ ಜಂಗಮಕ್ಷೇತ್ರ ಉಳವಿಯ ಹೆಬ್ಬಾಳ ಚಿಲುಮೆ ಪರಿಸರದಲ್ಲಿ ಬಸವಧರ್ಮ ಪೀಠದ ಶ್ರೀ ಅಕ್ಕನಾಗಲಾಂಬಿಕಾ ಪೀಠದ ಆವರಣದಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಗಣಮೇಳ” ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಪೂಜ್ಯ ಮಾತೆ ದಾನೇಶ್ವರಿಯವರು ಪೀಠಾರೋಹಣ ಸಂದೇಶ ನೀಡಿದರು. ಧಾರವಾಡ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠಾಧ್ಯಕ್ಷೆ ಪೂಜ್ಯ ಮಾತೆ ಜ್ಞಾನೇಶ್ವರಿ ಅವರು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನಡೆಸಿಕೊಟ್ಟರು. ಶಿವಪುರದ ಬಸವಧಾಮದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಿವಪುರದ ಮಾಜಿ ತಾ.ಪಂ. ಸದಸ್ಯ ಗೋಪಾಲಭಟ್ಟ, ಬೈಲಹೊಂಗಲ ರಾಷ್ಟ್ರೀಯ ಬಸವದಳದ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟಗಿ, ಬೈಲಹೊಂಗಲ ಪುರಸಭೆ ಸದಸ್ಯ ಸುಧೀರ ವಾಲಿ ಸೇರಿದಂತೆ ಅನೇಕ ಶರಣ ಶರಣೆಯರು, ಸ್ವಾಮೀಜಿಯವರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ ರಾಷ್ಟ್ರೀಯ ಬಸವದಳದ ಮುಖಂಡ ಶಿವಲಿಂಗಪ್ಪ ಜೋಡಳ್ಳಿ ಅವರು ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಸಭಾ ನಿರ್ವಹಣೆ ಮಾಡಿದರು. ಸಮಾರಂಭದ ನಂತರ ಮಹಾದಾಸೋಹ ಏರ್ಪಡಿಸಲಾಗಿತ್ತು.
