ಬೆಂಗಳೂರು
ಕಲ್ಯಾಣಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.
ಸಾಣೇಹಳ್ಳಿ ಶಿವಕುಮಾರ ಕಲಾಸಂಘದವರ ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.

ಹಣೆ ಮೇಲೆ ಭಸ್ಮ, ತಲೆಮೇಲೆ ಬಸವಣ್ಣ: ಬಸವಕುಮಾರ ಶ್ರೀ
ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ ಮಾತನಾಡಿದರು.
ಸಿದ್ಧರಾಮಯ್ಯನವರ ಹಣೆಮೇಲೆ ವಿಭೂತಿ ಬಹಳ ಚೆನ್ನಾಗಿ ಕಾಣುತ್ತಿದೆ. ಹಾಗೂ ಅವರ ತಲೆಯ ಮೇಲೆ ಬಸವಣ್ಣನವರ ಮುಖವಿದೆ. ಇಷ್ಟು ಸಾಕು, ಅವರ ಬಸವನಿಷ್ಠೆಯನ್ನು ತಿಳಿದುಕೊಳ್ಳಲು, ಎಂದು ಚಿತ್ರದುರ್ಗ ಮುರುಘಾಮಠದ ಬಸವಕುಮಾರ ಸ್ವಾಮಿಗಳು ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದ ದೃಶ್ಯಕಾವ್ಯ ಪ್ರದರ್ಶಿಸಲಾಯಿತು.
ಇಳಕಲ್ಲ ಗುರುಮಹಾಂತ ಶ್ರೀಗಳು ಮಾತನಾಡಿದರು.
ಎಲ್ಲರಿಗೂ ಶರಣು ಶರಣಾರ್ಥಿ ಸಮರ್ಪಣೆಯನ್ನು ಶೇಗುಣಸಿ ಶ್ರೀಗಳು ಸಲ್ಲಿಸಿದರು.
ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ: ಸಿ.ಎಂ. ಸಿದ್ಧರಾಮಯ್ಯ ಘೋಷಣೆ
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವ ಮೂಲಕ ಇಡೀ ಸರ್ಕಾರ ಅವರಿಗೆ ಗೌರವ ಸೂಚಿಸುವ ಕೆಲಸ ಮಾಡಿದೆ. ಬಸವತತ್ವ ಎಂದೆಂದಿಗೂ ಪ್ರಸ್ತುತ, ಕಾನೂನು ವಿದ್ಯಾರ್ಥಿ ದೆಸೆಯಿಂದ ಇಂದಿನವರೆಗೂ ನಾನು ಬಸವ ಅನಯಾಯಿ.
ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಧಾರೆ ಒಂದೇ ಆಗಿವೆ. ಸಂವಿಧಾನ ಪೀಠಿಕೆಯನ್ನು ಎಲ್ಲಾ ಕಡೆ ಓದಿಸುವ ಮೂಲಕ ಅಂಬೇಡ್ಕರ್ ತತ್ವ ಬಿತ್ತರಿಸುತ್ತಿದ್ದೇವೆ. ಬಸವಾದಿ ಶರಣರಂತೆ ನಾವು ಮೊದಲು ನುಡಿದಂತೆ ನಡೆಯಬೇಕಾಗಿದೆ.

ಮುಖ್ಯಮಂತ್ರಿಗಳ ಹಣೆಯ ಮೇಲೆ ರಾರಾಜಿಸಿದ ವಿಭೂತಿ ಎಲ್ಲರ ಗಮನ ಸೆಳೆಯಿತು.
ಹೇಳಿಕೇಳಿ ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ನಾವೆಲ್ಲ ಶೂದ್ರರು. ಚಾತುರ್ವರ್ಣ ವ್ಯವಸ್ಥೆಯಲ್ಲಿ ನಮಗೆ ನಾಲ್ಕನೇ ಸ್ಥಾನ. ನಾವು ನೀವೆಲ್ಲ ಒಂದೇ ಆಗಿದ್ದೇವೆ. ವೈರುದ್ಧತೆ ಇರುವ ಸಮಾಜದಲ್ಲಿ ನಾವಿದ್ದೇವೆ. ಅಸಮಾನತೆ ಹೋಗಲಾಡಿಸದೇ ನಾವಂದುಕೊಂಡ ಸಂವಿಧಾನದ ಆಶಯ ಈಡೇರಲ್ಲ.
2013 ಮೇ 13ರಂದು ಬಸವ ಜಯಂತಿ ದಿನ ನಾನು ಪ್ರಮಾಣವಚನ ಸ್ವೀಕಾರ ಮಾಡಿ ಅಂದೇ ನಿರ್ಧಾರ ಮಾಡಿದ್ದು, ಬಸವಾದಿ ಶರಣರ ದಾರಿಯಲ್ಲಿ ನಡೆಯಬೇಕೆಂದು. ಹುಟ್ಟಿನಿಂದ ಯಾರು ದೊಡ್ಡವರಾಗುವುದಿಲ್ಲ, ಅರ್ಹತೆಯಿಂದ ದೊಡ್ಡವರಾಗುತ್ತೇವೆ. ಜ್ಞಾನ ಯಾರು ಸ್ವತ್ತೂ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೇ. ಪ್ರತಿಯೊಬ್ಬರೂ ಸಹಿಷ್ಣುತೆ, ಸಹಬಾಳ್ವೆ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು.
ಜನರನ್ನು ದಾರಿ ತಪ್ಪಿಸುವ ಕಾರ್ಯಗಳು ಸಮಾಜದಲ್ಲಿ ಹೆಚ್ಚು ನಡೆಯುತ್ತಿವೆ. ತಾವು ಬಸವ ಅನುಯಾಯಿಗಳು ಇದನ್ನು ಗಮನಿಸಿ ಹೆಜ್ಜೆ ಇಡಬೇಕು. ಮುಂದುವರೆದ ಜಾತಿಗಳು ಸಮಾವೇಶ ಮಾಡಬಾರದು. ಹಿಂದುಳಿದ ಜಾತಿ, ವರ್ಗದವರು ಸಮಾವೇಶ ಮಾಡಿದರೆ ತಪ್ಪಲ್ಲ. ಸಮಾನತೆಯ ಆಶಯಕ್ಕಾಗಿ ಅದು ನಡೆದಂತೆ ಎಂದು ನಾವು ತಿಳಿಯಬೇಕು.
12 ನೇ ಶತಮಾನದಲ್ಲಿ ಜಾತಿವ್ಯವಸ್ಥೆ ವಿರುದ್ಧ ಬಸವಾದಿ ಶರಣರು ಹೋರಾಡಿದ್ದರೂ, ಅದು ಇಂದಿಗೂ ಮುಂದುವರೆದಿರುವುದು ದುರಂತ. ಕಚೇರಿಯಲ್ಲಿ ಬಸವ ಭಾವಚಿತ್ರ ನೋಡಿದಾಗ ಅವರಂತೆ ಭಾವನೆ ಬರಲಿ ಎಂದು ಅವರ ಭಾವಚಿತ್ರ ಅಳವಡಿಸುವ ಕಾರ್ಯ ಮಾಡಿದ್ದೇವೆ. ಬಸವಕಲ್ಯಾಣದಲ್ಲಿ ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ ಎಂಬ ಘೋಷಣೆಯನ್ನು ಸಿಎಂ ಮಾಡಿದರು.
ಮೆಟ್ರೊಗೆ ಬಸವಣ್ಣನವರ ಹೆಸರು ಇಡಬೇಕೆಂಬ ಜನರ ಒತ್ತಾಯಕ್ಕೆ ಕೇಂದ್ರ ಸರ್ಕಾರಕ್ಕೆ ವಿಚಾರ ಕಳಿಸುವೆ ಎಂದರು. ಜೈ ಸಂವಿಧಾನ, ಜೈ ಬಸವೇಶ್ವರ ಎಂಬ ಘೋಷಣೆಯೊಂದಿಗೆ ಸಿಎಂ ಮಾತು ಮುಗಿಸಿದರು.
ಮಠಾಧಿಪತಿಗಳ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಗೌರವ ಸನ್ಮಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡಿನ ಪರವಾಗಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸನ್ಮಾನ ನಡೆಯಿತು.


ಬಸವಣ್ಣನವರ ಭಾವಚಿತ್ರವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು.

ಸಚಿವ ಎಂ.ಬಿ. ಪಾಟೀಲ ಅವರನ್ನು ಸತ್ಕರಿಸಲಾಯಿತು.

ಅಭಿಯಾನದಲ್ಲಿ ದುಡಿದವರಿಗೆ ಸತ್ಕಾರ ಮಾಡಲಾಯಿತು.
ನಿರ್ಣಯಗಳ ಮಂಡನೆ
ಆನಂದಪುರಂ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಮಾರಂಭದ ನಿರ್ಣಯಗಳನ್ನು ಮಂಡಿಸಿದರು.

ಇಂದು ಶೋಷಿತರು ಧ್ವನಿಯೆತ್ತಲು ಅಂದಿನ ಕಲ್ಯಾಣ ಕ್ರಾಂತಿಯೇ ಕಾರಣ: ಎಂ ಬಿ. ಪಾಟೀಲ
ಬಸವಾದಿ ಶರಣರ ಹೆಸರು, ವಿಚಾರಗಳನ್ನು ಚಿರಸ್ಥಾಯಿಯಾಗಿಸುವ ಕಾರ್ಯಗಳನ್ನು ಮಾಡಿದವರು ಸಿದ್ಧರಾಮಯ್ಯನವರು. ಕಲ್ಯಾಣಕ್ರಾಂತಿ ಆಗಿದ್ದರಿಂದಲೇ ನಾವಿಲ್ಲಿ ಶೋಷಿತರು ಮಾತಾಡಲಿಕ್ಕೆ ಸಾಧ್ಯವಾಗಿದೆ. ಬಸವ ಸಂಸ್ಕೃತಿ, ಬಸವ ಭಾರತ ನಮ್ಮದಾಗಲು ನಾವೆಲ್ಲ ಶ್ರಮಿಸೋಣ. ಈ ಆಶಯಕ್ಕಾಗಿಯೇ ಅಭಿಯಾನ ನಡೆದಿದೆ. ಮಠಾಧೀಶರು ಶ್ರಮಿಸಿದ್ದಾರೆ. ಎಲ್ಲ ಲಿಂಗಾಯತ ಪಂಗಡಗಳ ಧರ್ಮ ಲಿಂಗಾಯತ ಆಗಿದೆ, ಎಂದು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಹೇಳಿದರು.

ಇಷ್ಟು ಮಠಾಧಿಪತಿಗಳು ಸೇರಿದ್ದು ಇತಿಹಾಸ ನಿರ್ಮಾಣಗೊಂಡಂತಾಗಿದೆ: ಭಾಲ್ಕಿ ಶ್ರೀ
ಬಸವ ಜಯಂತಿ ದಿವಸ ಸಿದ್ಧರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ್ದು ಅವರ ಬಸವಭಕ್ತಿ ತೋರಿಸಿದೆ. ಬಸವಧರ್ಮ ಸ್ವತಂತ್ರಧರ್ಮ ಎಂದು ಅಧಿಕೃತ ಸರ್ಕಾರದ ಮುದ್ರೆ ಒತ್ತಿದವರು ಸಿದ್ಧರಾಮಯ್ಯನವರು. ಕಳಂಕರಹಿತ ರಾಜಕಾರಣಿ ಸಿದ್ಧರಾಮಯ್ಯನವರು. ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ತಾವು ಹೇಳಿದಂತೆ ಮಾಡಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ದೇಶಕ್ಕೆ ಮಾದರಿ ನಾಯಕ ತಾವಾಗಿದ್ದೀರಿ.
ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿ ಸಂಘಟನೆ ಮಾಡಿ, ಅಭಿಯಾನ ಯಶಸ್ವಿಗೊಳಿಸಿದ ಎಲ್ಲರಿಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಶರಣು ಸಲ್ಲಿಸುವೆ. ಇಷ್ಟು ಮಠಾಧಿಪತಿಗಳು ಇಲ್ಲಿ ವೇದಿಕೆಯಲ್ಲಿ ಸೇರಿದ್ದು ಇತಿಹಾಸ ನಿರ್ಮಾಣಗೊಂಡಂತಾಗಿದೆ, ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಸಂತಸ ವ್ಯಕ್ತ ಪಡಿಸಿದರು.

ಮೆಟ್ರೋಗೆ ಸರ್ಕಾರ ‘ಬಸವ’ ಹೆಸರು ಇಡಬೇಕು: ಮೃತ್ಯುಂಜಯ ಶ್ರೀ
ನಮ್ಮ ಬೆಂಗಳೂರು ಮೆಟ್ರೋಗೆ ಸರ್ಕಾರ ‘ಬಸವ’ ಹೆಸರು ಇಡಬೇಕು. ಆ ಮುಖಾಂತರ ಅವರ ಹೆಸರು ಈ ಭಾಗದಲ್ಲೂ ಜನಜನಿತಗೊಳಿಸಬೇಕು. ಬಸವಾದಿ ಶರಣರಂತೆ ನಾವು ಬೀದಿಗಿಳಿದು ಹೋರಾಡಬೇಕು, ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಮಾತನಾಡಿದರು.

ಜಾತ್ಯಾತೀತ ಧರ್ಮ ಲಿಂಗಾಯತ ಧರ್ಮ: ಇಮ್ಮಡಿ ಸಿದ್ಧರಾಮ ಶ್ರೀ
ಕನ್ನಡಿಗರ ಧರ್ಮ, ಜಾತ್ಯಾತೀತ ಧರ್ಮ ಲಿಂಗಾಯತ ಧರ್ಮ, ಬಸವ ಧರ್ಮವಾಗಿದೆ. ಸ್ವಾಭಿಮಾನಕ್ಕಾಗಿ ಲಿಂಗಾಯತ ಧರ್ಮ ಎಂದು ಹೇಳಬೇಕು, ಎಂದು ಭೋವಿ ಜಗದ್ಗುರು ಪೀಠದ ಇಮ್ಮಡಿ ಸಿದ್ಧರಾಮ ಸ್ವಾಮೀಜಿಯವರು ಹೇಳಿದರು.

ಶರಣ ಧರ್ಮವನ್ನು ಸರ್ಕಾರ ಪ್ರತಿ ಮನೆಗೂ ತಲಿಪಿಸಬೇಕಿದೆ: ಡಾ. ವಾಸು
ಎಲ್ಲರನ್ನು ಪ್ರೀತಿಸುವ ಶರಣರ ವಚನ ಸಾಹಿತ್ಯವನ್ನು ಪ್ರತಿ ಮನ ಮನೆಗೆ ಸರ್ಕಾರ ತಲುಪಿಸಬೇಕು. ಕನ್ನಡ ಧರ್ಮವಾಗಿರುವ ಬಸವಧರ್ಮವನ್ನು ಎಲ್ಲರೂ ಅಪ್ಪಿಕೊಳ್ಳಬೇಕು, ಎಂದು ಪ್ರಗತಿಪರ ಚಿಂತಕ ಹೆಚ್. ವಿ. ವಾಸು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳಿಗೆ ಹಿಂದುಳಿದ ಮಠಾಧೀಶರ ಪರವಾಗಿ ಧನ್ಯವಾದಗಳು: ಮಾದಾರ ಚೆನ್ನಯ್ಯ ಶ್ರೀ
ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮಿಗಳಿಂದ ನುಡಿಗಳು.
ಹಿಂದುಳಿದ, ದಲಿತ ಮಠಪೀಠಗಳವರು ನಾವು ಬಸವಣ್ಣನವರ ಮಕ್ಕಳಾಗಿದ್ದೇವೆ. ಬಸವತತ್ವ ಬಿತ್ತಲು, ಆ ದಾರಿಯಲ್ಲಿ ನಡೆಯಲು ಶ್ರಮಿಸುತ್ತೇವೆ. ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿರುವ ಮುಖ್ಯಮಂತ್ರಿಗಳಿಗೆ ದಲಿತ, ಹಿಂದುಳಿದ ಮಠಾಧೀಶರ ಪರವಾಗಿ ಧನ್ಯವಾದಗಳು.

ಸಿದ್ಧರಾಮಯ್ಯ ಎಂದು ಹೆಸರಿಟ್ಟುಕೊಂಡಿದ್ದು ಸಾರ್ಥಕವಾಗಿದೆ: ಗಂಗಾ ಮಾತಾಜಿ
ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ನುಡಿಗಳು.
ಅರಿವಿನ ತೃಪ್ತಿಗೆ ಅನುಭಾವ ಬೇಕೆಂದು ಬಸವಾದಿ ಶರಣರು ಅನುಭವ ಮಂಟಪದಲ್ಲಿ ಹೇಳಿದರು. ಜಗತ್ತಿಗೆ ವಚನ ಸಾಹಿತ್ಯ ಎಂಬ ಜೇನುತುಪ್ಪ ನೀಡಿದವರು ಶರಣರು. ಸಿದ್ದರಾಮಯ್ಯನವರು ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿದ್ದು, ಅವರ ಹೆಸರು ಸಿದ್ಧರಾಮಯ್ಯ ಎಂದು ಇರುವುದು ಸಾರ್ಥಕವಾಗಿದೆ.
ಲಿಂಗಾನಂದ ಸ್ವಾಮೀಜಿ, ಮಾತಾಜಿ ಅವರ ಸತ್ಸಂಕಲ್ಪ ಇದೀಗ ಈಡೇರುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸಾಂಸ್ಕೃತಿಕ ನಾಯಕ ಬಸವಣ್ಣ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕೇಂದ್ರ ಶಕ್ತಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕುರಿತು ಮಾತುಗಳು.
ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಸರ್ಕಾರ ಘೋಷಿಸಿರುವುದು, ವಿಶ್ವದ ಎಲ್ಲ ಜನರ ಜಯವಾಗಿದೆ.

ಬಸವ ಸಂಸ್ಕೃತಿಗೆ ಸಮಾರೋಪ ಎಂಬುದೇ ಇಲ್ಲ: ಸಿದ್ಧಗಂಗಾ ಶ್ರೀ
ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ನುಡಿಗಳನ್ನು ಆಡಿದರು. ಬಸವ ಸಂಸ್ಕೃತಿಗೆ ಸಮಾರೋಪ ಎಂಬುದೇ ಇಲ್ಲ, ಎಲ್ಲರನ್ನು ಒಳಗೊಳ್ಳುವ, ಎಲ್ಲರನ್ನೂ ಪ್ರೀತಿಸುವ ತತ್ವ ಬಸವಣ್ಣನವರದು. ಬಸವತತ್ವ ಬೆಳಕನ್ನು ಪಸರಿಸುವ ಕಾರ್ಯ ಅಭಿಯಾನದ ಮೂಲಕ ಆಗಿದೆ. ಅರ್ಥಶಾಸ್ತ್ರ ಅರಿತ, ಎಲ್ಲರನ್ನು ಗೌರವಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಂದು ಹೇಳಿದರು.

ಇಣುಕು ನೋಟ ಪ್ರದರ್ಶನ
ತಿಂಗಳು ಕಾಲ ನಡೆದು ಬಂದ ಅಭಿಯಾನದ ಇಣುಕು ನೋಟ ಪ್ರದರ್ಶಿಸಲಾಯಿತು.



ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಗೆ ಆಗಮನ.

ಅವರ ಜೊತೆ ಸಚಿವ ಸಂಪುಟದ ಎಂ.ಬಿ. ಪಾಟೀಲ, ಶರಣಪ್ರಕಾಶ ಪಾಟೀಲ, ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರರ ಆಗಮನ.



ಅಭಿಯಾನಕ್ಕೆ ಸಹಕಾರ ನೀಡಿದವರಿಗೆ ಕೃತಜ್ಞತೆ: ಎಸ್. ಎಮ್. ಜಾಮದಾರ
“ಏಳು ಜಿಲ್ಲೆಗಳ ಅ.ಭಾ.ವೀ.ಲಿಂ. ಮಹಾಸಭಾದ ಪದಾಧಿಕಾರಿಗಳು ಅವರ ರಾಜ್ಯ ಸಮಿತಿಯ ಆದೇಶ ಧಿಕ್ಕರಿಸಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುವೆ” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ ಅವರು ಹೇಳಿದರು

ಉಪನ್ಯಾಸ ಕಾರ್ಯಕ್ರಮ
ನಿವೃತ್ತ ನ್ಯಾಯಾಧೀಶ ಹೆಚ್.ಎನ್. ನಾಗಮೋಹನದಾಸ್ ಅವರಿಂದ ‘ಕಾಯಕ ಸಂಸ್ಕೃತಿ’ ಕುರಿತು ಉಪನ್ಯಾಸ.

ರಾಜ್ಯಸರ್ಕಾರ ಮತ್ತೊಮ್ಮೆ ಲಿಂಗಾಯತ ಸ್ವತಂತ್ರ ಧರ್ಮ ಸಂವಿಧಾನ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಮರುಶಿಫಾರಸ್ಸು ಮಾಡಬೇಕು. ಅಲ್ಲಿಯವರೆಗೆ ಹೋರಾಟ ಜಾರಿಯಲ್ಲಿಡಬೇಕು.
ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ: ನಿಜಗುಣಾನಂದ ಶ್ರೀ
ದೇಶದ ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನದಿಂದ ಬಸವತತ್ವ ಬೆಳೆಯಲು ಸಾಧ್ಯವಾಗಿದೆ.
ಬಸವಣ್ಣನವರನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಕೆಟ್ಟವರು ಯಾರೂ ಬಸವಣ್ಣನವರನ್ನು ನಂಬುವುದಿಲ್ಲ.
ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನ ಸಾಹಿತ್ಯ ಎಂಬುದನ್ನು ಎದೆಯಲ್ಲಿಟ್ಟುಕೊಂಡು ನೀವು ಇಲ್ಲಿಂದ ಸಾಗಬೇಕು.

ಸಂಕಲ್ಪ ದೀಕ್ಷೆ
ನೆರೆದ ಬಸವಭಕ್ತರು ಸಂಕಲ್ಪ ದೀಕ್ಷೆಯನ್ನು ತೊಟ್ಟರು. ಅಭಿಯಾನದ ಮಹಾಪೋಷಕರಾದ ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಸಂಕಲ್ಪ ದೀಕ್ಷೆ ಬೋಧಿಸಿದರು ಮತ್ತು ಆಶಯ ನುಡಿಗಳನ್ನು ಆಡಿದರು.




ಸಮಾರಂಭದ ಉದ್ಘಾಟನೆ
ಹಂದಿಗುಂದ ಶಿವಾನಂದ ಸ್ವಾಮೀಜಿ ಅವರಿಂದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳು.

ಬಸವ ಹಣತೆ ಹಚ್ಚುವುದರೊಂದಿಗೆ ಪೂಜ್ಯರು, ಗಣ್ಯರು ಸಮಾರಂಭ ಉದ್ಘಾಟಿಸಿದರು.

ಬಸವ ಪುತ್ಥಳಿಗೆ ಸರ್ವರೂ ಪುಷ್ಪಾರ್ಪಣೆ ಮಾಡಿದರು

ಶೇಗುಣಸಿ ಮಹಾಂತಪ್ರಭು ಶ್ರೀಗಳು, ಮೋಟಗಿ ಪ್ರಭುಚನ್ನಬಸವ ಶ್ರೀಗಳು ಸಮಾರಂಭ ನಿರೂಪಿಸುತ್ತಿದ್ದಾರೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದ ಈ ಭವ್ಯ ಸಮಾರೋಪ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಸ್ವಾಮಿಗಳು, ಮಾತಾಜಿ ಅವರು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ
ಶಿವಸಂಚಾರ ಕಲಾತಂಡದವರಿಂದ ವಚನ ಪ್ರಾರ್ಥನೆ, ಸಮಾರಂಭಕ್ಕೆ ವಿದ್ಯುಕ್ತ ಚಾಲನೆ.

ಆರಂಭದಲ್ಲಿ ನಾಡಗೀತೆಯನ್ನು ಹಾಡಲಾಯಿತು.

ಸಮಾವೇಶ ಆರಂಭ
ಸಾಣೇಹಳ್ಳಿ ಕಲಾತಂಡದಿಂದ ವಚನಗಾಯನ.


ಸಭೆಯಲ್ಲಿ ನೆರೆದ ಶರಣರು









ಸಮಾರೋಪಕ್ಕೆ ಬರುತ್ತಿರುವ ಶರಣ, ಶರಣೆಯರು




ವೇದಿಕೆಯ ಬಳಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ
ಡಾ ಪೂರ್ಣಿಮಾ ಮತ್ತು ತಂಡದಿಂದ.

ಬೆಂಗಳೂರಿಗೆ ಬಂದ ಬಸವ ಸೈನ್ಯ






ಬೆಂಗಳೂರು
11.30ಗೆ ಮುಖ್ಯಮಂತ್ರಿ ವೇದಿಕೆಗೆ

ರಾಜದಾನಿಯಲ್ಲಿ ಸಿಂಗಾರಗೊಂಡ ಬಸವ ಪುತ್ಥಳಿಗಳು
ನಗರದಲ್ಲಿ ಅಭಿಯಾನದ ಸಂಭ್ರಮ





ಕಣ್ಸೆಳೆಯುವ ವೇದಿಕೆ
ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದ ವೇದಿಕೆ ಸಿದ್ಧತೆ ಪೂರ್ಣಗೊಂಡಿದೆ.





ಶ್ರೀ ಗುರು ಬಸವೇಶ್ವರ,
ಇಂದು ಜರುಗಿದ ಅಭೂತಪೂರ್ವ ಸಮಾವೇಶ ಮತ್ತು ಅದನ್ನು ತಮ್ಮ ಮೀಡಿಯಾ ಮೂಲಕ ಚಿತ್ರಿಸಿದ ರೀತಿ ನೋಡಿ ಮನಸ್ಸು ತುಂಬಿ ಬಂತು. ಮೊದಲು ಅಂದು 2013ರಲ್ಲಿ ಜರುಗಿದ ಪ್ರತ್ಯೇಕ ಲಿಂಗಾಯತ ಧರ್ಮ ಸಮಾವೇಶ ಮತ್ತು ಎರಡನೇ ಬಾರಿ ಥೇಮ್ಸ್ ನದಿಯ ದಂಡೆಯ ಮೇಲೆ ಬಸವಣ್ಣ ರಾರಾಜಿಸಿದಾಗ ಯಾವ ರೀತಿ ರೋಮಾಂಚನವಾಯಿತೋ ಅದೇ ರೀತಿ ಇಂದು ಈ ಸಮಾವೇಶ ನೋಡಿ ಮನ ಪುಳಕಿತವಾಗಿದೆ. ಇನ್ನು ಬಸವಣ್ಣ ನವರಿಗೆ ಶರಣ ತತ್ವಕ್ಕೆ ಸಾವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಆಗುವ ದಿನಗಳು ದೂರವಿಲ್ಲ.
ಜೈ ಬಸವೇಶ🙏🙏
ಜೈ ಶ್ರೀ ಗುರು ಬಸವೇಶ 🙏🙏
ಇಂದಿನ ಸಮಾರೋಪ ಕಾರ್ಯಕ್ರಮ ಅದ್ಭುತ ಹಾಗೂ ಅಮೋಘ .ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆದದ್ದು ನೋಡಿ ಸಂತೋಷ ತುಂಬಿ ಬಂದಿದೆ .
ಎಲ್ಲಿ ನೋಡಿದಲ್ಲಿ ಬಸವ ಭಕ್ತರ ಸಂಭ್ರಮ ಸಂತೋಷ , ಒಂದೆಡೆ ಎಲ್ಲ ಪುಜ್ಯರ ದರ್ಶನ ಕಣ್ಣೆಗಾನಂದ .
ಇಷ್ಟು ಬೇಗ ಬಸವ ಮೀಡಿಯಾದಲ್ಲಿ ಎಲ್ಲ ವಿವರಣೆ ಬಂದದ್ದು ಓದಿ ತುಂಬಾ ಖುಷಿಯಾಯಿತು . ಬಸವ ಮೀಡಿಯಾದವರಿಗೆ ಹಾರ್ಧಿಕ ಧನ್ಯವಾದಗಳು 🙏💐
ಅದ್ಭುತವಾಗಿ ಕಾರ್ಯಕ್ರಮ ಯಶಸ್ವಿಯಾಯಿತು.ಲೈವ ಆಗಿ ತೋರಿಸಿದ ಬಸವ ಮಿಡಿತಕ್ಕೆ ಹೃತ್ಪೂರ್ವಕ ಶರಣುಶರಣಾರ್ಥಿಗಳು.
ಒಂದು ನಿಮಿಷವನ್ನೂ ಬಿಡದೇ ನೋಡಿದೆ. ಅಭೂತಪೂರ್ವ ಸಮಾವೇಶ. ಸ್ವಾಮೀಜಿಗಳವರ ಮಾತುಗಳು ಮತ್ತಷ್ಟು ಸ್ಪೂರ್ತಿ ತುಂಬಿದವು. ವಯೋವೃದ್ಧ ಸ್ವಾಮೀಜಿಗಳ ಉತ್ಸಾಹ “21 ನೇ ಯುಗದ ಉತ್ಸಾವ” ಆಗಿ ಕಂಡು ಬಂದಿತು.ಬಸವ ಧರ್ಮ ಸಾಂವಿಧಾನಿಕ ಮಾನ್ಯತೆ ಪಡೆಯುವ ದಿನಗಳು ಹತ್ತಿರವಾಗಿವೆ.
ವಚನ ವಿಶ್ವವಿದ್ಯಾಲಯ ಪ್ರಾರಂಭದ ಕನಸೂ ನನಸಾಗುವ ಕ್ಷಣಗಳು ಸಮೀಪವಾಗಿವೆ. ದಲಿತ ಮತ್ತು ಹಿಂದುಳಿದ ಮಠಾಧೀಶರುಗಳ ಮಾತು ಆಶಾದಾಯಕ. ಎಲ್ಲ ಉಪಪಂಗಡದವರನ್ನು ಒಂದಾಗಿಸುವ “ಲಿಂಗಾಯತ ಮಠಾಧಿಪತಿಗಳ ಒಕ್ಕೂಟ”ಕ್ಕೆ ಸಹಾಯಕಾರಿಯಾಗಿವೆ.
ದಲಿತ ಮತ್ತು ಹಿಂದುಳಿದ ಮಠಾಧೀಶರುಗಳು ಶರಣತತ್ವವನ್ನು ಪ್ರಾಯೋಗಿಕ ಅನುಷ್ಠಾನಕ್ಕೆ ತರುವರೇ ಕಾದು ನೋಡಬೇಕು.
ಐದು ನಡವಳಿಗಳನ್ನು ಕೈಗೊಂಡಿದ್ದು ಅವುಗಳ ಸಾಕಾರದ ಕಾರ್ಯಗಳೇ ಮುಂದಿನ ಸವಾಲುಗಳು ಮತ್ತು ಕಾರ್ಯತಂತ್ರಗಳು ಯಶಸ್ವಿಯಾಗಲೆಂದು ನಂಬುತ್ತೇವೆ. ಅದಕ್ಕಾಗಿ ನಾವೂ ಸಹ ತನು-ಮನ-ಧನಗಳಿಂದ “ಲಿಂಗಾಯತ ಮಠಾಧಿಪತಿಗಳ ಒಕ್ಕೂಟ”ದ ಪೂಜ್ಯರೊಂದಿಗೆ ಇರುತ್ತೇವೆ
ವಚನ ವಿಶ್ವವಿದ್ಯಾಲಯ ವು ಸುಸ್ತಿರ ಆರ್ಥಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಡಿಪಾಯ ದ ಮೇಲೆ ಸಾಕರಾಗೊಳ್ಳಲೆಂದು ಆಶಯ.