ವೈದಿಕತೆ ನಿರಾಕರಿಸುವ ವಚನಗಳು 1: ಅಂಬಿಗರ ಚೌಡಯ್ಯ

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

‘ಬಸವ ಶೈವದಲ್ಲಿ ಹಿಂದುತ್ವ’ ಲೇಖಕರ ಪಾಂಡಿತ್ಯ, ಉದ್ದೇಶ, ಬಸವಾದಿ ಶರಣರ ಸಾಧನೆ, ಅವರ ವಚನಗಳ ನಿಲುವು ಪ್ರತಿಯೊಂದು ಗಂಭೀರ ಚರ್ಚೆಯ ವಿಷಯಗಳು. ಈ ನಿಟ್ಟಿನಲ್ಲಿ ಇದು ಬಸವ ಮೀಡಿಯಾದ ಸಣ್ಣ ಪ್ರಯತ್ನ.

ಅಂಬಿಗರ ಚೌಡಯ್ಯನವರ ವಚನಗಳು

ಅಂಬಿಗರ ಚೌಡಯ್ಯನವರು ಬಸವಣ್ಣನವರ ಪರಮಶಿಷ್ಯರಾಗಿ ಅನುಭವ ಮಂಟಪದ ಸದಸ್ಯರಾಗಿದ್ದವರು. ಅವರ ವಚನಗಳು ಬಹಳ ಗಟ್ಟಿತನದಿಂದ ಕೂಡಿವೆ. ಅಂತಹ ಶರಣರು ಸನಾತನ ಧರ್ಮದ ಆಚರಣೆಗಳನ್ನು ಖಂಡಿಸಿದ ವಚನಗಳನ್ನು ನೋಡೋಣ.

ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ಪೌರಾಣಿಕ ಶಿವನನ್ನು ನಮಗೆ ತೋರಿಸಿದ್ದಾರೆ. ಆದರೆ ಅಂಬಿಗರ ಚೌಡಯ್ಯನವರು ಮೇಲಿನ ವಚನದಲ್ಲಿ ಪೌರಾಣಿಕ ಶಿವನನ್ನು ಅಲ್ಲಗಳೆದಿದ್ದಾರೆ

ಅಯ್ಯ! ಪಾಷಾಣಕ್ಕೆ ಗಿರಿ ಸವೆದವು.ಪತ್ರೆಗೆ ತರು ಸವೆದವು.
ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು.
ಅಗ್ನಿ ಧೂಪಕ್ಕೆ ಸವೆಯಿತ್ತು.
ವಾಯು ಕಂಪಿತಕ್ಕೆ ಸವೆಯಿತ್ತು
ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ,
ಉಮೇಶನ ಶರಣರು ಮಹಮನೆಯಲ್ಲಿ
ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ
ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ಮಾಡುವ ಒಣ, ಡಾಂಭಿಕತೆಯ ಪೂಜೆ ಅವಶ್ಯಕತೆ ಇಲ್ಲ ಎಂದು ಮೇಲಿನ ವಚನದಲ್ಲಿ ಹೇಳಿದ್ದಾರೆ.

ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ವೇಷ ತೊಟ್ಟವರಿಗೆ ಗೌರವ. ಆದರೆ ಲಿಂಗಾಯತ ಧರ್ಮದಲ್ಲಿ ವೇಷಕ್ಕೆ ತಕ್ಕಂತೆ ಆಚರಣೆ ಇರಬೇಕು ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ.

ಕಲ್ಲದೇವರ ಪೂಜೆಯ ಮಾಡಿ,ಕಲಿಯುಗ[ದಿ]
ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.
[ಇಂತಪ್ಪ] ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ಕಲ್ಲು ಮಣ್ಣು ಕಟ್ಟಿಗೆಗಳ ದೇವರನ್ನು ಪೂಜಿಸುವ ಆಚರಣೆಗಳು ಇವೆ. ಆದರೆ ಅಂಬಿಗರ ಚೌಡಯ್ಯನವರು ಇಂಥಹ ಕಾಲ್ಪನಿಕ ದೇವರುಗಳನ್ನು ಪೂಜೆ ಮಾಡುವುದನ್ನು ತಮ್ಮದೇ ಭಾಷೆಯಲ್ಲಿ ಖಂಡಿಸಿದ್ದಾರೆ.

ಕಾಶಿಯಾತ್ರೆಗೆ ಹೋದೆನೆಂಬ
ಹೇಸಿಮೂಳರ ಮಾತ ಕೇಳಲಾಗದು!
ಕೇತಾರಕ್ಕೆ ಹೋದೆನೆಂಬ
ಹೇಸಿಹೀನರ ನುಡಿಯ ಲಾಲಿಸಲಾಗದು!
ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ
ಸರ್ವಹೀನರ ಮುಖವ ನೋಡಲಾಗದು!
ಪರ್ವತಕ್ಕೆ ಹೋದೆನೆಂಬ
ಪಂಚಮಹಾಪಾತಕರ ಮುಖವ ನೋಡಲಾಗದು!
ಅದೆಂತೆಂದಡೆ:
ಕಾಯವೆ ಕಾಶಿ, ಒಡಲೆ ಕೇತಾರ,
ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ,
ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ.
ಇಂತಿವನರಿಯದೆ ಪರ್ವತಕ್ಕೆ ಹೋಗಿ,
ಪಾತಾಳಗಂಗೆಯ ಮುಳುಗಿ,
ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು,
ಮೀಸೆಯ ತರಿಸಿಕೊಂಡು,
ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ,
ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು,
ಪಾಪ ಹೋಯಿತ್ತೆಂದು,
ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು,
ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ.
ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ,
ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ,
ಇದಿರುಗೊಂಡು ಕರತರುವುದಕ್ಕೆ!
ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ,
ಅದಂತೆಂದಡೆ:
ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ?
ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ?
ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ
ನಮ್ಮ ದಿಟ್ಟವೀರಾಧಿವೀರನಂಬಿಗರ ಚೌಡಯ್ಯನು.

ಇದು ಸನಾತನ ಧರ್ಮದ ತೀರ್ಥ ಕ್ಷೇತ್ರಗಳಿಗೆ ಹೋಗುವುದನ್ನು ಜರಿದ ಅಂಬಿಗರ ಚೌಡಯ್ಯನವರ ವಚನ.

ನಾದದ ಬಲದಿಂದ ವೇದಂಗಳಾದವಲ್ಲದೆ, ವೇದ ಸ್ವಯಂಭುವಲ್ಲ.
ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ, ಶಾಸ್ತ್ರ ಸ್ವಯಂಭುವಲ್ಲ ನಿಲ್ಲು.
ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ ಸಮಯ ಸ್ವಯಂಭುವಲ್ಲ ನಿಲ್ಲು.
ಇಂತೀ ಮಾತಿನ ಬಣಬೆಯ ಮುಂದಿಟ್ಟುಕೊಂಡು ಆತನ ಕಂಡೆಹೆನೆಂದಡೆ,
ಆತನತ್ಯತಿಷ್ಟದ್ದಶಾಂಗುಲ, ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ

ಸನಾತನ ಧರ್ಮದ ಆಧಾರ ಸ್ತಂಭಗಳು ಆದ ವೇದ ಶಾಸ್ತ್ರಗಳ ಬಗ್ಗೆ ಅಂಬಿಗರ ಚೌಡಯ್ಯನವರ ವಚನ

ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ

ಇಷ್ಟಲಿಂಗ ಕಟ್ಟಿಕೊಂಡು ಸನಾತನ ಧರ್ಮದ ಗುಡಿ ಗುಂಡಾರ ತಿರುಗುವವರನ್ನು ಗಟ್ಟಿಯಾದ ಪಾದರಕ್ಷೆಯಿಂದ ಹೊಡೆ ಎಂದಿದ್ದಾರೆ ಚೌಡಯ್ಯನವರು.

ವೇದವನೋದಿದವರು ವಿಧಿಗೊಳಗಾದರಲ್ಲದೆ
ದೇವರಿಹ ಠಾವನರಿದಿಪ್ಪುದಿಲ್ಲ.
ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ
ಸದ್ಗುರುವನರಿದುದಿಲ್ಲ.
ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ
ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ.
ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ
ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ.
ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ
ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಓದಿದವರು ಶ್ರೇಷ್ಠ ಎಂದು ಹೇಳಿದ ಮಾತನ್ನು ಅಂಬಿಗರ ಚೌಡಯ್ಯನವರು ಈ ಕೆಳಗಿನ ವಚನದಲ್ಲಿ ತಿರಸ್ಕರಿಸಿದ್ದಾರೆ.

ವೇದಂಗಳೆಲ್ಲ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುವಿನೆಂಜಲು,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ ಹೇಳುವರು ಕೇಳುವರು
ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.

ವೇದ ಶಾಸ್ತ್ರ ಪುರಾಣ ಆಗಮಗಳು ಬಹಳ ಶ್ರೇಷ್ಠ ಎಂದು ಹೇಳುವುದನ್ನು ಅಂಬಿಗರ ಚೌಡಯ್ಯನವರು ಈ ವಚನದಲ್ಲಿ ಅಲ್ಲಗಳೆದಿದ್ದಾರೆ.

ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು
ಶಿವನಿಗೆ ಅರ್ಪಿತ ಎಂದು ನುಡಿವರು.
ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು.
ಶಿವನ ನೆಲೆಯನರಿಯದೆ,
ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ,
ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅಧಿಕವೆಂದು ಪೂಜಿಸಿ,
ಅವಕಿಕ್ಕಿದ ಕೂಳ ತಾ ತಿಂಬುವನು.
ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ
ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು
ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಸನಾತನ ಧರ್ಮದಲ್ಲಿ ವಾರ ತಿಥಿ ನಕ್ಷತ್ರ ಇವುಗಳ ಆಧಾರದಲ್ಲಿ ಮಾಡುವ ವ್ರತಾಚರಣೆಗಳನ್ನು ಇಲ್ಲಿ ಖಂಡಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು