ಬೀದರ್
ನಗರದಲ್ಲಿ ಬುಧವಾರ ನಡೆದ ಚನ್ನಬಸವಣ್ಣನವರ ಸ್ಮರಣೋತ್ಸವ ಹಾಗೂ ಬೆಳದಿಂಗಳೂಟ ಕಾರ್ಯಕ್ರಮದ ಸಾನಿಧ್ಯವಹಿಸಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿದರು.
ವಚನ ಸಾಹಿತ್ಯವನ್ನು ನಾಶಪಡಿಸಲು ಪ್ರಯತ್ನಿಸಿದ ಸನಾತನ ಶಕ್ತಿಗಳ ವಿರುದ್ಧ ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಅಕ್ಕನಾಗಮ್ಮನವರ ನೇತೃತ್ವದ ಶರಣರ ಪಡೆ ಹೋರಾಟ ನಡೆಸಿತು.
ಈ ಹೋರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚನ್ನಬಸವಣ್ಣನವರು ತಮ್ಮ ಕೊನೆಯ ದಿನಗಳನ್ನು ಉಳವಿಯಲ್ಲಿ ಕಳೆದು ದಟ್ಟಾರಣ್ಯದಲ್ಲಿ ಲಿಂಗೈಕ್ಯರಾದರು.
ಪ್ರತಿ ವರ್ಷ ಚನ್ನಹುಣ್ಣಿಮೆಯ ದಿನ ಉಳವಿಯಲ್ಲಿ ಜಾತ್ರೆ ನಡೆಯುತ್ತದೆ. ಎಲ್ಲರಿಗೂ ಅಲ್ಲಿಗೆ ಹೋಗಲು ಆಗುವುದಿಲ್ಲ ಎಂದು ತಿಳಿದು ಮಾತೆ ಮಹಾದೇವಿಯವರು, ಪ್ರತಿಯೊಬ್ಬರೂ ಅವರಿರುವ ಸ್ಥಳದಲ್ಲಿಯೇ ಚನ್ನಹುಣ್ಣಿಮೆ ಆಚರಿಸಬೇಕೆಂದು ಕರೆ ಕೊಟ್ಟರು, ಎಂದರು.
ಕಲ್ಯಾಣ ಕ್ರಾಂತಿ ನಂತರ ಗುಪ್ತಗಾಮಿನಿಯಾದ್ದ ವಚನ ಸಾಹಿತ್ಯವನ್ನು ಫ.ಗು ಹಳಕಟ್ಟಿ ಬೆಳಕಿಗೆ ತಂದರು. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಿದರು, ಎಂದು ಹೇಳಿದರು.

ಕಾರ್ಯಕ್ರಮ ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜದ ಸಹಯೋಗದಲ್ಲಿ ನಡೆಯಿತು. ರಾಷ್ಟ್ರೀಯ ಶಿಕ್ಷಣ ನ್ಯಾಸ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವ ಮಂಟಪದ ಮಾತೆ ವಿಜಯಾಂಬಿಕಾ ಅವರು ಸಮ್ಮುಖ ವಹಿಸಿದ್ದರು.
ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ, ಚಿಂತಕ ಸಂಜಯ ಮಾಕಲ್, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಡಾ.ಸಿ.ಆನಂದರಾವ್, ಚಂದ್ರಶೇಖರ ಹೆಬ್ಬಾಳೆ, ರಾಜೇಂದ್ರಕುಮಾರ ಗಂದಗೆ, ಕಂಟೆಪ್ಪ ಗಂದಿಗುಡೆ, ರಾಜೇಂದ್ರ ಜೊನ್ನಿಕೇರಿ, ವಿಜಯಕುಮಾರ ಪಾಟೀಲ, ಗಂಗಶೆಟ್ಟಿ ವಕೀಲರು, ಸಿದ್ರಾಮ ಶೆಟಕಾರ, ಗಣೇಶ ಬಿರಾದಾರ ಮತ್ತಿತರರು ಹಾಜರಿದ್ದರು.