ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಬಸವ ಮುರುಘರಾಜೇಂದ್ರ ಶ್ರೀ

ಸಾಣೇಹಳ್ಳಿ

ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರವಿವಾರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಹುಮಾನ ವಿತರಿಸಿದರು.

ಮಠಾಧೀಶರಿಗೆ ಏರ್ಪಡಿಸಿದ್ದ ಕಂಠಪಾಠ ಸ್ಪರ್ಧೆಯಲ್ಲಿ ಮುರುಘಾಮಠದ ಬಸವ ಮುರುಘರಾಜೇಂದ್ರ ಸ್ವಾಮಿಗಳು ಪ್ರಥಮ ಬಹುಮಾನ ಪಡೆದು ಮಾತನಾಡಿದರು.

ಕರ್ನಾಟಕದಲ್ಲಿ ಅನೇಕ ಮಠಮಾನ್ಯಗಳಲ್ಲಿ ವಚನ ಕಂಠಪಾಠಸ್ಪರ್ಧೆ ಏರ್ಪಡಿಸುವರು. ಆದರೆ ಮಠಾಧೀಶರಿಗೆ ಕಂಠಪಾಠ ಸ್ಪರ್ಧೆಯನ್ನು ಮೊಟ್ಟಮೊದಲು ಏರ್ಪಡಿಸಿದ್ದು ಸಾಣೇಹಳ್ಳಿ ಮಠ. ಪತ್ರಿಕೆಯಲ್ಲಿ ಸ್ಪರ್ಧೆಯ ಬಗ್ಗೆ ವರದಿ ಬಂದಾಗ ಅಲ್ಲಿಂದ ಇಲ್ಲಿಯವರೆಗೂ ನಮಗೆ ಕಣ್ಣುಬಿಟ್ಟರೆ, ಕಣ್ಣು ಮುಚ್ಚಿದರೆ ವಚನಗಳೇ ಕಾಣುತ್ತವೆ. ಪೂಜ್ಯರು ಹೊಸದಾಗಿ ಸ್ಪೂರ್ತಿ ತುಂಬುವಂಥ ಕಾಯಕವನ್ನು ಮಾಡುತ್ತಿದ್ದಾರೆ. ಸಂಕುಚಿತ ಮನೋಭಾವದ ಜನರಿಂದ ದೂರ ಇದ್ದು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗಬೇಕು. ಧರ್ಮಕ್ಕೆ ಲೋಪವಾದಾಗ, ದ್ರೋಹವಾದಾಗ ಸುಮ್ಮನಿರದೇ ಪ್ರತಿಭಟಿಸಬೇಕು ಎಂದರು.

ಇತರರಿಗಾಗಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಜನರು ಭಾಗವಹಿಸಿದರು. ಬೆಂಗಳೂರಿನ ಸವಿತಾ ಎಸ್.ಬಿ. ಪ್ರಥಮ, ಬೇಲೂರಿನ ನೀಲಾ ನಾಗಭೂಷಣ್ ದ್ವಿತೀಯ, ಬೆಳಗಾವಿಯ ಲಾವಣ್ಯ ಅಂಗಡಿ ತೃತೀಯ, ಗದಗಿನ ತನುಶ್ರೀ ಆನಂದ ನಾಲ್ಕನೆಯ, ಬೈಲಹೊಂಗಲದ ವಿನಾಯಕ ಗುಜನಾಳ್ ಐದನೆಯ ಬಹುಮಾನ ಹಾಗೂ ಮಠಾಧೀಶರ ಸ್ಪರ್ಧೆಯಲ್ಲಿ ಚಿತ್ರದುರ್ಗದ ಮುರುಘ ಬಸವರಾಜೇಂದ್ರ ಸ್ವಾಮಿಗಳು ಪ್ರಥಮ ಬಹುಮಾನ ಪಡೆದುಕೊಂಡರು.

ಪ್ರಥಮ ಬಹುಮಾನ 30 ಸಾವಿರಗವಿ , ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 20 ಸಾವಿರ, ನಾಲ್ಕನೆಯ ಬಹುಮಾನ 15 ಸಾವಿರ, ಐದನೆಯ ಬಹುಮಾನ ಪಡೆದುಕೊಂಡವರಿಗೆ 10 ಸಾವಿರ ರೂಪಾಯಿ ಹಾಗೂ ಮೂಮೆಂಟ್ಸ್, ಮತ್ತೆ ಕಲ್ಯಾಣ ಕೃತಿ ಸಂಪುಟ, ಟವೆಲ್ ನೀಡಿ ಗೌರವಿಸಲಾಯಿತು.

ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಪತ್ರ, ಟವೆಲ್, ಮೂಮೆಂಟ್ಸ್, ವಚನ ಪುಸ್ತಕ ನೀಡಿ ಗೌರವಿಸಲಾಯಿತು.

ಆಶೀರ್ವಚನ ನೀಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಚನ ಕಂಠಪಾಠದ ಸ್ಪರ್ಧೆಯ ಪರಂಪರೆಯನ್ನು ಹಾಕಿಕೊಟ್ಟಂಥವರು ನಮ್ಮ ದೀಕ್ಷಾ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು ಇಂದು ಇಲ್ಲದೇ ಇರಬಹುದು. ನಮ್ಮ ಪಕ್ಕದಲ್ಲಿ ಅವರ ಪ್ರತಿಮೆ ಇದೆ. ಆದರೆ ನಮ್ಮ ದೃಷ್ಟಿಯಲ್ಲಿ ಅದೊಂದು ಚೈತನ್ಯ ನೀಡುವಂಥ ಅದ್ಭುತವಾದ ಶಕ್ತಿ. ನಮ್ಮ ಬದುಕಿಗೆ ಬೆಳಕನ್ನು ನೀಡಿದ ಆರದ ಮಹಾಬೆಳಕು.

ವಚನ ಕಂಠಪಾಠ ಸ್ಪರ್ಧೆ ಒಂದು ಪ್ರಯತ್ನ ಮತ್ತು ಹೊಸ ಅನುಭವ. ಇದರಲ್ಲಿ ಸೋಲು ಗೆಲುವಿಗಿಂತ ಹೆಚ್ಚಾಗಿ ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುಬೇಕು. ಆಗ ಸ್ಪರ್ಧೆಯಲ್ಲಿ ನೀವೆಲ್ಲರೂ ಭಾಗವಹಿಸಿದ್ದು ಸಾರ್ಥಕ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
1 Comment
  • ಮುರುಘಾ ಮಠದ ಬಸವ‌ ಮುರಘ ರಾಜೇಂದ್ರ ಪೂಜ್ಯರು ಆಸಕ್ತಿಯಿಂದ ಭಾಗವಹಿಸಿ ವಚನ ಸ್ಪರ್ದೆಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ , ಕರ್ನಾಟಕದ ಎಲ್ಲ ಮಠಾಧೀಶರು ವಚನ ಪ್ರಚಾರ ಪ್ರಸಾರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿ ವಿನಂತಿ .

Leave a Reply

Your email address will not be published. Required fields are marked *