ಗುಂಡ್ಲುಪೇಟೆ:
ತಾಲ್ಲೂಕಿನ ಪಡುಗೂರಿನ ಅಡವಿಮಠದಲ್ಲಿ ಈಚೆಗೆ ಬೆಟ್ಟದಪುರದ ಕೃಷಿ ಕುಟುಂಬದ ವಧು-ವರರಾದ ‘ಸಹನಾ’ ಮತ್ತು ‘ಮಹದೇವಸ್ವಾಮಿ’ ಸ್ವಯಂಪ್ರೇರಣೆಯಿಂದ ಬಸವಪ್ರಣೀತ ಅಷ್ಠಾವರಣ ಮಾರ್ಗದ ” ವಚನ ಕಲ್ಯಾಣ ಮಹೋತ್ಸವದಲ್ಲಿ ” ನೂತನ ದಂಪತಿಗಳಾದರು.
ಪೂಜ್ಯ ಮಠಾಧೀಶರುಗಳಾದ ಶ್ರೀ ಶಿವಲಿಂಗೇಂದ್ರ ಸ್ವಾಮಿಗಳು, ಮಾದಾಪಟ್ಟಣ ವಿರಕ್ತಮಠಾಧೀಶರಾದ ಶ್ರೀ ತೋಂಟದಾರ್ಯಸ್ವಾಮಿಗಳು, ಮೂಡುಗೂರಿನ ವಿರಕ್ತಮಠಾಧೀಶರಾದ ಶ್ರೀ ಇಮ್ಮಡಿ ಉದ್ದಾನಸ್ವಾಮಿಗಳು, ಕಬ್ಬಹಳ್ಳಿ ಜಂಗಮಮಠದ ಶ್ರೀ ಗುರುಸಿದ್ಧಸ್ವಾಮಿಗಳ ಸಮ್ಮುಖ ವಹಿಸಿ ಕಲ್ಯಾಣ ನಡೆಸಿಕೊಟ್ಟರು.
ಸರಳವಾಗಿ ಸರಸಾಮೋದದೊಂದಿಗೆ ವಚನಗಳ ಗಾಯನ ಗಂಗೆಯಲಿ ನಡೆದ ಈ ವಿವಾಹವನ್ನು ಪಡಗೂರು, ಬೆಟ್ಟದಪುರ ಗ್ರಾಮದ ಶರಣ ಶರಣೆಯರು ಮತ್ತವರ ಬಂಧು-ಬಾಂಧವರು ಕಣ್ತುಂಬಿಕೊಂಡು ನಲಿದರು.
ಪೂಜ್ಯ ಇಮ್ಮಡಿ ಉದ್ದಾನಸ್ವಾಮಿಗಳ ಸಾರಥ್ಯದಲ್ಲಿ ನಡೆದ ವಿವಾಹ ಮಹೋತ್ಸವದ ನಿರೂಪಣೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಶೈಲಕುಮಾರ ನಡೆಸಿದರು. ಹೂರದಹಳ್ಳಿ ಪ್ರಸಾದ ಸ್ವಾಗತಿಸಿದರು. ಕಟ್ನವಾಡಿ ಮಲೆಮಾದಪ್ಪ, ರಮೇಶ, ಹೂರದಹಳ್ಳಿ ದೇವಪ್ಪನವರ ತಂಡದವರು ವಚನ ಭಜನೆ ನಡೆಸಿಕೊಟ್ಟರು. ಕಬ್ಬಹಳ್ಳಿ ಮಹೇಶ, ಕಾಶಿಬುದ್ಧಿ ಕುಲಗಾಣ ಉಪಸ್ಥಿತರಿದ್ದರು.
ಇಂದಿನ ದುಬಾರಿ ಯುಗದಲ್ಲಿ ಸರಳ ವಿವಾಹ ಮೂಗುಮುರಿಯುವವರ ನಡುವೆ ನಾವು ” ವಚನ ಕಲ್ಯಾಣ ” ಪದ್ಧತಿಯಲ್ಲಿ ಮದುವೆ ಆಗಲು ಸ್ವಇಚ್ಛೆಯಿಂದ ಬಂದ ನೂತನ ದಂಪತಿಗಳ ಬಾಳು ಬಂಗಾರವಾಗುವುದು ನಿಜ. ಏಕೆಂದರೆ ಇರುವ ಒಂದೋ ಎರಡೊ ಎಕರೆ ಮಾರಿಕೊಂಡು ಅದ್ಧೂರಿ ಮದುವೆಯಾಗುವ ಬದಲು ಬದುಕಿಗೊಂದು ಆಧಾರ ಉಳಿಸಿಕೊಳ್ಳುವ ಜಾಣತನ ಈ ಮಕ್ಕಳದ್ದು.
ಇಂತಹ ಮದುವೆ ಆಗಬಯಸುವ ವಧುವರರ ಬೆಂಬಲಕ್ಕೆ ಸಮಾಜ ನಿಲ್ಲಲಿ ಎಂದು ಪಡುಗೂರಿನ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು. ಉಪಸ್ಥಿತರಿದ್ದ ಶ್ರೀಗಳು ದಂಪತಿಗೆ ಶುಭ ಹಾರೈಸಿದರು.
