ಕಲಬುರಗಿ
ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಾರಿಕಾದೇವಿ ಕಾಳಗಿ ಮಾತನಾಡಿದರು.
“ಬಸವಣ್ಣನವರ ಚಳುವಳಿ ಮನೆಯೊಳಗಿಂದಲೇ ಆರಂಭವಾಯಿತು. ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಶುದ್ಧ ನಡೆ-ನುಡಿಯಿಂದ ಶ್ರೇಷ್ಠಗೊಳಿಸಿಕೊಂಡು, ಸಮಾಜದಲ್ಲಿ ಸತ್ಯ, ಧರ್ಮ, ಸಮಾನತೆ, ಜ್ಞಾನವಂತಿಕೆಯ ಬೆಳಕನ್ನು ಹರಡಿದರು,” ಎಂದು ಹೇಳಿದರು.
ವಚನಗಳ ಉಲ್ಲೇಖಗಳೊಂದಿಗೆ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಇನ್ನೂ ಅಂಧನಂಬಿಕೆ ಹಾಗೂ ಮೂಢತೆ ಜನತೆಯೊಳಗಿರೋದು ವಿಷಾದಕರ ವಿಷಯವೆಂದರು.
ಅಂದಿನ ಅನುಭವ ಮಂಟಪ ಒಂದು ಕ್ರಾಂತಿಕಾರಿ ವೇದಿಕೆಯಾಗಿತ್ತು. “ಬಸವಣ್ಣನವರು ಎಲ್ಲ ವರ್ಗ, ಜಾತಿ, ಲಿಂಗ ಭೇದವನ್ನು ನಿರಾಕರಿಸಿ ಸಮಾನ ಅವಕಾಶ ನೀಡಿದ ಒಂದು ಧರ್ಮ ಸಾಮಾಜಿಕ ಚಳುವಳಿಗೆ ಮೂಲಸ್ತಂಭವಾಗಿ ಅನುಭವ ಮಂಟಪವನ್ನ ರೂಪಿಸಿದರು,” ಎಂದು ಅವರು ವಿವರಿಸಿದರು.
“ಇಂದು ಮಹಿಳೆಯರಿಗೆ ವಿವಿಧ ವೇದಿಕೆಗಳಲ್ಲಿ ಮುಕ್ತ ಪ್ರವೇಶ ಸಿಕ್ಕಿರುವುದೂ ಕೂಡ ಅಂದಿನ ಅನುಭವ ಮಂಟಪದ ದೂರದೃಷ್ಟಿಯ ಫಲವಾಗಿದೆ,” ಎಂದು ಅವರು ಶ್ಲಾಘಿಸಿದರು.
ಡಾ. ಸಾರಿಕಾದೇವಿ ಅವರು ಪಾಶ್ಚಾತ್ಯ ತತ್ತ್ವಜ್ಞಾನಿ ಅರಿಸ್ಟಾಟಲ್ ನ ಚರ್ಚಾ ಕೂಟವನ್ನೂ ಉಲ್ಲೇಖಿಸಿದರು. “ಅರಿಸ್ಟಾಟಲ್ ಕೂಡ ಚರ್ಚಾ ವೇದಿಕೆಯನ್ನು ಆರಂಭಿಸಿದ್ದರೂ, ಅದು ಸಮಗ್ರವಾಗಿರಲಿಲ್ಲ ಮತ್ತು ತಲೆಹೊರೆಯಲಿಲ್ಲ. ಆದರೆ ಅನುಭವ ಮಂಟಪ ಅತ್ಯಂತ ಯಶಸ್ವಿಯಾಗಿ, ವಿವಿಧ ಸಮುದಾಯದ ಭಕ್ತರು ತಮ್ಮ ಭಾವನೆಗಳನ್ನು ಹೊರಹಾಕುವ ಕ್ರಾಂತಿಕಾರಿ ವೇದಿಕೆಯಾಗಿತ್ತು,” ಎಂಬಂತಾಗಿ ಅವರು ಬಸವಪೂರ್ವ ಮತ್ತು ಬಸವೋತ್ತರ ಯುಗದ ಸುಧಾರಣೆ ಚಳುವಳಿಗಳನ್ನು ಹೋಲಿಸಿ ವಿಶ್ಲೇಷಿಸಿದರು.
ಅವರ ಭಾಷಣದ ಅಂತ್ಯದಲ್ಲಿ ಅವರು ಬಸವಣ್ಣನವರ ಸಪ್ತಸೂತ್ರದ ವಚನವನ್ನು ಉಲ್ಲೇಖಿಸಿ, “ಈ ವಚನಗಳಲ್ಲಿ ನಮಗೆ ಬದುಕುವ ದಿಕ್ಕು, ನೈತಿಕತೆ, ಆತ್ಮವಿಶ್ವಾಸ ಮತ್ತು ಸಮಾಜ ಸೇವೆಯ ಸಂದೇಶ ಇರುತ್ತದೆ. ನಾವು ಈ ಮಾರ್ಗದಲ್ಲಿ ನಡೆಯಬೇಕಾಗಿದೆ,” ಎಂದು ಪ್ರೇರಣಾದಾಯಕ ಸಂದೇಶವನ್ನು ನೀಡಿದರು.