ಅಭಿಯಾನಕ್ಕೆ ಪೂರ್ವಸಿದ್ಧತೆ: ಗೊರುಚ ಅವರಿಂದ ಮಠಾಧೀಶರ ಒಕ್ಕೂಟಕ್ಕೆ ಏಳು ಸಲಹೆಗಳು

ಐದಾರು ತಿಂಗಳ ಪೂರ್ವಸಿದ್ಧತೆ; ಸಮಾಜದ ಪ್ರಾತಿನಿಧಿಕ ಸಮಿತಿ; ಸಾಂಸ್ಕೃತಿಕ ನಾಯಕ ಘೋಷಣೆಯಡಿ ಕಾರ್ಯಕ್ರಮ

ಬೆಂಗಳೂರು

ಪ್ರಸ್ತುತ ಅತ್ಯಂತ ಅವಸರದ ಅಗತ್ಯವಿರುವ ಬಸವಪ್ರಜ್ಞಾ ಜಾಗೃತಿ ಮತ್ತು ಲಿಂಗಾಯತ ಸಮುದಾಯದ ಸದೃಢ ಸಂಘಟನೆಗೆ ಸಂಬಂಧಿಸಿದಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಮತ್ತು ಬಸವ ಪರ ಸಂಘಟನೆಗಳು ಇದೇ 2025ರ ಸೆಪ್ಟೆಂಬರ್ ತಿಂಗಳಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವೊಂದನ್ನು ನಡೆಸಲು ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ.

ಈ ಅಭಿಯಾನ ರಾಜಕೀಯ ಮತ್ತಿತರ ಪ್ರದರ್ಶನೋದ್ಧೇಶದ ಅಭಿಯಾನವಾಗದೆ ಕರ್ನಾಟಕ ಸರ್ಕಾರ ಘೋಷಿಸಿರುವ “ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಘೋಷಣೆಯ ಒಂದು ರಚನಾತ್ಮಕ ಅನುಷ್ಠಾನ ಕ್ರಮವೆಂಬಂತೆ ನಡೆಯಬೇಕೆಂಬ ಆಶಯದಿಂದ ನೀಡಿರುವ ಕೆಳಗೆ ಕಂಡ ಸಲಹೆಗಳನ್ನು ಸಂಘಟಕರು ಪರಿಗಣಿಸಬಹುದು.

  1. ಯೋಜಿತ ಅಭಿಯಾನದ ವ್ಯಾಪ್ತಿ ಮತ್ತು ಪ್ರಮಾಣ ದೃಷ್ಟಿಯಿಂದ ಇದಕ್ಕೆ ಕನಿಷ್ಠ ಐದಾರು ತಿಂಗಳ ಪೂರ್ವಸಿದ್ಧತೆ ಅಗತ್ಯವಾಗಿರುತ್ತದೆ. ಇದು ಪ್ರಧಾನವಾಗಿ ಇಂದಿನ ವೀರಶೈವರೂ ಸೇರಿದಂತೆ ಲಿಂಗಾಯತೇತರ ಸಮುದಾಯಗಳು ಮತ್ತು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಂಭೀರ ಗಮನ ಸೆಳೆಯುವಂತೆ ನಡೆಯಬೇಕಾಗುತ್ತದೆ.
  2. ಲಿಂಗಾಯತ ಚಳುವಳಿಗೆ ಬದ್ಧರಾದ ನಾಡಿನ ಪ್ರಮುಖ ಮಠಾಧೀಶರು, ವಿಚಾರವಾದಿಗಳು, ಪ್ರಗತಿಪರ ಯುವಜನರು, ಮಹಿಳೆಯರು ಮತ್ತು ಸಮಾಜ ಮುಂದಾಳುಗಳು ಇರುವ ಮತ್ತು ಅಭಿಯಾನಕ್ಕೆ ಕಾಲ ಕಾಲಕ್ಕೆ ಮಾರ್ಗದರ್ಶನ ಮಾಡುವ ರಾಜ್ಯಮಟ್ಟದ ಪ್ರಾತಿನಿಧಿಕ ಸಮಿತಿಯೊಂದನ್ನು ರಚಿಸುವುದು.
  3. ಉನ್ನತಾಧಿಕಾರದ ಈ ಅಭಿಯಾನ ಸಮಿತಿಯು ಅಭಿಯಾನದ ಸ್ಪಷ್ಟ ರೂಪು-ರೇಷೆಗಳನ್ನು ನಿರ್ಧರಿಸಿ, ಪ್ರತಿ ಜಿಲ್ಲೆಗೂ ಪರಿಣಿತರ ಒಂದೊಂದು ನಿಯೋಗ ಸಮಿತಿ ರಚಿಸುವುದು.
  4. ಅಭಿಯಾನದ ಕಾರ್ಯತಂಡಗಳಾಗಿ ಕಾರ್ಯನಿರ್ವಹಿಸುವ ಈ ನಿಯೋಗ ಸಮಿತಿಗಳಿಗಾಗಿ ಲಿಂಗಾಯತ ಚಳುವಳಿಯ ಹಿನ್ನೆಲೆ ಮತ್ತು ಅಭಿಮಾನದ ಆಶಯಗಳನ್ನು ತಿಳಿಸುವ ಒಂದು ವಿಸ್ತೃತ ಮತ್ತು ಅಧಿಕೃತ ಟಿಪ್ಪಣಿಯನ್ನು ಸಿದ್ಧಪಡಿಸಿ ಒದಗಿಸುವುದು.
  5. ಅಭಿಯಾನ ನಿಯೋಗದ ಸದಸ್ಯರು ಕ್ಷೇತ್ರ ಪ್ರವಾಸದಲ್ಲಿ ನಡೆಸುವ ಸಭೆಗಳು ಮತ್ತು ವಿಚಾರ ವಿನಿಮಯ ಸಂದರ್ಭಗಳಲ್ಲಿ ಏನು ಮಾತನಾಡಬೇಕೆಂಬುನ್ನು ಅವರಿಗೆ ಒದಗಿಸುವ ಟಿಪ್ಪಣಿ ಸಾಹಿತ್ಯ ಒಳಗೊಂಡಿರಬೇಕು.
  6. ಅಭಿಯಾನ ನಿಯೋಗ ತಂಡಗಳಿಗೆ ಕನಿಷ್ಠ ಒಂದು ದಿನದ ತರಬೇತಿಗೆ ವ್ಯವಸ್ಥೆ ಮಾಡುವುದು. ಈ ತರಬೇತಿ ತಂಡದ ಸದಸ್ಯರನ್ನು ಕ್ಷೇತ್ರ ಕಾರ್ಯಕ್ಕೆ ಸಜ್ಜುಗೊಳಿಸುವಂತಿರಬೇಕು.
  7. ಅಭಿಯಾನ ಸಂದರ್ಭದಲ್ಲಿ ಲಿಂಗಾಯತ ತತ್ವ ಸಿದ್ಧಾಂತಗಳ ಮತ್ತು ಲಿಂಗಾಯತ ಸಮುದಾಯದ ಮುಂದಿರುವ ಸಮಸ್ಯೆ-ಸವಾಲುಗಳು ಹಾಗೂ ಮುಂದಿನ ಹೆಜ್ಜೆಗಳ ಸ್ಪಷ್ಟ ತಿಳುವಳಿಕೆ ಇದ್ದವರು ಮಾತ್ರ ಮಾತನಾಡುವುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
4 Comments
  • ಹಿರಿಯರಾದ ಗೊರುಚ ಅವರು ನಿನ್ನೆ ಇನ್ನೂ ಐದು ಜನ ಹಿರಿಯ ಚಿಂತಕರೊಂದಿಗೆ ಸೆಪ್ಟೆಂಬರ್ನಲ್ಲಿ ನಡೆಸಲು ಉದ್ದೇಶಿಸಿರುವ “ಬಸವ ಸಂಸ್ಕೃತಿ ಅಭಿಯಾನ” ದ ಬಗ್ಗೆ ಅದರ ಅವಶ್ಯಕತೆ, ಅರ್ಥಪೂರ್ಣವಾಗಿ ಅಭಿಯಾನ ನಡೆಸಲು ಮಾಡಬೇಕಾಗಿರುವ ತಯಾರಿಯ ಬಗ್ಗೆ ಮಠಾಧೀಶರುಗಳ ಒಕ್ಕೂಟ, ಜಾಲಿಮಾ, ಮತ್ತು ಇತರೆ ಬಸವಪರ ಸಂಘಟನೆಗಳಿಗೆ ಪತ್ರವೊಂದನ್ನು ಬರೆದು ಬೆನ್ನಲ್ಲೇ ಇಂದು ಏನೆಲ್ಲಾ ತಯಾರಿ ಮಾಡಬೇಕು ಎಂದು ಸಲಹೆಗಳನ್ನು ಕೊಟ್ಟಿದ್ದಾರೆ. ಅಂದರೆ ಅವರು ಮೇಲಿಂದ ಮೇಲೆ ಅಭಿಯಾನದ ಅವಶ್ಯಕತೆ ಮತ್ತು ಗಂಭೀರತೆಯನ್ನು ಒತ್ತಿ ಹೇಳುತ್ತಿದ್ದಾರೆ. ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ ಹೇಳಿಕೆಗಳನ್ನು ಕೊಟ್ಟು ಮೌನಕ್ಕೆ ಜಾರಿರುವ ಜಾಲಿಮಾ ಸೇರಿದಂತೆ ಸಂಬಂಧಪಟ್ಟ ಸಂಘ ಸಂಸ್ಥೆಗಳು ಹಾಗೂ ಮಠಾಧೀಶರ ಒಕ್ಕೂಟವು ಇನ್ನಾದರೂ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ ಉಳಿದಿರುವ ಕೇವಲ ಮೂರು ತಿಂಗಳುಗಳಲ್ಲಿ ಯುದ್ಧೋಪಾದಿಯಲ್ಲಿ ತಯಾರಿಯನ್ನು ಪ್ರಾರಂಭಿಸಿ ಅನ್ನುವುದು ಎಲ್ಲಾ ಬಸವಾಭಿಮಾನಿಗಳ ಆಶಯವಾಗಿದೆ. ಈ ಒಕ್ಕೂಟವು ಹಿರಿಯರಾದ ಗೊರುಚ ಅವರೂ ಸೇರಿದಂತೆ ನಾಡಿನ ಇತರೆ ಹಿರಿಯ ಬಸವ/ಶರಣ ತತ್ವ ಚಿಂತಕರನ್ನು ಒಳಗೊಂಡ ಮಾರ್ಗದರ್ಶಕ ಸಮಿತಿಯೊಂದನ್ನು ರಚಿಸಲಿ ಮತ್ತು ಅವರ ಸಲಹೆಗಳನ್ನು ಪಡೆದು ಗಂಭೀರವಾಗಿ ಪರಿಗಣಿಸಿ ಅಭಿಯಾನಕ್ಕೆ ತಯಾರಿ ನಡೆಸಲಿ. ಈ ಅಭಿಯಾನ ಬಸವತತ್ವ/ಶರಣತತ್ವ/ಲಿಂಗಾಯತ ಧರ್ಮೀಯರ ಮೇಲೆ ಮತ್ತು ಆಯ್ದ ಮಠಾಧೀಶರುಗಳ ಮೇಲೆ ನಡೆಯುತ್ತಿರುವ ವೈಯುಕ್ತಿಕ ದಾಳಿಗಳು, ಸಾಂಸ್ಕೃತಿಕ ದಾಳಿಗಳು ಮತ್ತು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಅಡ್ಡಿಪಡಿಸುತ್ತಿರುವವರನ್ನು ಹಾಗೂ ಅಂತಹ ಶಕ್ತಿಗಳನ್ನು ಎದುರಿಸಲು ಬೇಕಿರುವ ಎಲ್ಲಾ ತರಹದ ಶಕ್ತಿಯನ್ನು ಒಗ್ಗೂಡಿಸಲು ಮುನ್ನುಡಿ ಬರೆಯುವಂತಾಗಬೇಕು. ಹೆಚ್ಚು ಸಮಯ ಇಲ್ಲದೆ ಇರುವುದರಿಂದ ಹಿರಿಯರ ಈ ಸಲಹೆಗಳನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಲಿ ಎಂಬುದು ಸಾರ್ವಜನಿಕ ಅಭಿಪ್ರಾಯ.

  • ಒಳ್ಳೆ ಸಂದೇಶ ಕೊಡುವಂಥದೂ ಈ ಹಿರಿಯರ ಸಲಹೆ

  • ಇದರ ರೂಪರೆಷೆಗಳು ಆದಷ್ಟು ಬೇಗನೆ ತಯಾರು ಆಗಬೇಕು. ನಮ್ಮ ಶಕ್ತಿ ಸೌಹಾರ್ದತೆ ಏನೇಬುದು ಲೋಕಕ್ಕೆ ತಿಳಿಯಬೇಕು. ಜಾತಿವಾದಿ ಮನುವಾದಿಗಳನ್ನು ಹಿಮೇಟ್ಟುವಂತೆ ಮಾಡಬೇಕು. ಜನರಲ್ಲಿ ಅಧೀನತೆ ಅಧೀರತೆ ಇಲ್ಲವಾಗಿಸಿ ಸಮಭವನೆ ಮೂಡುವಂತೆ ವಿಶ್ವಾಸವನ್ನು ಹುಟ್ಟುಹಾಕಬೇಕು.

Leave a Reply

Your email address will not be published. Required fields are marked *