ಬಸವಕಲ್ಯಾಣ
ಶರಣರ ತತ್ವ ಪ್ರಚಾರ, ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ಬಸವ ತತ್ವ ನಿಷ್ಠರಾಗಿದ್ದ ಲಿಂಗೈಕ್ಯ ಶಂಕ್ರಣ್ಣ ಕೋಳಕೂರ ಅವರ ಬದುಕು ಮಾರ್ಗದರ್ಶಿಯಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ನುಡಿದರು.
ನಗರದ ಅನುಭವ ಮಂಟಪ ಆವರಣದಲ್ಲಿ ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಶಂಕ್ರಣ್ಣ ಕೋಳಕುರ ಅವರ ಬಸವ ಬಳ್ಳಿಯ ಹೂವಿಗೆ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅವರ ಜೀವನ ಸಾಧನೆ, ವ್ಯಕ್ತಿತ್ವ ಪರಿಚಯಿಸುವ ಪುಸ್ತಕವನ್ನು ಅನುಭವ ಮಂಟಪದಿಂದ ಪ್ರಕಟಿಸಲಾಗುವದು ಎಂದರು.

ಅಪ್ಪಟ ಬಸವ ಅನುಯಾಯಿಗಳಿಂದಲೇ ಬಸವತತ್ವ ಉಳಿಯಲು ಸಾಧ್ಯವಾಗಿದೆ. ಸೂರ್ಯ ಮುಳುಗುವಾಗ ಬೆಳಕಿಗೆಂದು ಚಂದ್ರನಿಗೆ ಬಿಟ್ಟು ಹೋಗುವಂತೆ ಶಂಕ್ರಣ್ಣನವರು ತಮ್ಮ ಪುತ್ರ ರವೀಂದ್ರ ಅವರಿಗೆ ಬಸವತತ್ವದ ಸಂಸ್ಕಾರ ಕೊಟ್ಟು ಅವರನ್ನು ಬಿಟ್ಟು ಹೋಗಿದ್ದಾರೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿ ಉಪಾದ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವ ತತ್ವ ಪ್ರಚಾರ, ಪ್ರಸಾರಕ್ಕಾಗಿ ಸಮರ್ಪಣಾ ಮನೋಭಾವದಿಂದ ದುಡಿದ ಶಂಕ್ರಣ್ಣ ಕೊಳಕುರ ಅವರ ಜೀವನ ಇತರರಿಗೆ ಮಾದರಿಯಾಗಿದೆ ಎಂದರು.

ಕಲಬುರ್ಗಿ ವಿವಿ ಸಿಂಡಿಕೆಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ಬಸವ ತತ್ವ ಪ್ರಚಾರ, ಪ್ರಸಾರಕ್ಕೆ ಸಮರ್ಪಣಾ ಮನೋಭಾವದಿಂದ ದುಡಿದ ಶಂಕ್ರಣ್ಣ ಅವರ ಜೀವನ, ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ ಎಂದರು ಬಸವತತ್ವಕ್ಕಾಗಿ ಜೀವನ, ಸಾಧನೆ ಮಾಡಿದ ಕಾರ್ಯ ಕುರಿತು ಪುಸ್ತಕ ಪ್ರಕಟಿಸುವ ಕಾರ್ಯ ಅನುಭವ ಮಂಟಪದಿಂದ ನಡೆಯಬೇಕು ಎಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದೇವರು. ಬೀದರ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಗೋರ್ಟಾ(ಬಿ)ನ ಪ್ರಭುದೇವ ಮಹಾಸ್ವಾಮೀಜಿ, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಪೂಜ್ಯ ಸತ್ಯಕ್ಕತಾಯಿ, ಎಂಎಲ್ಸಿ ಎಂ.ಜಿ.ಮುಳೆ, ಅಧ್ಯಕ್ಷತೆ ವಹಿಸಿದ್ದ ಜಯಪ್ರಕಾಶ ಸದಾನಂದ, ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮಿ ಗಡ್ಡೆ, ಯುವ ಮುಖಂಡ ಶಿವಕುಮಾರ ಬಿರಾದಾರ ಸೇರಿದಂತೆ ಪ್ರಮುಖರು ಮಾತನಾಡಿದರು.

ಸಮಾರಂಭದಲ್ಲಿ ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಪತ್ರಕರ್ತ ಶಶಿಕಾಂತ ಶೆಂಬಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅನುಭವ ಮಂಟಪದ ಪೂಜ್ಯ ಗಾಯಿತ್ರಿತಾಯಿ, ಬಂದವರ ಓಣಿಯ ಪೂಜ್ಯ ಸತ್ಯಕ್ಕತಾಯಿ ನೇತೃತ್ವ ವಹಿಸಿದ್ದರು.

ವಿಜಯಸಿಂಗ್, ಬಸವರಾಜ ಕೋರಕೆ, ಅನೀಲಕುಮಾರ ರಗಟೆ, ಜಯದೇವಿತಾಯಿ ಲಿಗಾಂಡೆ, ಶ್ರೀಶೈಲ ಹುಡೇದ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ ಸ್ವಾಗತಿಸಿದರು. ಪ್ರಾಚಾರ್ಯ ಭೀಮಾಶಂಕರ ಬಿರಾದಾರ ನಿರೂಪಿಸಿದರು.