ಕನ್ನಡ ರಾಜ್ಯೋತ್ಸವವನ್ನು ಕನ್ನಡ ಜಾತ್ರೆಯನ್ನಾಗಿ ಪರಿವರ್ತಿಸಿದ ಪೂಜ್ಯ ಶಾಂತಲಿಂಗ ಶ್ರೀ
ನರಗುಂದ
ಗೋಕಾಕ್ ಚಳುವಳಿಗೆ ನಾಂದಿ ಹಾಡಿದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕನ್ನಡದ ಕುಲುಗುರುಗಳಾಗಿ ೭೦೦ಕ್ಕೂ ಹೆಚ್ಚು ಸಾಧಕರ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ.
ಅವರ ಕರಕಮಲ ಸಂಜಾತರಾದ ಪೂಜ್ಯ ಶಾಂತಲಿಂಗ ಶ್ರೀಗಳು ತಾಯಿ ಭುವನೇಶ್ವರಿಗಾಗಿಯೇ ರಥವನ್ನು ನಿರ್ಮಿಸಿ ಕರ್ನಾಟಕ ರಾಜ್ಯೋತ್ಸವವನ್ನು ಜಾತ್ರೆಯನ್ನಾಗಿ ಪರಿವರ್ತಿಸಿ ನಾಡಿನಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿರುವ ಕನ್ನಡ ಸ್ವಾಮಿಗಳು ಅವರ ಸಾಹಿತ್ಯಕ ಸೇವೆ ಸರ್ವರಿಗೂ ಮಾದರಿಯಾಗಿದೆ ಎಂದು ಗದಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರು ಬಣ್ಣಿಸಿದರು.
ಅವರು ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ ಹಾಗೂ ಶ್ರೀ ಮುರುರಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೧೦ ನೇ ಶರಣ ಸಂಗಮ ಹಾಗೂ ಕೋಮುಸೌಹಾರ್ದತಾ ಜಗದ್ಗುರು ಡಾ. ಸಿದ್ಧಲಿಂಗ ಶ್ರೀಗಳ ೭೬ ನೇ ಜಯಂತ್ಯುತ್ಸವದ ನಿಮಿತ್ಯ ಪೂಜ್ಯ ಶಾಂತಲಿಂಗ ಶ್ರೀಗಳಿಗೆ ಕನ್ನಡ ಕುಲಗುರು ಗೌರವ ಬಿರುದಾಂಕಿತ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಕೇವಲ ಅಧ್ಯಾತ್ಮಕ್ಕೆ ಸೀಮಿತವಾಗಿದರೆ ಪ್ರಗತಿಪರ ವಿಚಾರದೊಂದಿಗೆ ಪ್ರಸ್ತಕ ವಿದ್ಯಮಾನಕ್ಕೆ ಪ್ರತಿಕ್ರಿಯಿಸುವ ಪ್ರಗತಿಪರ ಚಿಂತಕರಾಗಿದ್ದಾರೆ. ಭೈರನಹಟ್ಟಿ ಶ್ರೀಮಠ ಅತ್ಯಂತ ಚಿಕ್ಕದಾಗಿದ್ದರೂ ಅದರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಬಹಳ ಅಮೋಘವಾಗಿದೆ. ಗದುಗಿನ ಜಗದ್ಗುರುಗಳ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದಲ್ಲಿ ಸಾಗುತ್ತಿರುವ ಪೂಜ್ಯರ ಕನ್ನಡ ಸೇವೆ ಅನನ್ಯವಾದುದು ಎಂದು ಅವರು ಹೇಳಿದರು.

ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟಿನ ಅದ್ಯಕ್ಷ ಚೆನ್ನಬಸಪ್ಪ ಕಂಠಿ ಮಾತನಾಡಿ, ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ತೊಂದರೆ ಬಂದಾಗ ಈ ಭಾಗದಲ್ಲಿ ಮೊಟ್ಟಮೊದಲು ದ್ವನಿ ಎತ್ತುವ ಕನ್ನಡದ ಪೂಜ್ಯರು. ಬದುಕಿಗಿಂತ ಭಾಷೆ ದೊಡ್ಡದು ಕನ್ನಡಿಗರಿಗೆ ಮಾತೃ ಭಾಷೆಯೇ ಜೀವಾಳವೆಂದು ಬದುಕುತ್ತಿರುವ ಶ್ರೀಗಳು ಸಮಗ್ರ ಸೇವೆಯನ್ನು ಪರಿಗಣಿಸಿ ಅವರಿಗೆ ಸೂಕ್ತ ಗೌರವವನ್ನು ನೀಡಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ಮಠ ಚಿಕ್ಕದಾದರೂ ಅವರು ಮಾಡುವಂತಹ ಕೈಂಕರ್ಯ ಬಹಳ ವಿಶಾಲವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರು ದಂಡಿನ, ಅಪ್ಪಣ್ಣ ನಾಯ್ಕರ ಮಾತನಾಡಿದರು. ವಿವಿಧ ಸಂಘಟನೆಗಳು ಪೂಜ್ಯರನ್ನು ಸತ್ಕರಿಸಿದರು. ವೇದಿಕೆ ಮೇಲೆ ಪ್ರಕಾಶಗೌಡ ತಿರಕನಗೌಡ್ರ, ಸಿ. ಎಚ್. ಕೋರಿ, ಬಿ.ಬಿ. ಐನಾಪೂರ, ಶಂಕ್ರಣ್ಣ ವಾಳದ, ಚೆನ್ನು ನಂದಿ, ವ್ಹಿ. ಎನ್. ಕೊಳ್ಳಿಯವರ, ಮಹಾಂತೇಶ ಹಿರೇಮಠ, ಟ್ರಸ್ಟಿನ ಸರ್ವ ಧರ್ಮರ್ಶಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು, ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು, ಪ್ರೊ.ಬಿ. ಸಿ. ಹನಮಂತಗೌಡ್ರ ಸ್ವಾಗತಿಸಿದರು, ಕೊನೆಯಲ್ಲಿ ರಮೇಶ ಐನಾಪೂರ ವಂದಿಸಿದರು.