ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನೂಲಿಯ ಚಂದಯ್ಯ. ಬಸವಣ್ಣನ ವಿನೂತನ ವಿಚಾರಧಾರೆಗೆ, ಸಮಾಜೋಧಾರ್ಮಿಕ ಚಿಂತನೆಗೆ ಆಕರ್ಷಿತನಾಗಿ ಕಲ್ಯಾಣಕ್ಕೆ ಬಂದು ಕಾಯಕ ಜೀವಿಯಾಗಿ ದಾಸೋಹ ಮಾಡುತ್ತ ಬದುಕಿದ ಶ್ರೇಷ್ಠ ಕಾಯಕ ಜೀವಿ. ದೇವರಿಗೆ ಕಾಯಕ ಪ್ರತಿಫಲದ ಪ್ರಜ್ಞೆಯ ಪಾಠ ಮಾಡಿದ ಶ್ರೇಷ್ಠ ಅನುಭಾವಿ. ಜಂಗಮದಲ್ಲಿ ಅಧಿಕ ಭಕ್ತಿ, ಜಂಗಮ ಸೇವೆಯೇ ಲಿಂಗಪೂಜೆ ಎಂಬ ತತ್ವ ಅರಿತು ಬದುಕಿದ ನೂಲಿಯ್ಯ ಚಂದಯ್ಯ ದಲಿತ ವರ್ಗದ ವಚನಕಾರ. ಲಿಂಗನಿಷ್ಠೆಗಿಂತಲೂ ಕಾಯಕ ನಿಷ್ಠೆ ಮುಖ್ಯ ಎಂದು ಸಾರಿದ ಶ್ರೇಷ್ಠ ಅನುಭಾವಿ.
ಚಂದಯ್ಯನ ತಂದೆ, ತಾಯಿ, ಗುರು ಯಾರು ಎಂಬ ಮಾಹಿತಿ ಚರಿತ್ರಾಕಾರರಿಗೆ ಲಭ್ಯವಾಗಿಲ್ಲ. ಫ.ಗು. ಹಳಕಟ್ಟಿಯವರು ವಿಜಯಪುರ ಜಿಲ್ಲೆಯ ಶಿವಣಗಿ ನುಲಿಯ್ಯ ಚಂದಯ್ಯನ ಗ್ರಾಮ ಎಂದು ಗುರುತಿಸಿದ್ದಾರೆ. ಅರಣ್ಯದಲ್ಲಿ ಬೆಳೆದ ಹುಲ್ಲಿನಿಂದ ಹಗ್ಗ ಹೊಸೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿದ್ದ. ಬಸವಣ್ಣನ ವಿಚಾರಕ್ಕೆ ಪ್ರಭಾವಿತನಾಗಿ ಕ್ರಿ.ಶ ೧೧೬೦ರಲ್ಲಿ ಶಿವಣಗಿಯಿಂದ ಕಲ್ಯಾಣಕ್ಕೆ ಬಂದು ಹಗ್ಗ ಹೊಸೆಯುವ ಕಾಯಕ ಮಾಡುತ್ತ, ಶರಣನಾಗಿ ಮಹಾಮನೆಯ ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊಂಡು ವಚನ ರಚಿಸಿದ್ದಾನೆ.
ಪುರಾಣ ಕಾವ್ಯಗಳಲ್ಲಿ ಚಂದಯ್ಯನ ಬದುಕಿನ ಘಟನೆಗಳು ಕಂಡು ಬರುತ್ತವೆ. ಶೂನ್ಯ ಸಂಪಾದನೆ, ಶಿವತತ್ವ ಚಿಂತಾಮಣಿ, ಬಸವ ಪುರಾಣ ಗ್ರಂಥಗಳಲ್ಲಿ ವಿಸ್ತಾರವಾಗಿಯೂ, ಗುರುರಾಜ ಚರಿತೆ, ರಾಘವಾಂಕ ಚರಿತ್ರೆ, ಚನ್ನಬಸವ ಪುರಾಣ ಮುಂತಾದ ಕೃತಿಗಳಲ್ಲಿ ಸೂಚ್ಯವಾಗಿ ಚಂದಯ್ಯನ ಅರಿವು, ಕಾಯಕದ ವಿವರ ಇದೆ.
ಕಲ್ಯಾಣ ಪಟ್ಟಣದಲ್ಲಿ ನುಲಿಯ ಚಂದಯ್ಯನೆಂಬ ಶರಣನು ಅರಣ್ಯದಿಂದ ಮೆದುಹುಲ್ಲು, ಮರದ ತೊಗಟೆಗಳನ್ನು ತಂದು ಅದರಿಂದ ಹಗ್ಗ ಹೊಸೆದು, ಹಸು ಕಟ್ಟುವ ಹಗ್ಗಳನ್ನು ಮಾಡಿ ತೆಲೆಯ ಮೇಲೆ ಹೊತ್ತು ಕಲ್ಯಾಣ ಪಟ್ಟಣದಲ್ಲಿ ಮಾರಾಟ ಮಾಡಿ ಬಂದ ದ್ರವ್ಯದಿಂದ ದಾಸೋಹ ಮಾಡುತ್ತ ಮಹಾಶರಣನಾಗಿದ್ದ, ಒಂದು ದಿನ ಹುಲ್ಲು ಕೊಯ್ಯುತ್ತಿದ್ದ ಚಂದಯ್ಯನನ್ನು ಪರೀಕ್ಷಿಸಲು ಅವನ ಇಷ್ಟಲಿಂಗ ಜಾರಿ ಕೆಳಗೆ ಬೀಳುತ್ತದೆ. ಅದನ್ನು ತಿಳಿದ ಚಂದಯ್ಯ ಲಿಂಗವನ್ನು ಎತ್ತಿಕೊಳ್ಳದೆ ಮುನ್ನಡೆಯುತ್ತಾನೆ. ಆಗ ಲಿಂಗವು ಪುರುಷರೂಪ ಧರಿಸಿ ನಾನು ಬಂದೆನು ಚಂದಯ್ಯ ಎಂದು ಹಿಂಬಾಲಿಸುತ್ತದೆ. ಮೊದಲೇಕೆ ಹೋದಿರಿ ಈಗಲೇಕೆ ಬಂದೆನೆಂದಿರಿ ನಾನೊಲ್ಲೆ ಎಂದು ಹೇಳಿ ಮುನ್ನಡೆದ ಚಂದಯ್ಯನನ್ನು ಲಿಂಗವು ನೀನೊಲ್ಲೆನೆಂದೊಡೆ ನಾ ಬಿಡೆ ತನ್ನಾಣೆ ಎಂದು ಹಿಂಬಾಲಿಸುತ್ತದೆ.
ಕೊನೆಗೆ ನ್ಯಾಯ ಮಾಚಿದೇವರ ಕಡೆಗೆ ಹೋಗಿ ಜಂಗಮ ಸೇವೆಗೆ ನೆರವಾಗುವ ಕರಾರಿನ ಮೇಲೆ ಹುಲ್ಲನ್ನು ಚಂದಯ್ಯನ ಮನೆಗೆ ಹೊತ್ತೊಯ್ದುಲ್ಲದೆ ಅದನ್ನು ಹೊಸೆದು, ಮಾರಲು ತೆಗೆದುಕೊಂಡು ಹೋಗಬೇಕಾಗುತ್ತದೆ. ಲಿಂಗಯ್ಯ ಬಸವಣ್ಣನಿಂದ ಸಾವಿರ ಹೊನ್ನು ಪಡೆದು ಬಂದಾಗ ಚಂದಯ್ಯ , ಅನ್ಯಾಯದ ಸಂಪಾದನೆ ಸಲ್ಲದು ಎಂದು ಹಾಗದರೊಕ್ಕ ತರಲು ಹಿಂದಕ್ಕೆ ಕಳುಹಿಸುತ್ತಾನೆ. ಅಷ್ಟೆ ಅಲ್ಲ ಅವನನ್ನು ಅನುಭವ ಮಂಟಪಕ್ಕೆ ಕರೆತಂದು ನಡೆದ ಸಂಗತಿಯನ್ನೆಲ್ಲ ತಿಳಿಸಿ ಲಿಂಗಯ್ಯನ ಅವಶ್ಯಕತೆಯಿಲ್ಲವೆಂದು ಹೇಳುತ್ತಾನೆ. ಅಲ್ಲಿನ ಶರಣರು ಗುರು, ಲಿಂಗ, ಜಂಗಮಗಳು ಪರಸ್ಪರಾವಲಂಬಿಗಳು ಎಂಬುದನ್ನು ತಿಳಿಸಿ ಚಂದಯ್ಯನಿಗೆ ಲಿಂಧರಿಸಲು ಸೂಚಿಸುತ್ತಾರೆ.
ಯಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ ಗುರು, ಲಿಂಗ, ಜಂಗಮಕ್ಕೆ ಮಾಡುವುದೇ ಶಿವಪೂಜೆ ಎನ್ನುವ ಆತ ಕಾಕಿಯ ಕಾಯಿ ಕಾಡಿಗೆ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ ಎಂದಿರುವುದು ಅರ್ಥಪೂರ್ಣವಾಗಿದೆ. ಚಂದೇಶ್ವರ ಲಿಂಗ ಅಂಕಿತದಲ್ಲಿ ರಚಿತವಾದ ೪೮ ವಚನಗಳು ಲಭ್ಯವಾಗಿವೆ.
ಕಲ್ಯಾಣದಲ್ಲಾದ ರಾಜಕೀಯ ವಿಪ್ಲವದ ನಂತರ ಬಿಜ್ಜಳ ಹತ್ಯೆ ನಡೆಯುತ್ತದೆ. ಸೈನಿಕರು ದಂಗೆ ಏಳುತ್ತಾರೆ. ಬಿಜ್ಜಳ ಹತ್ಯೆಗೆ ಶರಣರೇ ಕಾರಣ ಎಂಬ ತಪ್ಪು ತಿಳುವಳಿಕೆಯಿಂದ ಶರಣರನ್ನು ಕಂಡಲ್ಲಿ ಕೊಲ್ಲಲಾಗುತ್ತದೆ. ಕೆಲವು ಶರಣರು ಕಲಿಗಳಾಗಿ ಹೋರಾಡುತ್ತ ವಚನ ಸಾಹಿತ್ಯದ ಕಟ್ಟುಗಳನ್ನು ಹೊತ್ತು ದಿಕ್ಕು ದಿಕ್ಕಿಗೆ ಚದುರಿ ಹೋಗುತ್ತಾರೆ.
ಅಲ್ಲಮಪ್ರಭು, ಅಕ್ಕಮಹಾದೇವಿ ಶ್ರೀಶೈಲದತ್ತ ತೆರಳುತ್ತಾರೆ. ಅಕ್ಕನಾಗಮ್ಮ, ಚನ್ನಬಸವಣ್ಣ ನೇತೃತ್ವದಲ್ಲಿ ಮತ್ತೊಂದು ತಂಡ ಉಳವಿಯತ್ತ ಹೊರಟು ವಚನ ಸಾಹಿತ್ಯ ಸಂರಕ್ಷಣೆ ಮಾಡುತ್ತದೆ. ಉಳವಿಯಲ್ಲಿ ನೆಲೆನಿಂತ ೬ ತಿಂಗಳಲ್ಲಿ ಚನ್ನಬಸವಣ್ಣ ಲಿಂಗೈಕ್ಯನಾಗುತ್ತಾನೆ. ಪುತ್ರನ ಅಗಲಿಕೆಯಿಂದ ದು:ಖಿತಳಾದ ಅಕ್ಕನಾಗಮ್ಮ ಉಳವಿಯನ್ನು ತೊರೆದು ವಚನ ಸಾಹಿತ್ಯ ಸಂರಕ್ಷಣೆಯಲ್ಲಿದ್ದ ನುಲಿಯ್ಯ ಚಂದಯ್ಯ ಮುಂತಾದ ಶರಣರೊಂದಿಗೆ ಬನವಾಸಿ ಮಾರ್ಗವಾಗಿ ಬಳ್ಳಿಗಾವಿ, ಉಡುತಡಿಯತ್ತ ಶರಣ ಧರ್ಮ ಪ್ರಸಾರ ಮಾಡುತ್ತಾ ಭದ್ರಾವತಿ ಸಮೀಪದ ತರೀಕೆರಿಗೆ ಬರುತ್ತಾರೆ. ಇಲ್ಲಿನ ಎಣ್ಣೆಹೊಳೆ ಮಠದಲ್ಲಿ ಆಶ್ರಯ ಪಡೆದು ಅಕ್ಕನಾಗಮ್ಮ, ನುಲಿಯ ಚಂದಯ್ಯ ಮುಂತಾದ ಶರಣರು ಧರ್ಮ ಪ್ರಚಾರ ಮಾಡುತ್ತಾ ತರೀಕೆರೆಯ ಸುತ್ತ ಸಂಚರಿಸುತ್ತಾರೆ. ಅಕ್ಕನಾಗಮ್ಮ ಎಣ್ಣೆಹೊಳೆ ಮಠದಲ್ಲಿ ಲಿಂಗಾನುಷ್ಠಾನ ಮಾಡುತ್ತಾ ಲಿಂಗೈಕ್ಯಳಾಗುತ್ತಾಳೆ
ನುಲಿಯ ಚಂದಯ್ಯ ತರೀಕೆರೆ ಸಮೀಪದ ಕಲ್ಲತ್ತಗಿರಿ, ನಂದಿ ಎಂಬಲ್ಲಿ ಕೆಲವುಕಾಲ ಇದ್ದು ಧರ್ಮ ಪ್ರಸಾರ ಮಾಡುತ್ತ ರಾಮಗಿರಿ ಸಮೀಪದ ನೂಲೇನೂರು ಎಂಬಲ್ಲಿಗೆ ಬರುತ್ತಾರೆ. ಅಲ್ಲಿನ ಪದ್ಮಾವತಿ ಎಂಬ ಶ್ರೀಮಂತೆಯಿಂದ ಒಂದು ಕರೆಯನ್ನು ಕಟ್ಟಿಸುತ್ತಾರೆ. ಕೆರೆಯ ಏರಿಯ ಮೇಲೆ ಆಕೆ ನುಲಿಯ್ಯ ಚಂದಯ್ಯನವರಿಗೆ ಮಠವನ್ನು ನಿರ್ಮಿಸಿಕೊಡುತ್ತಾಳೆ. ಲಿಂಗದೀಕ್ಷೆ ನೀಡುತ್ತಾ ಆ ಭಾಗದ ಅನೇಕರಿಗೆ ಶರಣ ಧರ್ಮ ಬೋಧಿಸುತ್ತಾ, ಶಿವಾನುಭವಗೋಷ್ಠಿಗಳನ್ನು ನೆರೆವೇರಿಸುತ್ತಾ ಇದ್ದು ಕೆಲವು ದಿನಗಳ ನಂತರ ಅದೇ ಮಠದಲ್ಲಿಯೇ ಲಿಂಗೈಕ್ಯರಾದರು. ಅವರ ಕ್ರೀಯಾ ಸಮಾಧಿಯನ್ನು ಅಲ್ಲಿಯೇ ಮಾಡಲಾಗಿದ್ದು ಸಮಾಧಿಯು ಇಂದಿಗೂ ಇದೆ.
ನೂಲೇನೂರಿನಲ್ಲಿ ಚಂದಯ್ಯನವರು ನೆಲೆನಿಂತು ಶಿವಾನುಭವ ಗೋಷ್ಠಿ ನಡೆಸುತ್ತಿದ್ದ ವಿಷಯ ತಿಳಿಸುವ ವಿಪುಲವಾದ ಸಾಹಿತ್ಯ ಈ ಭಾಗದ ಜನಪದರಲ್ಲಿ ಇಂದಿಗೂ ಕಂಡು ಬರುತ್ತದೆ. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ಕಲಾತ್ಮಕ ಕೈಲಾಸ ಮಂಟಪದಲ್ಲಿರುವ ಏಳು ಶರಣರ ಚಿತ್ರಗಳಲ್ಲಿ ನುಲಿಯ ಚಂದಯ್ಯನವರ ಚಿತ್ರದ ಕೆಳಗೆ ಅವರ ಹೆಸರು ಇರುವುದು ವಿಶೇಷ. ಬಸವಕಲ್ಯಾಣದಲ್ಲಿದ್ದಾಗ ನಿತ್ಯ ಅನುಷ್ಠಾನ ಮಾಡುತ್ತಿದ್ದ ಗವಿಯನ್ನು ನುಲಿಯ್ಯ ಚಂದಯ್ಯನವರ ಗವಿಯು ಇದೆ. ಚಂದಯ್ಯನ ವಚನಗಳಲ್ಲಿ ಗುರು, ಲಿಂಗ, ಜಂಗಮ ಸ್ವರೂಪ, ಮಾಹಿತಿಗಳು ಅದಕ್ಕಿಂತಲೂ ಹೆಚ್ಚಾಗಿ ಕಾಯಕ ನಿಷ್ಠೆ ಜಂಗಮ ದಾಸೋಹಗಳ ಕುರಿತ ವಿವರ ದೊರೆಯುವುದು.
ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯ ಹುಲ್ಲು ಕೊಯ್ದು
ಮತ್ತಮಾ ಕಣ್ಣ ತಗೆದು ಕಣ್ಣಿಯ ಮಾಡಿ
ಇಹಪರವೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಟಕೂಟವೆಂಬ ಮನದ ಕಣಿಕೆಯಲ್ಲಿ ಕಾಯಕವಾಯಿತ್ತು
ಇದು ಕಾರಣ ಚಂದೇಶ್ವರ ಲಿಂಗವೆಂಬ ಭಾವನೆ ಎನಗಿಲ್ಲ.
ಈ ವಚನದಲ್ಲಿ ಹಗ್ಗ ಹೊಸೆಯ ಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ದತೆ, ಅನುಸರಿಸಬೇಕಾದ ಕ್ರಮವನ್ನು ಶರಣ ಚಂದಯ್ಯ ತಿಳಿಸಿದ್ದಾನೆ.