ರಾಯಚೂರು
ಖಾದಿ-ಖಾವಿ ಶ್ರೇಷ್ಠ ಕಾಯಕದ ಲಾಂಛನಗಳು. ಖಾವಿ ತ್ಯಾಗದ ಸಂಕೇತ. ಆಡುಭಾಷೆಯಲ್ಲಿ ಖಾವಿಗೆ ಪರ್ಯಾಯವಾಗಿ ಬೆಂಕಿ ಎಂದು ಬಳಸುತ್ತೇವೆ. ಬೆಂಕಿಯ ಸುಡುವ ಗುಣದಲ್ಲಿ ತನ್ನಲ್ಲಿರುವ ಅರಿಷಡ್ವರ್ಗಗಳನ್ನು ಸುಟ್ಟು ಪರಿಶುದ್ಧರಾಗುವ ಸಂಕೇತವಾಗಿದೆ. ತ್ಯಾಗದ ಪ್ರತಿರೂಪವಾಗಿದೆ. ಲಾಂಛನಕ್ಕೆ ತಕ್ಕ ಆಚರಣೆ ಇದ್ದಾಗ ಸಾರ್ಥಕವೆನಿಸುತ್ತದೆ ಎಂದು ಹುಕ್ಕೇರಿ ತಾಲೂಕು, ಬಸವಬೆಳವಿಯ ಪೂಜ್ಯ ಶರಣಬಸವ ದೇವರು ಹೇಳಿದರು.
ಅವರು ಬಸವ ಕೇಂದ್ರದಲ್ಲಿ ನೀಡಿದ ಅನುಭಾವ ಪ್ರವಚನದಲ್ಲಿ ಮಾತನಾಡಿದರು.
ಇತಿಹಾಸದ ಪುಟಗಳಲ್ಲಿ ಕಂಗೊಳಿಸುವ ಕಲ್ಯಾಣ ಕರ್ನಾಟಕ ರಾಯಚೂರು ಭಾಗದಲ್ಲಿ 50ಕ್ಕೂ ಹೆಚ್ಚು ಶರಣರು ಆಗಿ ಹೋಗಿದ್ದಾರೆ. ಬಸವಣ್ಣನವರು ಹಲವಾರು ಬಾರಿ ಈ ಭಾಗದಲ್ಲಿ ಸಂಚರಿಸಿದ್ದಾರೆ ಎಂದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಕಾಕತೀಯ ರಾಣಿ ರುದ್ರಾಂಬೆ, ಕೆಳದಿ ಚೆನ್ನಮ್ಮ ತ್ರಿಕಾಲ ಲಿಂಗಪೂಜೆ ಮಾಡುತ್ತಾ ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡವರು. ಎಂಟು ಸಾವಿರಕ್ಕು ಹೆಚ್ಚು ಮಠಗಳನ್ನು ಸ್ಥಾಪಿಸಿ ದಾನ, ದತ್ತಿಗಳನ್ನು ನೀಡಿದವರು. ಇಂದು ಮಠಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ, ಸುಮಾರು 1500ಕ್ಕೆ ತಲುಪಿರುವುದು ದುರಂತದ ಸಂಗತಿ.
ರಾಷ್ಟ್ರೀಯ ಬಸವ ದಳಗಳು ಆರಂಭದಲ್ಲಿ ಶರಣ ಸಂಸ್ಕೃತಿಯ ಪ್ರಸಾರ ಕಾರ್ಯ ಮಾಡಿದ ನಂತರದಲ್ಲಿ ಬಸವ ಕೇಂದ್ರ, ಬಸವ ಸಮಿತಿ ಆರಂಭಗೊಂಡವು. ನುಡಿದಂತೆ ನಡೆಯಲು ಪ್ರಯತ್ನಿಸಿದಾಗ ಮಾತ್ರ ಶರಣ ತತ್ವ ಗಟ್ಟಿಗೊಳ್ಳುತ್ತದೆ. ತತ್ವಗಳು ಅಧ್ಯಯನ ಮತ್ತು ವೇದಿಕೆಗಳಿಗೆ ಸೀಮಿತವಾಗುತ್ತಿವೆಯೇ ಹೊರತು ಆಚರಣೆಯಲ್ಲಿ ಬರುತ್ತಿಲ್ಲ.

ಅಂತರಂಗದ ಅಹಂಕಾರ ಕಳೆಯದ ಹೊರತು ಎಷ್ಟು ಬಾರಿ ಶಿವಧ್ಯಾನ ಮಾಡಿದರೂ ಭಕ್ತಿ ಸಲ್ಲದು. ಶರಣರು ದೊಡ್ಡವರೆಂಬ ಸದಾಭಿಮಾನ ಬೇಕು, ಅಂದಾಗ ಮಾತ್ರ ಬಸವ ಕೇಂದ್ರಗಳು ಬೆಳೆಯಲು ಸಾಧ್ಯ. ಬಸವ ತತ್ವದ ಹೆಸರನ್ನು, ಶರಣರನ್ನು ವ್ಯವಹಾರಕ್ಕೆ ಬಳಕೆ ಮಾಡಬೇಡಿ ಎಂದು ನೋವಿನಿಂದ ತಮ್ಮ ಮಾತುಗಳನ್ನು ಹಂಚಿಕೊಂಡರು.
ವಚನವೆಂದರೆ ನಡೆನುಡಿ ಒಂದಾಗಿಪ್ಪವರ ಬದುಕು. ಲಿಂಗ ಜಾತಿಯ ಕುರುಹು ಅಲ್ಲ. ಅದು ಜ್ಯೋತಿ ಸ್ವರೂಪವೆಂದು, ಎಲ್ಲಾ ಜಾತಿ ಮತ್ತು ವರ್ಗದ ಜನರನ್ನು ಒಟ್ಟುಗೂಡಿಸಿದ ಸಂಸ್ಕೃತಿಯೇ ಶರಣ ಸಂಸ್ಕೃತಿ. ಎಲ್ಲಾ ಬಸವ ಭಕ್ತರು ಒಂದಾಗಿ ಶರಣ ಸಮಾಜವನ್ನು ನಿರ್ಮಿಸಬೇಕೆಂದರು.
ರಾಯಚೂರು ಬಸವ ಕೇಂದ್ರ ಶರಣ ತತ್ವ ಪ್ರಸಾರದಲ್ಲಿ ತೊಡಗಿಸಿಕೊಂಡಿರುವುದು, ಅದರ ಕಾರ್ಯ ಚಟುವಟಿಕೆಗಳು ಮುನ್ನಡೆಯುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಅಭಿಮಾನದಿಂದ ಶರಣಬಸವ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೂಜ್ಯ ಶರಣಬಸವ ದೇವರನ್ನು ಬಸವ ಕೇಂದ್ರದ ಪರವಾಗಿ ಗೌರವಿಸಿ, ಸನ್ಮಾನ ಮಾಡಲಾಯಿತು.
ಪಾರ್ವತಿ ಪಾಟೀಲ ಮತ್ತು ಅಶ್ವಿನಿ ಮಾಟೂರ ಅವರ ವಚನ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರ ವಹಿಸಿದ್ದರು. ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೇಖಾ ಪಾಟೀಲ ನಿರೂಪಿಸಿದರು. ನಾಗರಾಜ ಪಾಟೀಲ ಶರಣು ಸಮರ್ಪಣೆ ಮಾಡಿದರು.
ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿಜಯಕುಮಾರ್ ಸಜ್ಜನ, ಕಾರ್ಯದರ್ಶಿಗಳಾದ ಚನ್ನಬಸವಣ್ಣ ಮಹಾಜನಶೆಟ್ಟಿ, ಗಿರಿಜಾ ಶಂಕರ್, ಸಿ.ಬಿ. ಪಾಟೀಲ, ಚನ್ನಬಸವ ಇಂಜಿನಿಯರ್, ವೆಂಕಣ್ಣ, ನಾಗೇಶ್ವರಪ್ಪ ಸೇರಿದಂತೆ ಅಕ್ಕನ ಬಳಗದ ಸರ್ವ ಸದಸ್ಯರು, ಬಸವಾಭಿಮಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೊನೆಗೆ ಎಲ್ಲರೂ ಪ್ರಸಾದ ದಾಸೋಹ ಸ್ವೀಕರಿಸಿದರು.