ಯಲಬುರ್ಗಾ
ಈ ನಾಡಿನಲ್ಲಿ ಗುರು ಬಸವಣ್ಣನವರ ಹುಟ್ಟಿನಿಂದ ಮನುಷ್ಯನ ಅಜ್ಞಾನ, ಅಂಧಕಾರತ್ವ ತೊಲಗಲು ಮೂಲ ಕಾರಣವಾಗಿದೆ. ನಮ್ಮಲ್ಲಿನ ಮೌಢ್ಯಾಚರಣೆ, ಅಂಧಕಾರತ್ವ ತೊಲಗಬೇಕಾದರೆ ತಿಂಗಳಿಗೊಮ್ಮೆಯಾದರು ನಮ್ಮೆಲ್ಲರಿಂದ ಶರಣರ ಚಿಂತನೆ ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ದುಶ್ಚಟಕ್ಕೆ ಬಲಿಯಾಗದೆ ಸುರಕ್ಷಿತವಾಗಿ ಸಾಗಲು ಸಾದ್ಯವಿದೆ ಎಂದು ರಾಷ್ಟ್ರೀಯ ಬಸವದಳದ ಬಸವರಾಜ ಹೂಗಾರ ಹೇಳಿದರು.
ಅವರು ಶರಣಗ್ರಾಮ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾಗಣ ಹಾಗು ರಾಷ್ಟ್ರೀಯ ಬಸವದಳ ಯುವ ಘಟಕದ ವತಿಯಿಂದ, 106 ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ದೇವಪ್ಪ ಕೋಳೂರು, ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷರು ವನಜಭಾವಿ ಇವರು ಮಾತನಾಡಿ, ಗುರು ಬಸವಣ್ಣನವರು ನೀಡಿದ ಈ ಸಮಾನತೆಯ ತತ್ವ ವಿಶೇಷವಾಗಿ ಪರಿಣಮಿಸಿದೆ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸ ಪಡೆಯುವ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದ್ದಾರೆ. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ರೂಪಿಸಿಕೊಳ್ಳುವ ವಿಧಾನಗಳನ್ನು ವಚನ ಸಾಹಿತ್ಯದ ಮೂಲಕ ಜನಮನಗಳಿಗೆ ನೀಡಿದರು. ಅಂತ ಮೌಲ್ಯಯುತವಾದ ತತ್ವವನ್ನು ನಾವೆಲ್ಲರು ಮೈಗೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು.
ಶರಣ ಚನ್ನಬಸವ ದೇವರು ವೀರಾಪುರ ಮಾತನಾಡಿ, ಗುರು ಬಸವಣ್ಣನವರು ಜಾತಿ, ಮತ, ಪಂಥ, ಲಿಂಗ ಭೇದವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾಮಾನವತಾವಾದಿ ಎಂದೂ ಕರೆಯಲಾಗುತ್ತದೆ. “ಮಾನವೀಯತೆ ಹಾಗೂ ಕಾಯಕನಿಷ್ಠೆ ಇವು ಧರ್ಮದ ಬುನಾದಿಯಾಗಬೇಕು” ಎಂದು ಬಲವಾಗಿ ನಂಬಿದ್ದರು. ಗುರು
ಬಸವಣ್ಣನವರ ಪ್ರೇರಣೆಯಿಂದ ಹಲವಾರು ಶರಣರು ಷಟ್ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಒಟ್ಟಾರೆ ಬಸವಣ್ಣನವರ ತತ್ವ ಮೇರು ಪರ್ವತ ಇದ್ದಹಾಗೆ ಎಂದರು.
ಶರಣ ಬಸವನಗೌಡ ಪೋಲಿಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಬಸವಾದಿ ಶಿವಶರಣರ ವಿಚಾರಗಳು ಮೌಲ್ಯಯುತವಾಗಿವೆ.
ಅಸತ್ಯದ ಭ್ರಮೆಯನ್ನು ತೊಲಗಿಸಿ, ಸತ್ಯದ ಭಾವನೆಗಳನ್ನು ಮೂಡಿಸಿಕೊಳ್ಳಲು ಶಿವಯೋಗ ಅತ್ಯಂತ ಸಹಾಯಕವಾಗಿರುತ್ತದೆ.
ಗುರು ಬಸವಣ್ಣನವರ ಧರ್ಮದಲ್ಲಿ ಇಷ್ಟಲಿಂಗದ ಪರಿಕಲ್ಪನೆ ಇದೆ, ದೇವಾಲಯ ವ್ಯವಸ್ಥೆ ಜಡಗೊಂಡಿದ್ದು ಮೇಲು ಕೀಳು, ಶ್ರೇಷ್ಠ ಕನಿಷ್ಠಗಳೆಂಬ ತಾರತಮ್ಯ ಅಲ್ಲಿ ತಾಂಡವವಾಡುತ್ತಿದೆ. ಇದಕ್ಕೆ ರೋಷಿಹೋಗಿ, ಗುರು ಬಸವಣ್ಣನವರ ಸಾಕ್ಷಾತ್ಕಾರದಿಂದ ಹುಟ್ಟಿದ್ದೇ ಇಷ್ಟಲಿಂಗದ ಪರಿಕಲ್ಪನೆ. ಇಲ್ಲಿ ದೇವಸ್ಥಾನಕ್ಕೆ ಭಕ್ತ ಹೋಗಬೇಕಾದ ಅಗತ್ಯವಿಲ್ಲ, ಭಕ್ತನ ದೇಹವನ್ನೇ ದೇವಾಲಯವಾಗಿಸುವ ಪರಿಕಲ್ಪನೆಯೇ ಇಷ್ಟಲಿಂಗ ಮತ್ತು ಶಿವಯೋಗದ ಪರಿಕಲ್ಪನೆಯಾಗಿದೆ. ದೇವಸ್ಥಾನವೆಂಬ ಕೇಂದ್ರೀಕರಣಗೊಳ್ಳುವ ಜಡ ವ್ಯವಸ್ಥೆಯನ್ನು ನಿರಾಕರಿಸಿ, ಕೇಂದ್ರೀಕರಣ ತತ್ವದಲ್ಲಿ ಜಂಗಮವನ್ನು ಒಳಗೊಳ್ಳುವ ವ್ಯಕ್ತಿ ಸ್ವಾತಂತ್ರ್ಯವನ್ನು, ವ್ಯಕ್ತಿತ್ವದ ಘನತೆಯನ್ನು ಗೌರವಿಸುವಂತದ್ದು ಎಂದು ಹೇಳಿದರು.
ಶರಣರಾದ ನಾಗನಗೌಡ ಜಾಲಿಹಾಳ, ಸಂಗನಗೌಡ ವಂಕಲಕುಂಟಿ, ಗಿರಿಮಲ್ಲಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಚಿದಾನಂದಗೌಡ ಗೊಂದಿ, ಶಿವಾನಂದಪ್ಪ ಬೇವೂರು, ಯಮನೂರಪ್ಪ ಬೇವೂರು, ಹನಮೇಶ್ ಹೊಸಳ್ಳಿ, ಬಸಣ್ಣ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಪಕೀರಪ್ಪ ಮಂತ್ರಿ, ಲಿಂಗನಗೌಡ ದಳಪತಿ, ಯಮನೂರಪ್ಪ ಕೋಳೂರು, ಮಲ್ಲಿಕಾರ್ಜುನ ಮಂತ್ರಿ ಸೇರಿದಂತೆ ರಾಷ್ಟ್ರೀಯ ಬಸವದಳ ಯುವ ಘಟಕದ ಅಧ್ಯಕ್ಷ ಶಿವುಕುಮಾರ ಹೊಸಳ್ಳಿ, ಚನ್ನಬಸವ, ಶಾಂತಪ್ಪ ಸೋಮಣ್ಣ ನಿಂಗಪ್ಪ, ದೇವೇಂದ್ರ ಬಸವರಾಜ, ಮಹಾಂತೇಶ, ಹನಮಂತಪಜ್ಜ, ಪ್ರಕಾಶ್ ನಿಂಗಪ್ಪ ಶರಣಪ್ಪ ಹಾಗು ಅಕ್ಕನಾಗಲಾಂಬಿಕ ಮಹಿಳಾ ಗಣದ ಶರಣೆ ಶರಣಮ್ಮ ಪೋಲಿಸಪಾಟೀಲ್, ಸಾವಿತ್ರಮ್ಮ ಆವಾರಿ, ನಾಗಮ್ಮ ಜಾಲಿಹಾಳ, ಶಂಕ್ರಮ್ಮ ಹೊಸಳ್ಳಿ, ಬಸಮ್ಮ ಹೂಗಾರ, ದ್ರಾಕ್ಷಾಯಣಮ್ಮ, ವಿಶಾಲಾಕ್ಷಮ್ಮ, ಅಕ್ಕಮಹಾದೇವಿ ಮೇಟಿ, ರೇಣುಕಮ್ಮ ಮಂತ್ರಿ, ಗುರುಲಿಂಗಮ್ಮ ಮಂತ್ರಿ, ಹನಮಮ್ಮ ಉಚ್ಚಲಕುಂಟಿ, ಯಮನಮ್ಮ ಗೌಡ್ರ ಸೇರಿದಂತೆ ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.