‘ಪ್ರಭುತ್ವ ಧಿಕ್ಕರಿಸಿದ ಸಮಾನತೆ ಪ್ರತಿಪಾದಕ ಅಲ್ಲಮಪ್ರಭು’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕೇಂದ್ರದಲ್ಲಿ ‘ಅಲ್ಲಮ ಅನುಸಂಧಾನ’ ಕೃತಿ ಕುರಿತು ಉಪನ್ಯಾಸ

ಶಿವಮೊಗ್ಗ

ತಳ ಸಮುದಾಯದಲ್ಲಿ ಜನಿಸಿ ಪ್ರಭುತ್ವವನ್ನು ಧಿಕ್ಕರಿಸಿ ಸಮಾನತೆಯನ್ನು ಪ್ರತಿಪಾದಿಸಿದ ವಚನಕಾರ ಅಲ್ಲಮಪ್ರಭು ಎಂದು ಸಹ್ಯಾದ್ರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.

ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ಶುಕ್ರವಾರ 304ನೇ ಶರಣ ಸಂಗಮ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅಲ್ಲಮ ಅನುಸಂಧಾನ ಕೃತಿ ಕುರಿತು ಮಾತನಾಡಿದರು.

ಇಡೀ ಜಗತ್ತು ಕೋವಿಡ್ ಸಂಕಷ್ಟದಲ್ಲಿ ಸಿಲುಕಿ ಒಬ್ಬರಿಗೊಬ್ಬರು ನೋಡಲಾಗದ, ಮಾತನಾಡಲಾಗದ ಸ್ಥಿತಿಯಲ್ಲಿರುವಾಗ ಬಸವಕೇಂದ್ರವು ಅಲ್ಲಮಪ್ರಭು ಕುರಿತು ಆನ್‌ಲೈನ್ ಮೂಲಕ ಏರ್ಪಡಿಸಿದ್ದ ಚಿಂತನ ಕಾರ್ತಿಕ ಉಪನ್ಯಾಸಗಳನ್ನು ಅಲ್ಲಮ ಅನುಸಂಧಾನ ಕೃತಿರೂಪದಲ್ಲಿ ಹೊರತರಲಾಗಿದೆ. ವಿವಿಧ ಸಾಹಿತಿಗಳು, ಲೇಖಕರು, ವಿದ್ವಾಂಸರು ಅಲ್ಲಮನ ಕುರಿತು ಬಹಳಷ್ಟು ಮಾಹಿತಿ ಒದಗಿಸಿದ್ದಾರೆ. ಕೃತಿಯಲ್ಲಿ ಒಟ್ಟಾರೆ 34 ಲೇಖನಗಳಿದ್ದು ಅಲ್ಲಮನನ್ನು ಓದುತ್ತಲೆ ವಚನ ಸಾಹಿತ್ಯ, ವಿವಿಧ ವಚನಕಾರರ ಬಹಳಷ್ಟು ಮಾಹಿತಿ ದೊರಕುತ್ತಾ ಹೋಗುತ್ತದೆ ಎಂದರು.

ಹಣತೆ ಇದೆ, ಬತ್ತಿ ಇದೆ, ಜ್ಯೋತಿಯು ಬೆಳಗಿದೆ. ಬೇಕಾದಷ್ಟು ಜ್ಞಾನವೂ ಇದೆ. ಆದರೆ, ಯಾರೂ ಓದುವ ಮನಸ್ಥಿತಿಯಲ್ಲಿ ಇಲ್ಲ. ಕೆಲಸದ ಒತ್ತಡದಲ್ಲಿ ಸಿಲುಕಿ ಒಬ್ಬರಿಗೊಬ್ಬರು ಮಾತನಾಡಲಾಗದ, ನೋಡಲಾಗದ ವಾತಾವರಣವನ್ನು ನಿರ್ಮಿಸಿಕೊಂಡಿದ್ದೇವೆ. ಮಾತುಗಳನ್ನು ಕಳೆದುಕೊಂಡಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಮಾಜಿಕ ಜಾಲ ತಾಣಗಳಲ್ಲಿ ಯಾರೋ ಹಾಕಿದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡದೆ ಫಾರ್ವರ್ಢ್ ಮಾಡುವ ಯಂತ್ರಗಳಂತಾಗಿದ್ದೇವೆ. ನಾವು ಮಾಡುತ್ತಿರುವ ತಪ್ಪಾದರೂ ಏನು ಎಂದು ಆಲೋಚಿಸದ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ಇಂತಹ ಕಾಲಘಟ್ಟದಲ್ಲಿ ಅಲ್ಲಮನ ಪ್ರತಿಯೊಂದು ಮಾತು ನಮಗೆ ಕಣ್ತೆರೆಸುವಂತಿವೆ. ಅರಿವೇ ನಿನ್ನ ಗುರು, ನಿನ್ನೊಳಗಿನ ಬೆಳಕೆ ನಿನಗೆ ದಾರಿ ಎನ್ನುವ ಅಲ್ಲಮ ಜ್ಞಾನ ಸಂಪಾದಿಸಿ ಕಂಗಳೊಳಗಿನ ಕತ್ತಲನ್ನು ತೊಡೆದು ಹಾಕುವಂತೆ ಹೇಳುತ್ತಾನೆ. ಪ್ರಭುತ್ವವನ್ನು ಧಿಕ್ಕರಿಸಿ ಸಮಾನತೆಯನ್ನು ಪ್ರತಿಪಾದಿಸುವ ಅಲ್ಲಮ ವಚನಕಾರರ ಸಿದ್ಧಾಂತಗಳನ್ನೂ ಮೀರಿ ನಡೆಯುತ್ತಾನೆ. ವೈರುಧ್ಯಗಳ ಕಾಲದಲ್ಲಿ, ತಳವರ್ಗದವರಲ್ಲಿ ಜಾಗೃತಿ ಮೂಡಿಸಿ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಾನೆ ಎಂದರು.

ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್ ಮಾತನಾಡಿ, ಭ್ರಷ್ಟಾಚಾರ ತೊಡೆದು ಹಾಕಲು ರಾಜ್ಯ ಸರಕಾರ 1980ರ ದಶಕದಲ್ಲಿ ಕಾಯಿದೆಯನ್ನು ರೂಪಿಸಿತು. ಆದರೆ, ಭ್ರಷ್ಟಾಚಾರದ ಬಗ್ಗೆ 12ನೇ ಶತಮಾತನದಲ್ಲಿ ಬಸವಾದಿ ಶರಣರು ಜಾಗೃತಿ ಮೂಡಿಸಿದ್ದರು. ಪ್ರಪಂಚಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕೊಡುಗೆ ಕೊಟ್ಟವರು (ಮದರ್ ಆಫ್ ಡೆಮಾಕ್ರಸಿ) ನಾವು ಎಂದು ಬ್ರಿಟಿಷರು ಹೇಳಿಕೊಳ್ಳುತ್ತಾರೆ. ಆದರೆ, ಬಸವಾದಿ ಶರಣರನ್ನು ಫಾದರ್ ಆಫ್ ಡೆಮಾಕ್ರಸಿ ಎಂದು ಹೇಳಬಹುದು. ಏಕೆಂದರೆ 9 ಶತಮಾನಗಳ ಹಿಂದೆಯೆ ಅನುಭವ ಮಂಟಪದ ಮೂಲಕ ಮಾದರಿ ಸಂಸತ್ ನಡೆಸಿದ್ದರು ಎಂದರು.

ಬಸವಕೇಂದ್ರದ ಡಾ. ಬಸವಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಚ್.ಎನ್. ಮಹಾರುದ್ರ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *