ಶಿವಮೊಗ್ಗ
ಶಿವಮೊಗ್ಗ ಬಸವ ಕೇಂದ್ರದಲ್ಲಿ ವಚನ ದರ್ಶನ ಪ್ರವಚನ ಶಿವಾನುಭವ ಸಪ್ತಾಹದ 2ನೇ ದಿನ ಶುಕ್ರವಾರ ಸಂಜೆ ‘ಸಂಸ್ಕೃತಿ’ ಎಂಬ ವಿಷಯ ಕುರಿತು ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಪ್ರವಚನ ನೀಡಿದರು.
ಸಮುದಾಯದ ಸಂಪ್ರದಾಯಗಳಿಂದ ಹಿಡಿದು ವೈಯಕ್ತಿಕವಾದ ಆಚರಣೆಗಳವರೆಗೂ ಸಂಸ್ಕೃತಿಯ ವ್ಯಾಪ್ತಿ ಹಬ್ಬಿದೆ. ಸಂಸ್ಕೃತಿ ನಿರಂತರವಾದ ಬದಲಾವಣೆಗೆ ಒಳಪಟ್ಟಿರುತ್ತದೆ. ದೇಶ ಕಾಲಗಳ ಪರಿಮಿತಿಯಲ್ಲಿ ಸಂಸ್ಕೃತಿ ರೂಪುಗೊಳ್ಳುತ್ತದೆ. ಪ್ರಗತಿಯಷ್ಟೇ ಅಲ್ಲ, ವಿಗತಿಯೂ ಸಂಸ್ಕೃತಿಯ ಭಾಗವಾಗಿದೆ!

ವಚನ ಸಂಸ್ಕೃತಿ ಎಂದರೆ ಶರಣರ ವಚನಗಳ ಮೂಲಕ ವ್ಯಕ್ತವಾದ ಸಮಾನತೆ, ಭಕ್ತಿ, ಕಾಯಕ, ದಾಸೋಹ ಮತ್ತು ಸಮಾಜ ಪರಿವರ್ತನೆಯ ಜೀವನಶೈಲಿ. ಶರಣ ಸಂಸ್ಕೃತಿಯು ವಿಭಜನೆಗೆ ಕಾರಣವಾದ ಭೇದವನ್ನು ನಿರಸನ ಮಾಡುತ್ತದೆ.
ದೇವರನ್ನು ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗವಾಗಿ ಚಿತ್ರಿಸುತ್ತದೆ. ಎಲ್ಲೆಡೆಯೂ ದೇವರೇ ಇದ್ದಾನೆ ಎಂದು ಪ್ರತಿಪಾದನೆ ಮಾಡುತ್ತದೆ! ದೇವರ ಹೆಸರಿನಲ್ಲಿ ನಡೆಯುವ ಪ್ರಾಣಿವಧೆ, ಮೌಢ್ಯತೆಗಳ ನಿರಾಕರಿಸುತ್ತದೆ.

ವಸ್ತುಗಳು, ಜೀವ, ಜಗತ್ತು ಮಾಯೆಯಲ್ಲ! ನಮ್ಮ ಗುಣ ದೌರ್ಬಲ್ಯಗಳೇ ಮಾಯೆಗೆ ಮೂಲ ಎಂದು ತಿಳಿಸಿ ಮಾಯೆಯ ಕುರಿತಾದ ಜ್ಞನೋದಯವನ್ನು ಮಾಡಿಸುತ್ತದೆ. ಕಾಯಕ- ದಾಸೋಹ, ಸ್ತ್ರೀ ಸಮಾನತೆ, ಜಾತೀಯತೆಯ ನಿರಸನ, ದೇವರ ವೈಯಕ್ತೀಕರಣ ಮತ್ತು ಧರ್ಮದ ಸಾರ್ವತ್ರೀಕರಣ ಶರಣ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿದೆ.
ತಾ. ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಲಿಂ. ಶಾರದಮ್ಮ ಲಿಂ. ಸಿ. ಎಂ. ಪಾಪಣ್ಣ ದತ್ತಿಯ ಆಶ್ರಯದಲ್ಲಿ ನಡೆದ ಈ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಆರ್.ಎಸ್. ಸ್ವಾಮಿ ವಹಿಸಿಕೊಂಡಿದ್ದರು.

ದತ್ತಿದಾನಿಗಳಾದ ಶರಣ ಸಂದೀಪ್ ಶಾಸ್ತ್ರಿ ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಕು. ತನ್ಮಯಿ ಪ್ರಾರ್ಥಿಸಿದರೆ, ಕು. ಡಿಂಪನ ನಿರೂಪಿಸಿದರು.