ಶಿವಶರಣ ಒಕ್ಕಲಿಗ ಮುದ್ದಣ ಶರಣೋತ್ಸವ
ಚಿತ್ರದುರ್ಗ:
ಕಠಿಣ ಪರಿಶ್ರಮದಿಂದ ಬೆವರನ್ನು ಸುರಿಸಿ ದುಡಿಯುವವರಿಗೆ ಸಮಾಜ ತಕ್ಕ ಪ್ರತಿಫಲ, ಗೌರವಧಾರ ನೀಡದ ಹೊರತು ಸುಧಾರಣೆ ಎನ್ನುವುದು ಕಷ್ಟದ ಮಾತು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದುಡಿಯುವ ವರ್ಗವನ್ನು ಕೀಳಾಗಿ ಕಾಣುವ ಪ್ರವೃತ್ತಿ ತೊಲಗದೇ ಹೋದಲ್ಲಿ ಶರಣರು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗುವುದು ಕೇವಲ ಬಾಯುಪಚಾರದ ಮಾತಾಗುತ್ತದೆ.
ಪ್ರತಿಯೊಂದು ವೃತ್ತಿಯವರನ್ನು ಹನ್ನೆರಡನೇ ಶತಮಾನದಲ್ಲಿ ಸರ್ವ ಸಮಾನತೆಯಿಂದ ನೋಡಿಕೊಂಡ ಪರಿಣಾಮ ಅನುಭವ ಮಂಟಪದಲ್ಲಿ ಎಲ್ಲರೂ ಬೆರೆಯಲು ಸಾಧ್ಯವಾಯಿತು.
ಅವರಲ್ಲೊಬ್ಬರು ನಮ್ಮ ಒಕ್ಕಲಿಗ ಮುದ್ದಣ್ಣ ಶಿವಶರಣರು. ಅವರದು ನೇಗಿಲ ಧರ್ಮ. ಈ ಕಾಯಕವನ್ನು ಮಾಡುತ್ತಲೇ ಅವರು ಅನ್ನ ನೀಡುವ ಜೊತೆಗೆ ಬೌದ್ಧಿಕ ವಿಚಾರಗಳೊಡಗೂಡಿದ ವಚನಗಳನ್ನು ರಚಿಸಿದರು ಡಾ. ಬಸವಕುಮಾರ ಸ್ವಾಮೀಜಿ ಸ್ಮರಿಸಿಕೊಂಡರು.
ಈಗ ಅಂದಿನ ಎಲ್ಲ ವೃತ್ತಿ ಸೂಚಕ ಕಾಯಕ ಶಬ್ದಗಳೆಲ್ಲ ಜಾತಿಯಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ. ಒಕ್ಕಲುತನ, ಲಿಂಗಾಯತ ಅವರ ನಡೆ ನುಡಿಗಳ ಆಚರಣೆಗಳ ಮೇಲೆ ಅವಲಂಬಿತವಾದ ಶಬ್ದಗಳೇ ವಿನಃ ,ಜಾತಿಗಳಲ್ಲ. ಆದರೆ ಇವತ್ತೇನಾಗಿದೆ ಎಂದರೆ ಬೇಸಾಯ ಮಾಡುವ ವೃತ್ತಿಯೇ ಒಂದು ಜಾತಿ ಆಗಿದೆ., ಎಂದರು.

ಅಂದಿನ ಕಾಲದಲ್ಲಿ ಗುರು, ಲಿಂಗ, ಜಂಗಮ, ದಾಸೋಹ, ಶಿವಯೋಗ, ಪ್ರಸಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಹೀಗೆ ಅನೇಕ ಆಚರಣೆಯ ಪದ್ಧತಿಗಳಿದ್ದವು.
ಇದಾರಚೆಗೆ ಅತ್ಯಂತ ಮಹತ್ವದ ಕಾಯಕ ಎನ್ನುವ ಪರಿಕಲ್ಪನೆ ಆಚರಣೆಯಲ್ಲಿತ್ತು. ಅಲ್ಲಿ ಆಳ್ದರಸನಿಂದ ಆಳಿನವರೆಗೂ, ಗುರುವಿನಿಂದ ಶಿಷ್ಯನವರೆಗೂ ಒಟ್ಟಾರೆಯಾಗಿ ಕಾಯಕದಿಂದಲೇ ತಮ್ಮನ್ನ ಗುರುತಿಸಿಕೊಳ್ಳುವ ಪರಿಪಾಠವಿತ್ತು. ಅದರಂತೆ ನಾವು ನಂಬಿರುವ ದೇವರಿಗೂ ಒಂದು ಕಾಯಕ ಅಂತ ಇತ್ತು. ಅಂದಿನ ಕಾಲದಲ್ಲಿ ಕಾಯಕ ಅಂದರೆ ಯಾರು ಸಹ ದುಡಿಯದೇ ತಿನ್ನುವ ಹಕ್ಕಿರಲಿಲ್ಲ. ಕುಂತುಣ್ಣುವವರಿಗೆ ಅಂದು ಮನ್ನಣೆ ಇರಲಿಲ್ಲ. ಎಲ್ಲರೂ ಸಹ ದುಡಿದುಣ್ಣುವ ವ್ಯವಸ್ಥೆಗೆ ಭಾಜನರಾಗಿದ್ದರು ಎಂದು ಹೇಳಿದರು.
ಈ ಸಂದರ್ಭ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಕಾಳೇಗೌಡ ಬಸಪ್ಪ ಗುಡಸಿ ಸೇರಿದಂತೆ ಭಕ್ತರು, ಅಭಿಮಾನಿಗಳು, ಸಾರ್ವಜನಿಕರು ಎಸ್ ಜೆ ಎಂ ವಿದ್ಯಾ ಸಂಸ್ಥೆಯ ಕೆಲ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್ ಜೆ ಎಂ ಔಷಧ ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಕಟ್ಟಿ ವಚನ ಪ್ರಾರ್ಥನೆ ಮಾಡಿದರು. ಸಹಪ್ರಾಧ್ಯಾಪಕಿ ಪೂಜಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರೆ, ಸಹಪ್ರಾಧ್ಯಾಪಕಿ ಮೇಘನಾ ಶರಣು ಸಮರ್ಪಣೆ ಮಾಡಿದರು. ಉಳುವಾ ಯೋಗಿಯ ನೋಡಲ್ಲಿ ರೈತಗೀತೆ ಹಾಡುತ್ತಾ ಶಿವಶರಣ ಒಕ್ಕಲಿಗ ಮುದ್ದಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
