ತುಮಕೂರು
ಸಿದ್ದಗಂಗಾ ಶ್ರೀಗಳ ಜೀವನ ಶಾಲಾ, ಕಾಲೇಜುಗಳ ಪಠ್ಯವಾಗುವಂತೆ ಮಾಡಿದರೆ ಹೆಚ್ಚಿನವರಿಗೆ ಶ್ರೀಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದು ನಾಡೋಜ ಗೋ.ರು.ಚನ್ನಬಸಪ್ಪ ಶನಿವಾರ ಹೇಳಿದರು.
ಜೊತೆಗೆ ಇವರ ಎಲ್ಲ ಕೃತಿಗಳನ್ನು ಸಂಪಾದಿಸಿ, ಅವುಗಳನ್ನು ಸಣ್ಣ ಸಣ್ಣ ಪುಸ್ತಕದ ರೂಪದಲ್ಲಿ ಇಂಗ್ಲಿಷ್ಗೆ ಭಾಷಾಂತರಿಸುವ ಕೆಲಸವಾದರೆ ಮತ್ತಷ್ಟು ಜನರನ್ನು ತಲುಪಬಹುದು ಎಂದರು.
ನಗರದ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪದ್ಮಭೂಷಣ ಡಾ. ಶ್ರೀ ಶಿವಕುಮಾರಸ್ವಾಮೀಜಿಗಳು’ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

900 ಪುಟಗಳ ಗ್ರಂಥವನ್ನು ಜಾನಪದ ವಿದ್ವಾಂಸ ಹಾಗೂ ಸಿದ್ದಗಂಗಾ ಮಾಸಪತ್ರಿಕೆಯ ಸಂಪಾದಕ ಎಚ್.ಎಸ್.ಸಿದ್ದಗಂಗಪ್ಪ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಜೀವನ, ಸಾಧನೆ, ಸಂದೇಶ ಕುರಿತು ಬರೆದಿದ್ದಾರೆ.
ನಾಡಿನ ಹಲವು ಗುರುಗಳನ್ನು ನೋಡಿದ್ದೇನೆ. ಯಾವ ಗುರುವರ್ಯರಿಗೂ ಶ್ರೀ ಶಿವಕುಮಾರ ಸ್ವಾಮೀಜಿಯ ಕುರಿತು ಬಂದಿರುವಷ್ಟು ಕೃತಿಗಳು ಪ್ರಕಟಗೊಂಡಿಲ್ಲ. ಪದ್ಮಭೂಷಣ ಡಾ. ಶ್ರೀ ಶಿವಕುಮಾರಸ್ವಾಮೀಜಿ ಕೃತಿಯ ಲೇಖಕರಾದ ಎಚ್.ಎಸ್. ಸಿದ್ದಗಂಗಪ್ಪ ಅವರು ಶ್ರೀ ಗಳನ್ನು ಹತ್ತಿರದಿಂದ ಬಲ್ಲವರು. ಹಾಗಾಗಿಯೇ ಹೆಚ್ಚು ನಿಖರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ.

ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತರಲ್ಲಿಯೇ ದೇವರನ್ನು ಕಂಡವರು. ಧಾರ್ಮಿಕತೆಗೆ ಹೊಸ ಭಾಷ್ಯ ಬರೆದ ಇವರನ್ನು ವರ್ಣಿಸಿದರೆ, ದೇವರನ್ನು ಪರಿಚಯಿಸಿದಂತೆ ಎಂದು ಗೋ.ರು.ಚನ್ನಬಸಪ್ಪ ಹೇಳಿದರು.
ಕೃತಿಯ ಲೇಖಕ ಎಚ್.ಎಸ್.ಸಿದ್ದಗಂಗಪ್ಪ ಮಾತನಾಡಿ ಈ ಗ್ರಂಥದಲ್ಲಿ ಶ್ರೀಗಳ ಪ್ರತಿಯೊಂದು ಕ್ಷಣವನ್ನು ಅಕ್ಷರ ರೂಪಕ್ಕೆ ತರಲು ಪ್ರಯತ್ನಿಸಲಾಗಿದೆ. ಪ್ರತೀ ದಿನ ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯ ವೇಳೆ ಶ್ರೀಗಳು ಮಾಡಿರುವ ನೀತಿ ಬೋಧನೆಯ ಭಾಷಣಗಳು, ವಿವಿಧ ಕೃತಿಗಳಿಗೆ ಬರೆದಿರುವ ಮುನ್ನುಡಿ, ಆಶಯ ನುಡಿಗಳ ಸಂಗ್ರಹವೂ ಇದೆ.

ಸರಳ ಕನ್ನಡದಲ್ಲಿ ಎಲ್ಲರಿಗೂ ಅರಿವಾಗುವ ರೀತಿ ಈ ಕೃತಿಯನ್ನು ರಚಿಸಲಾಗಿದೆ. ಬಳ್ಳಾರಿಯ ಸಿರಗುಪ್ಪದ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಇದರ ಮುದ್ರಣದ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಬಾಲಚಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ಇದೇ ವೇಳೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ‘ಪದ್ಮಭೂಷಣ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳು’ ಕೃತಿಯ ಲೇಖಕರಾದ ಎಚ್.ಎಸ್.ಸಿದ್ದಗಂಗಪ್ಪ ಅವರಿಗೆ ಶ್ರೀ ಸಿದ್ದಗಂಗಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕೋರಂ.ಬಸವರಾಜು ಕೃತಿಯ ಕುರಿತು ಮಾತನಾಡಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರಸ್ವಾಮೀಜಿ, ಗೀತಾಂಜಲಿ ಗ್ರಾಫಿಕ್ ಮಾಲಕ ಜಿ.ನಾಗಸುಂದರ್, ಗುತ್ತಿಗೆದಾರ ಆರ್.ಸಿ.ಪಂಪನಗೌಡರ್, ಮುದ್ರಣ್ಣನವರು, ಮರೇಗೌಡ ಮತ್ತಿತರರಿದ್ದರು.