ಬೀದರ
ಅಕ್ಕ ನಾಗಲಾಂಬಿಕಾ ತಾಯಿಯವರ ಗರ್ಭದಲ್ಲಿರುವಾಗಲೇ ಗರ್ಭ ಲಿಂಗದೀಕ್ಷೆಯನ್ನು ಬಸವಣ್ಣನವರು ನೀಡಿದ್ದರಿಂದಲೇ ಚನ್ನಬಸವಣ್ಣನವರು ಅವಿರಳಜ್ಞಾನಿ, ಚಿನ್ಮಯ ಜ್ಞಾನಿಯಾಗಿ ಹೊರಹೊಮ್ಮಿದ್ದರು. ಕಲ್ಯಾಣದಿಂದ ಉಳವಿ ಕ್ಷೇತ್ರದ ದುರ್ಗಮ ಅರಣ್ಯದೊಳಗೆ ಹೋಗಿ, ಗವಿಯೊಳಗೆ ಕುಳಿತು ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ್ದರು ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾಗಣದ ವತಿಯಿಂದ ಆಯೋಜಿಸಿದ ಚನ್ನಹುಣ್ಣಿಮೆ, ಚನ್ನಬಸವೇಶ್ವರರ ಸಂಸ್ಮರಣೋತ್ಸವ ಹಾಗೂ ಬೆಳದಿಂಗಳೂಟ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಚನ್ನಬಸವೇಶ್ವರರೇ ಹೇಳುವಂತೆ ಅಂತರಂಗದಲ್ಲಿ ಅರಿವಾದರೂ ಕೂಡಾ ಬಹಿರಂಗದಲ್ಲಿ ಅದನ್ನು ಕ್ರಿಯಾರೂಪಕ್ಕೆ ತರದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ದೇಹ ಇಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಇರುವುದಿಲ್ಲ. ಕನ್ನಡಿ ಇಲ್ಲದಿದ್ದರೆ ಅವರವರ ಮುಖ ಕಾಣುವುದಿಲ್ಲ. ಹಾಗೆಯೇ ಒಳಗೂ ಹೊರಗೂ ಒಂದೇ ಶುದ್ಧಭಾವ ಇಟ್ಟುಕೊಳ್ಳಬೇಕೆಂದು ಚನ್ನಬಸವಣ್ಣನವರು ಹೇಳಿದ್ದಾರೆ. ಅವರ ಸಾಹಿತ್ಯ ಸಂದೇಶಗಳು ನಮಗೆಲ್ಲ ಮಾದರಿಯಾಗಿವೆ. ಕೇವಲ ೨೧ನೇ ವಯಸ್ಸಿನಲ್ಲಿ ಅಗಾಧವಾದ ಜ್ಞಾನ ಪಡೆದು ಶರಣ ಸಂದೋಹದ ಪ್ರೀತಿಯ ಕಂದರಾಗಿದ್ದರು ಎಂದು ಚನ್ನಬಸವಾನಂದ ಸ್ವಾಮೀಜಿ ಬಣ್ಣಿಸಿದರು.
ಬಸವ ಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ, ಗುರುವಾದವರು ತನ್ನ ಶಿಷ್ಯನ ಅಗಾಧವಾದ ಜ್ಞಾನಕ್ಕೆ ಬೆಲೆ ಕೊಟ್ಟು ಸೂಕ್ತ ಸ್ಥಾನಮಾನ ನೀಡಬೇಕು ಎನ್ನುವುದಕ್ಕೆ ಗುರುಬಸವಣ್ಣನವರು ಮತ್ತು ಚನ್ನಬಸವೇಶ್ವರರೇ ಜ್ವಲಂತ ಸಾಕ್ಷಿಯಾಗಿದ್ದಾರೆ. ಗುರು ತನ್ನ ಸ್ಥಾನಕ್ಕೆ ಬೆಲೆ ಬರುವಂತೆ ಮಾಡಬೇಕಾದರೆ ಶಿಷ್ಯನ ಏಳ್ಗೆ ಕುರಿತು ಮತ್ಸರ ಪಡಬಾರದು. ಆಗಲೇ ಗುರುವಾದವರು ಎತ್ತರಕ್ಕೆ ಹೋಗುತ್ತಾರೆ ಎಂದು ತಿಳಿಸಿದರು.

ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ, ಮಾರ್ಚ್ ೨೨ ಮತ್ತು ೨೩ ರಂದು ಬೀದರನಲ್ಲಿ ನಡೆಯುವ ಮಹಾದಂಡನಾಯಕರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಮಾತನಾಡಿ, ಬೀದರ ಜಿಲ್ಲೆಯ ಶರಣರ ಭಕ್ತಿ ಮತ್ತು ಪ್ರೀತಿಯನ್ನು ನೋಡಿದರೆ ಬಸವಣ್ಣನವರು ಹಾಗೂ ಶರಣರು ಕಲ್ಯಾಣದ ಬದಲಾಗಿ ಬೀದರನಲ್ಲೇ ಪ್ರಚಾರ ಮಾಡಬೇಕಾಗಿತ್ತು ಎಂದೆನಿಸುತ್ತಿದೆ. ಪೂಜ್ಯ ಮಾತಾಜಿಯವರು ಕಲ್ಯಾಣಕ್ಕೆ ಪಾದಾರ್ಪಣೆ ಮಾಡಿದಾಗಲೇ ಕಲ್ಯಾಣ ಅಭಿವೃದ್ಧಿಯಾಯಿತು ಎಂದು ಬಣ್ಣಿಸಿದರು.

ಶರಣ ತತ್ವ ಪ್ರಚಾರಕರಾದ ಪ್ರಕಾಶ ದೇಶಮುಖ ಮಾತನಾಡಿದರು. ಇದೇ ವೇಳೆ ಬಸವೇಶ್ವರರ ಮತ್ತು ಚನ್ನಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವೇದಿಕೆ ಮೇಲೆ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರೋಟರಿ ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಹಾವಶೆಟ್ಟಿ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಕಲ್ಲಪ್ಪ ದೇಶಮುಖ, ಜೈರಾಜ ಹತ್ತಿ, ಮಲ್ಲಿಕಾರ್ಜುನ ಚಿಟ್ಟಾವಾಡಿ, ಮಲ್ಲಿಕಾರ್ಜುನ ಮುಗನೂರು, ಶಿವರಾಜ ಶೆಟಕಾರ, ನಿರ್ಮಲಾ ನಿಲಂಗೆ, ದಾಸೋಹಿಗಳಾದ ಅಕ್ಕಮಹಾದೇವಿ ಶಿವಾನಂದ ಸ್ವಾಮಿ, ಸಿದ್ದಪ್ಪ ಜೀರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲ್ಯಾಣರಾವ ಬಂಬುಳಗಿ ಹಾಗೂ ಬಸವರಾಜ ಲಾಧಾ ಸಂಗಡಿಗರಿಂದ ವಚನ ಭಜನೆ ಜರುಗಿತು. ಬಸವಕುಮಾರ ಚಟ್ನಳ್ಳಿ ನಿರೂಪಿಸಿದರು. ಶಿವಕುಮಾರ ಪಾರಾ ಸ್ವಾಗತಿಸಿದರು. ಸತೀಶ ಪಾಟೀಲ ಹಾರೂರಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಶರಣ-ಶರಣೆಯರು ಉಪಸ್ಥಿತರಿದ್ದರು.