ಸಾಣೇಹಳ್ಳಿ
ಕರ್ನಾಟಕದ ಮಠಪೀಠಗಳ ಇತಿಹಾಸದಲ್ಲಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ತನ್ನದೇ ಆದ ಇತಿಹಾಸ ಇದೆ. ಸದ್ಧರ್ಮ ಪೀಠ ಸಂಸ್ಥಾಪಕರು ಬಸವಾದಿ ಶಿವಶರಣರ ಸಮಕಾಲೀನರಾಗಿದ್ದ ವಿಶ್ವಬಂಧು ಮರುಳಸಿದ್ಧರು. ಈ ಪೀಠದಲ್ಲಿ ೨೦ನೆಯ ತರಳಬಾಳು ಜಗದ್ಗುಗಳಾಗಿದ್ದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಇವರು ಕ್ರಾಂತಿಕಾರಿ ಗುರು ಎಂದೇ ಪ್ರಖ್ಯಾತರು.
ಇಂತಹ ಪೂಜ್ಯರ ೩೪ನೆಯ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಾಣೇಹಳ್ಳಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ.
೨೪/೦೯/೨೦೨೫ರ ಬೆಳಗ್ಗೆ ೧೧ ಗಂಟೆಗೆ ಮಹಾವೇದಿಕೆಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಆರಂಭಗೊಳ್ಳುವ ಸಭಾ ಕಾರ್ಯಕ್ರಮಗಳಿಗೆ ವಿಶಾಲವಾದ ಸಭಾ ವೇದಿಕೆ ಮತ್ತು ಮಹಾಮಂಟಪ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಅಲ್ಲಮಪ್ರಭು ಮಂಟಪ’ದ ಮುಖ್ಯದ್ವಾರವನ್ನು ಒಳಗೊಂಡಂತೆ ‘ವಿಶ್ವಬಂಧು ಮರುಳಸಿದ್ಧ’ ವೇದಿಕೆಯು ೪೦*೬೦ ಅಡಿ ವಿಸ್ತೀರ್ಣ ಹೊಂದಿದ್ದು, ಎರಡೂ ಬದಿಯಲ್ಲಿ ಗ್ರೀನ್ ರೂಂಗಳ ಸೌಲಭ್ಯ ಕಲ್ಪಿಸಲಾಗಿದೆ.
ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು ೧೮೦*೨೦೦ ಅಡಿಯ ವಿಶಾಲ ಮಹಾಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಮಂಟಪದ ಸುತ್ತಲೂ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ನುಡಿಮುತ್ತುಗಳನ್ನು ಹಾಕಲಾಗಿದೆ.

ಮಂಟಪದ ಎಡ ಬಲ ತುದಿಯಲ್ಲಿ 8 ಸಾವಿರ ಖುರ್ಚಿಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. ಸಭಾ ಕಾರ್ಯಕ್ರಮವನ್ನು ವೀಕ್ಷಿಸಲು ೫ ಕಡೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತಕ್ಕೆ ತಲುಪಿದ್ದು ನೂರಾರು ಕಾರ್ಯಕರ್ತರು, ಗ್ರಾಮಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಂಡ ಹಗಲಿರುಳು ಶ್ರಮವಹಿಸುತ್ತಿದ್ದಾರೆ.
ಸಭಾಮಂಟಪದಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕ ‘ಶ್ರೀ ಗುರುಪಾದೇಶ್ವರ ದಾಸೋಹ ಮಂಟಪ’ ನಿರ್ಮಾಣ ಮಾಡಲಾಗಿದೆ. ಒಟ್ಟಿಗೆ ಬಫೆ ಪದ್ಧತಿಯಲ್ಲಿ ಪ್ರಸಾದ ಸ್ವೀಕರಿಸಲು ಕೌಂಟರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸುಮಾರು 15 ರಿಂದ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ.
ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಕ್ತರಿಂದ ಅಕ್ಕಿ, ಬೆಲ್ಲ, ಬೇಳೆ, ಸಕ್ಕರೆ, ಗೋದಿ ನುಚ್ಚು, ಮುಂತಾದ ಸಾಮಗ್ರಿಗಳು ಬಂದಿವೆ. ಇನ್ನುಳಿದಂತೆ ತರಕಾರಿ, ಆಹಾರ ಸಾಮಗ್ರಿಗಳನ್ನು ಹೆಚ್ಚು ಪ್ರಮಾಣದಲ್ಲಿ ನೀಡುವ ವಾಗ್ದಾನವನ್ನು ಭಕ್ತರು ಮಾಡಿದ್ದಾರೆ. ಚನ್ನಗಿರಿಯ ತುಮ್ಕೋಸ್ ಸಂಸ್ಥೆಯಿಂದ ಲಾಡಿನ ವ್ಯವಸ್ಥೆ ಮಾಡಿದ್ದಾರೆ.
೨೪ರ ಬೆಳಗ್ಗೆ ೮ ಗಂಟೆಗೆ `ಶಿವ’ಧ್ವಜಾರೋಹಣ ಮತ್ತು `ಶಿವ’ಮಂತ್ರ ಲೇಖನ, ಚಿಂತನೆ ಹಾಗೂ ಸಾಣೇಹಳ್ಳಿ ಪ್ರಮುಖ ಬೀದಿಗಳಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಭಾವಚಿತ್ರ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ ೧೧ ಗಂಟೆಗೆ ನಡೆಯಲಿರುವ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಪಾಂಡೋಮಟ್ಟಿಯ ವಿರಕ್ತಮಠ, ಡಾ. ಗುರುಬಸವ ಮಹಾಸ್ವಾಮಿಗಳು, ಕಡೂರಿನ ಯಳನಾಡು ಮಹಾಸಂಸ್ಥಾನಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನಮಠದ ಜಗದ್ಗುರು ಡಾ. ಶಾಂತವೀರ ಮಹಾಸ್ವಾಮಿಗಳು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಹೊಸದುರ್ಗದ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಮಾಡಾಳು ನಿರಂಜನಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ ವಹಿಸುವರು. ಬೆಂಗಳೂರು ನಿವೃತ್ತ ಆಕಾಶವಾಣಿ ನಿರ್ದೇಶಕರ ಡಾ. ಬಸವರಾಜ ಸಾದರ ಹಾಗೂ ಚಿಂತಕರು ಚಟ್ನಳ್ಳಿ ಮಹೇಶ್ ಗುರುವಂದನೆ ಸಲ್ಲಿಸುವರು.
ಕರ್ನಾಟಕರ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವ ಎಂ ಬಿ ಪಾಟೀಲ್, ದಾವಣಗೆರೆ ಲೋಕಸಭಾ ಸದಸ್ಯ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ, ವೀರಶೈವ ಮಹಾಸಭಾ ಅಧ್ಯಕ್ಷರು, ಬೆಂಗಳೂರು ಶಂಕರ ಬಿದರಿ, ಶಿವಮೊಗ್ಗದ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ್ರು, ಹಿರೇಕೇರೂರಿನ ಮಾಜಿ ಸಚಿವ ಬಿ ಸಿ ಪಾಟೀಲ್, ಹೊಸದುರ್ಗ ಕ್ಷೇತ್ರದ ಶಾಸಕ ಬಿ. ಜಿ. ಗೋವಿಂದಪ್ಪ, ಹರಿಹರ ಕ್ಷೇತ್ರದ ಶಾಸಕ ಬಿ ಪಿ ಹರೀಶ್, ತರೀಕೆರೆ ಕ್ಷೇತ್ರದ ಶಾಸಕ ಜಿ. ಹೆಚ್. ಶ್ರೀನಿವಾಸ್, ಶಿವಮೊಗ್ಗ ವಿಧಾನ ಪರಿಷತ್ ಸದಸ್ಯರು ಡಾ. ಧನಂಜಯ್ ಸರ್ಜಿ, ಕಡೂರಿನ ಮಾಜಿ ಶಾಸಕ ಕೆ. ಬಿ. ಮಲ್ಲಿಕಾರ್ಜುನ, ಚನ್ನಗಿರಿಯ ಮಾಜಿ ಶಾಸಕ ವಡ್ನಾಳ್ ರಾಜಣ್ಣ, ತರೀಕೆರೆಯ ಮಾಜಿ ಶಾಸಕ ಡಿ.ಎಸ್. ಸುರೇಶ್, ಕಡೂರಿನ ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಮುಖ್ಯಸ್ಥ ಡಿ ಜಿ ಬೆನಕಪ್ಪ, ಬೆಂಗಳೂರಿನ ವಿಶ್ರಾಂತ ಕುಲಪತಿ ಡಾ. ಕೆ ಸಿದ್ಧಪ್ಪ, ರಾಣೇಬೆನ್ನೂರಿನ ವರ್ತಕ ಮಲ್ಲೇಶಪ್ಪ ಅರಕೇರಿ, ಬೆಂಗಳೂರು ವಿಮಾನಯಾನ ಪ್ರಾಧಿಕಾರ, ಮಾಜಿ ಅಧ್ಯಕ್ಷರು, ಹನುಮಲಿ ಷಣ್ಮುಖಪ್ಪ, ಶಿವಮೊಗ್ಗ ವರ್ತಕರು ಹೆಚ್ ಓಂಕಾರಪ್ಪ, ದಾವಣಗೆರೆಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಜೆ.ಆರ್. ಷಣ್ಮುಖಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತ ಗೊ. ರು. ಚನ್ನಬಸಪ್ಪ, ಸ್ವಾತಂತ್ರ್ಯ, ಹೋರಾಟಗಾರ ಎನ್.ಎಂ. ಬಸವರಾಜಪ್ಪ, ವರ್ತಕರು ಮಾಗನೂರು ಚನ್ನಬಸವನಗೌಡ್ರು, ನಿವೃತ್ತ ಪ್ರಾಚಾರ್ಯ ಬಿ. ಬಸವಂತಪ್ಪ, ಮಾಜಿ ಪ್ರಧಾನರು ಹಾರನಹಳ್ಳಿ ನಂಜುಂಡಪ್ಪ (ರಾಜಣ್ಣ), ಆಲದಹಳ್ಳಿಯ ಸಮಾಜದ ಹಿರಿಯರು ಹೆಚ್.ಟಿ. ಶಿವಲಿಂಗಪ್ಪ ಇವರನ್ನು ಅಭಿನಂದಿಸಲಾಗುವುದು.
ಕುಮಾರಿ ಅದಿತಿ ವಚನ ನೃತ್ಯ ನಡೆಸಿಕೊಡುವರು. ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡುವರು.
ಪಂಡಿತಾರಾಧ್ಯ ಶ್ರೀಗಳು ಹಾಗೂ ಸಮಾಜದ ಮುಖಂಡರಾದ ಅಣಬೇರು ರಾಜಣ್ಣ, ಎಸ್ ರುದ್ರೇಗೌಡ್ರು, ಓಂಕಾರಪ್ಪ, ಬೆನಕಪ್ಪ, ಶಿವಶರಣಪ್ಪ ಮರಿಯಪ್ಪ, ಶ್ರೀನಿವಾಸ, ಸಂತೋಷ ಶಿವಮೂರ್ತಯ್ಯ, ನಾಗರಾಜ್, ಬಸವಲಿಂಗಪ್ಪ, ಮೋಹನ್, ಪ್ರಕಾಶ ಮತ್ತಿತರರು ವೇದಿಕೆ ಹಾಗೂ ಊಟದ ವ್ಯವಸ್ಥೆಯನ್ನು ವೀಕ್ಷಿಸಿದರು.