ಗದಗ
ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದವರು ಯಾರು ಇಲ್ಲ. ತಾಯಿ ದೇವರಿಗಿಂತಲೂ ಶ್ರೇಷ್ಠ. ತಾಯಿಯೇ ದೇವರು ಎಂದು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೪೫ ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ತಾಯಿಗೆ ಮಾತೃದೇವೋಭವ ಎನ್ನುತ್ತೇವೆ. ತಾಯಿಯನ್ನು ಪ್ರೀತಿ ಗೌರವ ಸಂತೋಷದಿಂದ ನೋಡಿಕೊಳ್ಳಬೇಕು. ತಾಯಿಯೆಂದರೆ ಭೂಮಿಯ ರೂಪ. ಆಕೆ ಭೂಮಿಯಷ್ಟೆ ಸಹನೆ ತಾಳ್ಮೆ ಕರುಣೆವುಳ್ಳವಳು. ತಾಯಿಯ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಶ್ರೀಗಳು ಹೇಳಿದರು.
ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಉಪನ್ಯಾಸಕರಾದ ಶರಣೆ ಸುಧಾ ಹುಚ್ಚಣ್ಣವರ “ತಾಯಿ ಮತ್ತು ಸಂಸ್ಕೃತಿ” ವಿಷಯ ಕುರಿತು ಮಾತನಾಡುತ್ತಾ, ಭಾರತ ವೈವಿಧ್ಯತೆಯಲ್ಲಿ ಸಂಸ್ಕಾರ ಕಂಡ ದೇಶ. ಇಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ತಾಯಿ ಸಂಸ್ಕಾರದ ಪ್ರತೀಕ. ತಾಯಿಯ ಸಂಸ್ಕಾರದಿಂದ ಮಕ್ಕಳು ಒಳ್ಳೆಯವರಾಗುತ್ತಾರೆ. ಆಧುನಿಕ ಜಗತ್ತಿನಲ್ಲಿ ತಾಯಿಯ ಸಂಸ್ಕಾರ ಮುಖ್ಯ. ವೃದ್ದಾಶ್ರಮಗಳು ನಶಿಸಿ ಮತ್ತೆ ಮಾತೃದೇವೋಭವ ಮೊಳಗಬೇಕಾಗಿದೆ. ಮದರ್ ತೆರೇಸಾ, ಸಾಲುಮರದ ತಿಮ್ಮಕ್ಕ ಮುಂತಾದ ಮಹಿಳೆಯರ ಆದರ್ಶಗಳು ಪಾಲನೆಯಾಗಬೇಕಾಗಿದೆ ಎಂದು ತಿಳಿಸಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಕು. ಮನೋಜ ವಾಯ್. ಸುಳ್ಳದ, ವಚನ ಚಿಂತನವನ್ನು ಕು. ನಂದೀಶ್ ಬಿ ಸುಳ್ಳದ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ತೋಂಟದಾರ್ಯ ವಿದ್ಯಾಪೀಠದ ಐಟಿಐ ಕಾಲೇಜಿನ ಸಿಬ್ಬಂದಿವರ್ಗ, ರೇವಣಸಿದ್ದಪ್ಪ ಪಟ್ಟಣಶೆಟ್ಟರ ಹಾಗೂ ಶರಣೆ ಶೀಲಾ ಸುರೇಶ ಸಗರದ ಸಾ. ಸಿಂಧನೂರ ಇವರು ದಾಸೋಹ ಸೇವೆ ವಹಿಸಿಕೊಂಡಿದ್ದರು.
ಶ್ರೀಧರ ಪಾಟೀಲ ಪ್ರಾಚಾರ್ಯರು ಐ ಟಿ ಐ ಕಾಲೇಜ ಗದಗ ಇವರು ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ, ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಹಾಗೂ ಭಕ್ತರು ಉಪಸ್ಥಿತರಿದ್ದರು.
ಸೋಮಶೇಖರ ಪುರಾಣಿಕ ಸ್ವಾಗತಿಸಿದರು. ಡಾ. ಉಮೇಶ ಪುರದ ಕಾರ್ಯಕ್ರಮ ನಿರೂಪಿಸಿದರು.
