ಹೆದ್ದಾರಿ ಅಗಲೀಕರಣಗೊಳಿಸುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ಬಸವ ಪುತ್ಥಳಿಯನ್ನು ತೆರವುಗೊಳಿಸಲಾಗಿತ್ತು.
ಜಹಿರಾಬಾದ್ (ತೆಲಂಗಾಣ)
ಮುಂಬೈ ಹೈದರಾಬಾದ್ ಹೆದ್ದಾರಿಯಲ್ಲಿರುವ ಹುಗ್ಗೆಳ್ಳಿ ಕ್ರಾಸಿನಲ್ಲಿ ಸ್ಥಾಪಿಸಲಾಗಿರುವ ಅಶ್ವಾರೋಹಿ ಬಸವಣ್ಣನವರ ಭವ್ಯವಾದ ಪಂಚಲೋಹದ ವಿಗ್ರಹವನ್ನು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ ರೆಡ್ಡಿ ಶುಕ್ರವಾರ ಅನಾವರಣ ಮಾಡಲಿದ್ದಾರೆ.
ಸಮಾರಂಭದಲ್ಲಿ ಜಹಿರಾಬಾದ ಪಟ್ಟಣದ ಸುತ್ತಮುತ್ತಲಿನ ಹಾಗೂ ನಾಡಿನ ಬಸವಪರ, ಲಿಂಗಾಯತಪರ ಮಠಾಧೀಶರು, ಸ್ವಾಮಿಗಳು, ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಲಿಂಗಾಯತರು, ಬಸವಾಭಿಮಾನಿಗಳು ಪಾಲ್ಗೊಳ್ಳಲು ‘ಲಿಂಗಾಯತ ಸಮಾಜ’ ಮನವಿ ಮಾಡಿಕೊಂಡಿದೆ.
ಐದು ವರ್ಷಗಳ ಮುಂಬೈ ಹೈದರಾಬಾದ್ ಹೆದ್ದಾರಿಯನ್ನು ಅಗಲೀಕರಣಗೊಳಿಸುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ಬಸವ ಪುತ್ಥಳಿಯನ್ನು ತೆರವುಗೊಳಿಸುವ ಪ್ರಸ್ತಾವ ಬಂದಿತ್ತು. ರಸ್ತೆ ಕೆಲಸ ಮುಗಿದ ಮೇಲೆ ಮತ್ತೆ ಪುತ್ಥಳಿಯನ್ನು ಸ್ಥಾಪಿಸಬೇಕೆಂಬ ಷರತ್ತಿನ ಮೇಲೆ ಸ್ಥಳೀಯ ಲಿಂಗಾಯತ ಸಮಾಜ ಒಪ್ಪಿಗೆ ನೀಡಿತ್ತು.

ಈಗ ಹಳೆ ಪುತ್ಥಳಿಯಿದ್ದ ಒಂದು ಕಿಲೋಮೀಟರು ದೂರದಲ್ಲಿಯೇ, ಹೆದ್ದಾರಿಯ ಬದಿಯಲ್ಲಿಯೇ, ಹೊಸ ಪುತ್ಥಳಿಯ ಅನಾವರಣ ನಡೆಯಲಿದೆ.
ಮಂಗಳವಾರ ಪಟ್ಟಣದ ಅನುಭವ ಮಂಟಪದಲ್ಲಿ ಸಂಸದ ಸುರೇಶ್ ಕುಮಾರ್ ಶೆಟ್ಕರ್ ಕಾರ್ಯಕ್ರಮದ ಕುರಿತು ಸ್ಥಳೀಯ ಲಿಂಗಾಯತ ಸಮಾಜ ಮತ್ತು ರಾಷ್ಟ್ರೀಯ ಬಸವದಳದ ಪ್ರಮುಖ ಸದಸ್ಯರೊಂದಿಗೆ ಸಭೆ ನಡೆಸಿದರು.
“ವಿಶ್ವಗುರು ಬಸವಣ್ಣನವರು, 12ನೇ ಶತಮಾನದಲ್ಲಿಯೇ ಜಾತಿ, ವರ್ಣ,ವರ್ಗ, ರಹಿತ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರಗತಿಶೀಲ ಚಿಂತಕರು ಮತ್ತು ಜಗತ್ತಿನಲ್ಲೇ ಮೊದಲ ಸಂಸತ್ ವ್ಯವಸ್ಥೆಯನ್ನು ರೂಪಿಸಿದ ದಾರ್ಶನಿಕರು” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಲ್ಕಾಪೂರದ ಶಿವಕುಮಾರ್, ಹನುಮಂತರಾವ್ ಪಾಟೀಲ್, ರಾಜಶೇಖರ್ ಶೆಟ್ಕರ್, ಶಂಕರ್ ಪಾಟೀಲ್, ರೇಕುಳಗಿ ಸುಭಾಷ್, ಡಾ. ಶರಣಪ್ಪ, ಡಾ. ಬಸವರಾಜ್ ಮಠಪತಿ, ಸೋಮಶೇಖರ್ ಪಾಟಿಲ್, ಇಪ್ಪಪಲ್ಲಿ ನರಸಿಂಹುಲು ಹಾಗೂ ಅಪ್ಪಾರಾವ್ ಗೂನೆಳ್ಳಿ, ಅಶೋಕ್ ಬಶ್ಶೆಟ್ಟಿ, ಉಳಿಗಡ್ಲ ಸಂಗಪ್ಪ ಮತ್ತು ಎಲ್ಲಾ ಲಿಂಗಾಯತ ಧರ್ಮದ ಮುಖಂಡರು ಭಾಗವಹಿಸಿದ್ದರು.
ಬೀದರಿನಿಂದ 30 ಕಿಲೋಮೀಟರು ದೂರದಲ್ಲಿರುವ ಪಟ್ಟಣದಲ್ಲಿ ಸುಮಾರು 3,000 ಲಿಂಗಾಯತರೂ ಸೇರಿದಂತೆ 40,000 ಜನಸಂಖ್ಯೆಯಿದೆ.
