ತೋಂಟದಾರ್ಯ ಜಾತ್ರಾ ಮಹೋತ್ಸವ
ಗದಗ :
ಮನುಷ್ಯನಿಗೆ ಯಾವುದೇ ಬಗೆಯ ಸಿರಿ-ಸಂಪತ್ತುಗಳಿದ್ದರೂ ಆರೋಗ್ಯಭಾಗ್ಯದ ಮುಂದೆ ಅವೆಲ್ಲವೂ ಗೌಣ, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಇಲ್ಲ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ಇತ್ತೀಚೆಗೆ ನಗರದ ಎಸ್.ಎಂ. ಕೃಷ್ಣಾ ನಗರ ಹಾಗೂ ಒಕ್ಕಲಗೇರಿ ಓಣಿಯಲ್ಲಿ ೨೦೨೬ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ವ್ಯಸನಮುಕ್ತ ಸಮಾಜ ಜಾಗೃತಿಗಾಗಿ ಪಾದಯಾತ್ರೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಜಾತ್ರೆಗಳ ಆಚರಣೆಗೆ ಹೊಸ ಭಾಷ್ಯ ಬರೆದ ಶ್ರೀಗಳಾಗಿದ್ದು, ಅನ್ನ-ಅಕ್ಷರ-ಆರೋಗ್ಯವನ್ನೊಳಗೊಂಡು ಜಾತ್ರೆಯಲ್ಲಿ ಜನಸಾಮಾನ್ಯರಿಗೆ ಶ್ರೇಯಸ್ಕರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.

ಕನ್ನಡದ ಕುಲಗುರುಗಳೆಂದು ಖ್ಯಾತರಾಗಿದ್ದ ಅವರ ಚಿಂತನೆಗಳಿಗೆ ಅನುಗುಣವಾಗಿ ಜಾತ್ರಾ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೀಯ. ವ್ಯಸನಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಮ್ಮುಖ ವಹಿಸಿದ್ದ ಮತ್ತೋರ್ವ ಪೂಜ್ಯರಾದ ಸಿರಸಂಗಿ ಮಹಾಲಿಂಗೇಶ್ವರ ಮಠದ ಪೂಜ್ಯರಾದ ಬಸವ ಮಹಾಂತ ಸ್ವಾಮಿಗಳು ಮಾತನಾಡಿ, ಯುವ ಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ದೇಶ ಕಟ್ಟುವ ಹೊಣೆಗಾರಿಕೆ ಹೊತ್ತ ಯುವಜನಾಂಗ ಈ ರೀತಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಯುವಶಕ್ತಿಯ ಮೇಲೆ ಅಪರಿಮಿತ ಅಭಿಮಾನ ಹೊಂದಿದ್ದ ವಿವೇಕಾನಂದರಂಥ ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾತ್ವಿಕ ಜೀವನ ಸಾಗಿಸಬೇಕು ಎಂದರು.
ಅನೇಕ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಗುಟ್ಕಾ, ತಂಬಾಕು, ಬೀಡಿ ಮುಂತಾದ ಮಾದಕ ದ್ರವ್ಯಗಳನ್ನು ಜೋಳಿಗೆಗೆ ಹಾಕುವ ಮೂಲಕ ತ್ಯಜಿಸಿ ಅವುಗಳ ದಾಸರಾಗಲಾರೆವು ಎಂದು ಪ್ರತಿಜ್ಞೆಗೈದರು.

ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಬಸವಕಿರಣ ಸ್ವಾಮೀಜಿಗಳು ಸಮ್ಮುಖವಹಿಸಿದ್ದರು. ಜಾತ್ರಾ ಸಮಿತಿಯ ಅಧ್ಯಕ್ಷರಾದ ವಿನಾಯಕ ಮಾನ್ವಿ ಹಾಗೂ ಎಲ್ಲಾ ಪದಾಧಿಕಾರಿಗಳು, ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಎಸ್.ಎಸ್. ಪಟ್ಟಣಶೆಟ್ಟರ, ಫಕೀರಪ್ಪ ಹೆಬಸೂರ, ಗಂಗಾಧರ ಮೇಲಗಿರಿ, ಬಸವರಾಜ ಕಡೆಮನಿ, ಹೊಳೆಬಸಪ್ಪ ಅಕ್ಕಿ, ಶಕುಂತಲಾ ಅಕ್ಕಿ, ವಸಂತ ಸಿದ್ಧಮನಹಳ್ಳಿ, ಅನಿಲ ಸಿದ್ಧಮನಹಳ್ಳೀ, ಲಕ್ಷ್ಮೀ ಸಿದ್ಧಮನಹಳ್ಳಿ, ಎಂ.ಎಂ. ಹಿರೇಮಠ, ಕೊಟ್ರಪ್ಪ ಕಮತರ, ಸಿದ್ಧಣ್ಣ ಅರಳಿ, ಸಿದ್ಧಣ್ಣ ನಾಲವಾಡದ, ಶಿವಪ್ಪ ಕತ್ತಿ ಸೇರಿದಂತೆ ಶ್ರೀಮಠದ ಭಕ್ತರು, ಸ್ಥಳೀಯರು ಉಪಸ್ಥಿತರಿದ್ದರು.

ನೂರಾರು ಭಕ್ತರು ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
