ಗದಗ
ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ ದಾಖಲೆಯ ಬಜೆಟ್ ಬೇವು-ಬೆಲ್ಲಗಳ ಸಮ್ಮಿಶ್ರಣದಿಂದ ಕೂಡಿದೆ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧಿಪತಿಗಳು ಮತ್ತು ಗಣ್ಯರು ಬಜೆಟ್ ಪೂರ್ವದಲ್ಲಿ ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಹಲವಾರು ಬೇಡಿಕೆಗಳನ್ನು ಮಂಡಿಸಿದ್ದರು. ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂಬ ಘೋಷಣೆ ಮಾತ್ರ ಆಗಿದೆಯೇ ಹೊರತು ಅದಕ್ಕಾಗಿ ಪ್ರತ್ಯೇಕ ಅನುದಾನ ಘೋಷಣೆಯಾಗಿಲ್ಲ.
ಬಜೆಟ್ನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಅಧಿಕ ಪ್ರಮಾಣದಲ್ಲಿ ಹಣವನ್ನು ಮೀಸಲಾಗಿರಿಸಿರುವುದು ತುಂಬ ಸಂತೋಷದ ಸಂಗತಿಯಾಗಿದ್ದರೂ, ಗದಗ ಜಿಲ್ಲೆಯ ಮಟ್ಟಿಗೆ ಹೇಳಿಕೊಳ್ಳುವಂತಹ ಸಂತೋಷವೇನೂ ಇಲ್ಲ.
ಡಂಬಳದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಸ್ಥಾಪನೆಯೊಂದನ್ನು ಬಿಟ್ಟರೆ ಬೇರೆ ಯಾವುದೂ ಕೊಡುಗೆಗಳಿಲ್ಲದಿರುವುದರಿಂದ ಈ ಭಾಗದ ಜನತೆಗೆ ಬಹಳಷ್ಟು ನಿರಾಶೆಯಾಗಿದೆ. ಸಿಹಿಗಿಂತ ಕಹಿಯೇ ಅಧಿಕ ಎನ್ನುವಂತಾಗಿದೆ. ಗದಗ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಮತ್ತು ಗಣ್ಯರು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಭಾಗದಲ್ಲಿ ಕೃಷಿ ಆಧಾರಿತ ಉದ್ದಿಮೆ ಹಾಗೂ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಳಿಕೊಂಡಿದ್ದರು.
ಕಪ್ಪತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ ಹಲವು ವರ್ಷಗಳೇ ಗತಿಸಿವೆ. ಅದಕ್ಕೆ ನಯಾಪೈಸೆಯನ್ನೂ ಮೀಸಲಾಗಿರಿಸಿಲ್ಲ. ಫುಡ್ಪಾರ್ಕ ಘೋಷಣೆಯಾಗಬಹುದೆಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ.
ಗದಗ ನಗರದಲ್ಲಿ ಅರ್ಧಕ್ಕೆ ನಿಂತಿರುವ ನಾಡೋಜ ಡಾ. ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಪೂರ್ಣಗೊಳಿಸುವುದಾಗಲಿ, ಕನ್ನಡದ ಕುಲಗುರು ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಸ್ಮಾರಕ ಕನ್ನಡ ಭವನ ನಿರ್ಮಾಣದ ವಿಷಯವಾಗಲಿ ಬಜೆಟ್ನಲ್ಲಿ ಪ್ರಸ್ತಾಪವಾಗದೇ ಇರುವುದು ಜನರಲ್ಲಿ ನಿರಾಶೆಯನ್ನುಂಟು ಮಾಡಿದೆ.
ಇನ್ನೂ ಕಾಲ ಮಿಂಚಿಲ್ಲ. ಅಭಿವೃದ್ಧಿಯಿಂದ ವಂಚಿತವಾಗಿರುವ ಗದಗ ಜಿಲ್ಲೆಯ ಕಡೆಗೆ ಸರಕಾರ ಗಮನಹರಿಸಬೇಕು ಎಂದು ಶ್ರೀಗಳು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.