ತುಮಕೂರು
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿಯಲ್ಲಿ ಪಾಲ್ಗೊಂಡು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಆಧ್ಯಾತ್ಮಿಕವಾಗಿ ನಮ್ಮೊಂದಿಗೆ ಇಲ್ಲೇ ಇದ್ದಾರೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಯುಗ ಪುರುಷ ಡಾ.ಶಿವಕುಮಾರಸ್ವಾಮೀಜಿ 118 ನೇ ಜನ್ಮ ಜಯಂತೋತ್ಸವದಲ್ಲಿ ಭಾಗವಹಿಸಿರುವುದು ನನ್ನ ಅದೃಷ್ಟ, ಎಂದು ಹೇಳಿದರು.

ಶಿವಕುಮಾರಸ್ವಾಮೀಜಿ ಅವರ ವಿಚಾರಧಾರೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಡಿನಲ್ಲಿ ಮಠ ಉತ್ತಮ ಕಾರ್ಯ ಕೈಗೊಂಡಿದೆ. ತಾಯಿ ಚಾಮುಂಡೇಶ್ವರಿ ಜನ್ಮಸ್ಥಳ ಕರ್ನಾಟಕ ಬಸವಣ್ಣ, ಪುರಂದರದಾಸರ ಜನ್ಮ ಸ್ಥಳ. ದೇಶದ ನಿರ್ಮಾಣಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ.

ರಾಜನಾಥ್ ಸಿಂಗ್ ಅವರ ಜೊತೆಗೆ ತುಮಕೂರು ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರೂ ಶ್ರೀಗಳ ಗದ್ದುಗೆ ದರ್ಶನ ಪಡೆದರು.

ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ 118ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ರಾಜನಾಥ್ ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದರು.

ರುದ್ರಾಕ್ಷಿ ಮಂಟಪದ ಮೆರವಣಿಗೆ: ಸ್ವಾಮೀಜಿಯವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಮಠದಲ್ಲಿ ರುದ್ರಾಕ್ಷಿ ಮಂಟಪದ ಮೆರವಣಿಗೆ ನಡೆಯಿತು. ಶಿವಕುಮಾರ ಸ್ವಾಮೀಜಿಯವರ ಪುತ್ಥಳಿಯನ್ನು ಮಂಟಪದಲ್ಲಿ ಇರಿಸಿ, ಮೆರವಣಿಗೆಗೆ ಶ್ರೀ ಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು. ಅವರಿಗೆ ಹಲವು ಮಠಾಧೀಶರು, ರಾಜಕಾರಣಿಗಳು ಸಾಥ್ ನೀಡಿದರು.


ರುದ್ರಾಕ್ಷಿ ಮಂಟಪದ ಮುಂಭಾಗದಲ್ಲಿ ನಂದಿಧ್ವಜ, ಪೂರ್ಣಕುಂಭ, ಲಿಂಗದವೀರರು, ಬ್ಯಾಂಡ್ ಸೆಟ್ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾದವು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ಗುರುಗಳದ್ದು ನಿಷ್ಕಲ್ಮಶ ಬದುಕು. ಬಸವಣ್ಣನವರ ಕಾರ್ಯವನ್ನು ಕೈಕೊಂಡು ನಿತ್ಯದಸೋಹಿಗಳಾಗಿ ಕಾಯಕವೇ ಕೈಲಾಸವೆಂದು ನಂಬಿ ನಡೆದವರು.
🙏🙏🙏🙏🙏🙏🙏🙏🙏🙏🙏