ಉಳವಿ
ಶರಣ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಳವಿ ಚನ್ನಬಸವೇಶ್ವರ ಮಠದಲ್ಲಿ “ಕಲ್ಯಾಣದಿಂದ ಉಳವಿ”ಗೆ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ.
ಫೆಬ್ರವರಿ 5ರಿಂದ ಆರಂಭಗೊಂಡು 13ರವರೆಗೂ ನಡೆಯುವ ಪ್ರವಚನವನ್ನು ಉಳವಿ ಬಸವ ಕೇಂದ್ರದ ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ನಡೆಸಿಕೊಡುತ್ತಿದ್ದಾರೆ.
ಚನ್ನಬಸವಣ್ಣನವರ ಜೀವನ ಚರಿತ್ರೆ ಕುರಿತಂತೆ, ಜಾತ್ರೆಗೆ ಪ್ರತಿದಿನ ಬರುವ ನೂರಾರು ಭಕ್ತಾದಿಗಳು ಪ್ರವಚನವನ್ನು ಆಲಿಸುತ್ತಿದ್ದಾರೆ.
ವಚನ ಸಾಹಿತ್ಯದ ಸಂರಕ್ಷಣೆಗಾಗಿ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಗೆ ಬರುವಾಗ ಮಾರ್ಗ ಮಧ್ಯದಲ್ಲಿ ಅನುಭವಿಸಿದ ಕಷ್ಟಗಳು, ಹೋರಾಟಗಳು, ಅನುಭವಿಸಿದ ಸಾವು-ನೋವುಗಳನ್ನು ಭಕ್ತಾದಿಗಳಿಗೆ ಪ್ರವಚನ ಮೂಲಕ ತಿಳಿಯಪಡಿಸಲಾಗುತ್ತಿದೆ.

ಅವಿರಳ ಜ್ಞಾನಿ ಚೆನ್ನಬಸವಣ್ಣ ಅವರು ಭಕ್ತರ ಮಾರ್ಗದರ್ಶನಕ್ಕಾಗಿ ಹಿತಸ್ಥಳ ವಚನಗಳು, ಕರಣ ಹಸಿಗೆ, ಪದ ಮಂತ್ರ ಗೌಪ್ಯ ಮುಂತಾದ ಗ್ರಂಥಗಳನ್ನು ಬರೆದು ಮುಂದಿನ ಪೀಳಿಗೆಗೆ ಅನುವು ಮಾಡಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಎಂದಿಗೂ ಕೂಡ ಶರಣ ಪರಂಪರೆ ಮುಂದುವರೆದುಕೊಂಡು ಹೋಗುತ್ತದೆ. ಬಸವಣ್ಣನವರ ಬಲಗೈಯಾಗಿ ಬಸವತತ್ವವನ್ನು ಉಳಿಸಿದ, ವಚನ ಸಾಹಿತ್ಯವನ್ನು ಜೀವಂತಗೊಳಿಸಿದ ಕೀರ್ತಿ ಚೆನ್ನಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.
ರವಿವಾರದ ಪ್ರವಚನ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಕಿರುಗಾವಲು ನಾಗರಾಜು, ಕಡೂರಿನ ಉಪನ್ಯಾಸಕ ಡಾ. ಜಿ. ವಿ. ಮಂಜುನಾಥ, ಟಿ. ನರಸೀಪುರದ ಗಣಾಚಾರಿ ಲಿಂಗರಾಜಪ್ಪ ಹಾಗೂ ದಾಂಡೇಲಿಯ ದೇವೇಂದ್ರಪ್ಪನವರು, ಅನೇಕ ಶರಣ-ಶರಣೆಯರು ಉಪಸ್ಥಿತರಿದ್ದರು.