ರಾಯಚೂರಿನ ಶರಣರು 1: ಉಳಿಯುಮೇಶ್ವರ ಚಿಕ್ಕಯ್ಯ ಶರಣರು

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರಿನ ಜಿಲ್ಲೆಯ ಶರಣರ ಪರಿಚಯ

ರಾಯಚೂರು:

ಧೃವತಾರೆ, ಕಾಯಕಯೋಗಿ ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು. ಇವರು ಪೂರ್ವಾಶ್ರಮದಲ್ಲಿ ಕಾಳಾಮುಖ ಆಚಾರ್ಯರಾಗಿದ್ದು, ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಶಿವಯೋಗಿಯಾಗಿ, ಕಲ್ಯಾಣದಲ್ಲಿ ಕಾಯಕದ ಜೊತೆಜೊತೆಗೆ, ಶಿವಯೋಗದ ಕುರಿತು ಭೋದಿಸುತ್ತಿದ್ದರು.

ಕಾಯಕ:  ಕಮ್ಮಾರಿಕೆ, ಮಂಚ, ಬಾಗಿಲು, ಇತರೆ ಕಟ್ಟಿಗೆಯ ಶಿಲ್ಪಕಲೆಗಳನ್ನು ಮಾಡುವುದು. ತಮ್ಮ ಒಂದು ವಚನದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ,

ಎನ್ನ ಮನವ ಮಂಚವ ಮಾಡಿ,

ತನುವ ಪಚ್ಚಡಿಸುವೆ ಬಾರಯ್ಯಾ!

ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ!

ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ!

ಎನ್ನ ಶಿವಲಿಂಗದೇವನೆ ಬಾರಯ್ಯ!

ಎನ್ನ ಭಕ್ತವತ್ಸಲನೆ ಬಾರಯ್ಯ!

‘ಓಂ ನಮಃ ಶಿವಾಯ’ ಎಂದು ಕರೆವೆನು

ಉಳಿಯುಮೇಶ್ವರಲಿಂಗವೆ ಬಾರಯ್ಯ!

ಎಂದು ಕಾಯಕದಲ್ಲೇ ಕೈಲಾಸ ಕಂಡವರು ಚಿಕ್ಕಯ್ಯ ಶರಣರು,

ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ,

ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ,

ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ,

ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ,

ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ.

ಇಂತಿವರ ಶ್ರೀಪಾದದಲ್ಲಿ ಉರಿಯುಂಡ

ಕರ್ಪುರದಂತಡಗಿದೆನಯ್ಯಾ ಉಳಿಯುಮೇಶ್ವರಾ.

ಮೇಲಿನ ವಚನದಲ್ಲಿ ತಮ್ಮ ಸಮಕಾಲೀನ ಶರಣರಾದ, ಬಸವಣ್ಣ,  ಚೆನ್ನಬಸವಣ್ಣ, ಅಲ್ಲಮ, ಶಿವಯೋಗಿ ಸಿದ್ದರಾಮೇಶ್ವರರ,  ಮರುಳ ಶಂಕರದೇವರ ಕುರಿತು ಸ್ತುತಿಸಿದ್ದಾರೆ.

ವಾರಣಾಸಿ, ಅವಿಮುಕ್ತಿ ಇಲ್ಲಿಯೇ ಇದ್ದಾನೆ.

ಹಿಮದ ಕೇತಾರ, ವಿರೂಪಾಕ್ಷ ಇಲ್ಲಿಯೇ ಇದ್ದಾನೆ.

ಗೋಕರ್ಣ, ಸೇತುರಾಮೇಶ್ವರ ಇಲ್ಲಿಯೇ ಇದ್ದಾನೆ.

ಶ್ರೀಶೈಲ ಮಲ್ಲಿನಾಥ ಇಲ್ಲಿಯೇ ಇದ್ದಾನೆ.

ಸಕಲಲೋಕ ಪುಣ್ಯಕ್ಷೇತ್ರ ಇಲ್ಲಿಯೇ ಇದ್ದಾನೆ,

ಸಕಳಲಿಂಗ ಉಳಿಯುಮೇಶ್ವರ ತನ್ನಲ್ಲಿ ಇದ್ದಾನೆ.

ಎಂಬುದಾಗಿ ಹೇಳುತ್ತಾ  ಬಹಿರಂಗದ, ಆಡಂಬರದ ಆಚರಣೆಗಳಿಗಿಂತ, ಅಂತರಂಗದ ಶುದ್ಧಿಯೇ ಶ್ರೇಷ್ಠವೆಂದು ತಿಳಿಸುತ್ತಾ, ತನ್ನಲ್ಲಿಯೇ ಓತಪ್ರೋತವಾಗಿ ಅಡಕವಾಗಿರುವ, ಚೈತನ್ಯ ಶಕ್ತಿಯು, ಅರಿವಿನ ಕುರುಹೇ ಅಂಗೈಯಲ್ಲಿ ಇಷ್ಟಲಿಂಗವಾಗಿರಲು, ಜಡ ಸ್ಥಾವರಕ್ಕೆರಗುವುದು ಬೇಡ ಎಂದು ಚಿಕ್ಕಯ್ಯ ಶರಣರು ತಿಳಿಹೇಳುತ್ತಾರೆ.

ಪೂರ್ವ ಕರ್ಮವ ಕೆಡಿಸಿದನೆನ್ನ ಗುರು

ಉಭಯ ಕರ್ಮವ ಬಿಡಿಸಿ ತೋರಿದಡೆ

ಅವರಿಂದ ಬದುಕಿದನು.

ಉಳಿಯುಮೇಶ್ವರ ಲಿಂಗವೆ

ಗುರುವಿಂದ ಬದುಕಿದನು.

ಸದುಭಕ್ತರಿಂದ ಬದುಕಿದನು, ನಿನ್ನ ಹಂಗೇನು.

ಎಂಬಲ್ಲಿ ಉಳಿಯುಮೇಶ್ವರ ಚಿಕ್ಕಯ್ಯ ಶರಣರು, ಶರಣತ್ವವೆಂಬ ಗುರು (ಜ್ಯೋತಿ) ಮುಟ್ಟಿದಲ್ಲಿಯೇ, ಎನ್ನ ಪೂರ್ವಕರ್ಮವೆಂಬ ಕತ್ತಲೆ ಕಳೆದಿತ್ತು ಎಂದು ಶರಣರ ಸಾಂಗತ್ಯವನ್ನು ಒಪ್ಪಿ ಅಪ್ಪಿಕೊಳ್ಳುತ್ತಾರೆ, ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿ ಪಾಲ್ಗೊಂಡು,  ಅನೇಕ ವಚನಗಳನ್ನು ರಚಿಸಿದ್ದಾರೆ, ಪ್ರಸ್ತುತ ಇವರ ೧೬ ವಚನಗಳು ಮಾತ್ರ ಲಭ್ಯವಿವೆ.

ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು  ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಕಳೆದದ್ದು  ರಾಯಚೂರು ಜಿಲ್ಲೆಯ, ಸಿಂಧನೂರು ತಾಲೂಕಿನ, ‘ದೇವರಗುಡಿ’ ಎಂಬ ಗ್ರಾಮದಲ್ಲಿ, ಅಲ್ಲಿಯೇ ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು ಲಿಂಗೈಕ್ಯರಾಗಿದ್ದಾರೆ.

ಇಂತಹ ಅನೇಕ ಮಹಾನ್ ಶರಣರು, ಸಂತರು ಮಹಾಂತರು ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿ, ಹಿತನುಡಿಗಳನ್ನು ಭೋದಿಸಿ,  ಸನ್ಮಾರ್ಗದಲ್ಲಿ ನಡೆದ ಈ ನೆಲವೇ ಕಲ್ಯಾಣ. 

ಅವರು ನುಡಿದ ನುಡಿಗಳು, ಅವರು ಹಾಕಿಕೊಟ್ಟ ಆದರ್ಶ ಅವರು ಬದುಕಿದ ಸಾರ್ಥಕ ಜೀವನ ನಮ್ಮೆದುರೇ ಇದೇ ಇಂದಿಗೂ ಅವರ ವಚನಗಳಲ್ಲಿ, ಜೀವಂತಿಕೆ ತುಂಬಿದೆ, ಅವರ ಜೀವವೇ ವಚನಗಳಲ್ಲಿ ಅಡಗಿದೆ. ಶರಣರ ವಚನಗಳನ್ನು ಓದಿ, ಅವರ ಹಾದಿಯಲ್ಲಿ ನಾವು ನಡೆದರೆ, ನಮ್ಮ ಬದುಕು ಸಾರ್ಥಕವಾದೀತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *