ಸೇಡಂ
ಕಲಬುರಗಿ ಜಿಲ್ಲೆ, ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಜಗದ್ಗುರು ನಂಜುಂಡ ಸ್ವಾಮೀಜಿಯವರು ಬುಧವಾರದಂದು ಲಿಂಗೈಕ್ಯರಾಗಿದ್ದಾರೆ.
ಪೂಜ್ಯರು ಮೈಸೂರು ತಾಲೂಕಿನ ಟಿ. ನರಸೀಪುರದವರು. 60 ವರ್ಷಗಳ ಹಿಂದೆ ಉರಿಲಿಂಗಪೆದ್ದಿ ಮಠದ ಜವಾಬ್ದಾರಿಯನ್ನು ಹೊತ್ತು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.
ಬಸವಾದಿ ಶರಣರ ತತ್ವ ಪ್ರಸಾರ ಸಂಸ್ಥೆ ಸ್ಥಾಪನೆ ಮಾಡಿ, ನಾಡಿನಾದ್ಯಂತ ಬಸವತತ್ವವನ್ನು ಪ್ರಸಾರ ಮಾಡಿದರು. ಬಸವಾದಿ ಶರಣ ಉರಿಲಿಂಗಪೆದ್ದಿ ನಾಟಕವನ್ನೂ ಬರೆದು ಅದರ ರಂಗಪ್ರಯೋಗವನ್ನು ಕೂಡ ಮಾಡಿದವರು ಇವರು. ನಾಡಿನಾದ್ಯಂತ ಶಾಖಾ ಮಠಗಳನ್ನು ತೆರೆದು ಅಭಿವೃದ್ಧಿ ಪಡಿಸಿದರು. ಪೂಜ್ಯರ ಅಗಲಿಕೆಗೆ ಮೈಸೂರಿನ ಶ್ರೀ ಬಸವ ಧ್ಯಾನ ಮಂದಿರದ ಬಸವಲಿಂಗಮೂರ್ತಿ ಶರಣರು, ಸಂಚಾರಿ ಜಂಗಮ ಓಂಕಾರ ಶರಣರು ಹಾಗೂ ನಾಡಿನ ಅಸಂಖ್ಯಾತ ಬಸವ ಭಕ್ತರು ಶೋಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಸೇಡಂ ತಾಲೂಕಿನ ಕೊಡ್ಲ ಗ್ರಾಮದ ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ಸಂಜೆ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.