ಚಿತ್ರದುರ್ಗ
ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಝೇಂಕಾರ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಸುಮಾರು ೫೦೦೦ಕ್ಕೂ ಮೇಲ್ಪಟ್ಟು ಬಸವಭಕ್ತರಿಂದ ವಚನ ಝೇಂಕಾರ ನಡೆಯಿತು.
೧೨ನೇ ಶತಮಾನದ ವಚನಕಾರರ ವಚನಗಳನ್ನು ತೋಟಪ್ಪ ಉತ್ತಂಗಿ ಅವರ ನೇತೃತ್ವದಲ್ಲಿ ಭಕ್ತಿ ಪೂರ್ವಕವಾಗಿ ಹಾಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು, ಸಾವಿರಾರು ಮಹಿಳೆಯರು, ಸಾಹಿತಿಗಳು, ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು, ಹರಗುರು ಚರಮೂರ್ತಿಗಳು ಭಾಗವಹಿಸಿ ಈ ವಚನ ಝೇಂಕಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯಗುರು ಪೀಠದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮಿಗಳು ಪ್ರಸ್ತಾವಿಕ ನುಡಿಗಳಾಡುತ್ತಾ, ಹಿಮಾಲಯ ಪರ್ವತ ಇಲ್ಲದ ಭಾರತ ಕಲ್ಪನೆ ಮಾಡಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ, ಹಾಗೆ ಬಸವ ಸಂಸ್ಕೃತಿ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾದ್ಯ ಅನಿಸುತ್ತದೆ.
ಇಂದು ನೂರಾರು ಸ್ವಾಮೀಜಿಗಳು ಇಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಸರ್ಕಾರ ಬಸವಣ್ಣನವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರೆದಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ಜಗತ್ತಿನಲ್ಲಿ ಬಹಳಷ್ಟು ಜನ ಸಂಶೋಧಕರು, ದಾರ್ಶನಿಕರು ಇದ್ದಾರೆ. ಕೆಲವೊಂದು ಆವಿಷ್ಕಾರಗಳು ಆಯಾ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಬಸವಣ್ಣನವರ ತತ್ವ ಸಿದ್ಧಾಂತ ಎಂದೆಂದಿಗೂ ಪ್ರಸ್ತುತ. ಬಸವಧರ್ಮ ಮತ್ತೊಮ್ಮೆ ಮೇಲೆದ್ದು ಬರುತ್ತಿದೆ. ಕೇವಲ ಅದರ ವಿಜೃಂಭಣೆ ಮಾಡಿದರೆ ಸಾಲದು, ಬಸವಣ್ಣನವರ ತತ್ವ ಸಿದ್ಧಾಂತಗಳು ಎಲ್ಲರ ಮನೆ-ಮನಗಳಲ್ಲಿ ಬೆಳೆಸಬೇಕು. ಮುಂದಿನ ದಿನಗಳಲ್ಲಿ ಬಸವಣ್ಣನ ಅನುಯಾಯಿಗಳು ಏನು ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ.
ಸಾಣೆಹಳ್ಳಿ ಶ್ರೀ ತರಳಬಾಳು ಬೃಹನ್ಮಠ ಶಾಖೆಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಾವು ಮಾತ್ರ ಪ್ರಾದೇಶಿಕವಾಗಿ ಹಿಂದುಗಳು. ಜೈನ, ಬೌದ್ಧ, ಕ್ರೈಸ್ತ ಮೊದಲಾದ ಧರ್ಮಗಳ ಇದ್ದ ಹಾಗೇ ಬಸವ ಧರ್ಮವೂ ಇದೆ. ಬಸವಣ್ಣನವರು ನಮಗೆ ಲಿಂಗಾಯತ ಧರ್ಮವನ್ನು ಕೊಟ್ಟವರು. ನಮ್ಮ ಕಲುಷಿತ ಭಾವನೆಗಳನ್ನು ದೂರ ತಳ್ಳಿ ತಲೆಎತ್ತಿ ನಾವು ಲಿಂಗವಂತರು ಲಿಂಗಾಯತರು ಎಂದು ಹೇಳಬೇಕು. ಅದರ ಆಚರಣೆಯಲ್ಲಿ ಹಿಂದೆೆ ಇದ್ದೇವೆ.

ಈ ಹಿಂದೆ ಅನೇಕ ಮಠಾಧೀಶರು, ಬಸವಭಕ್ತರು, ಮಾನ್ಯ ಮುಖ್ಯಮಂತ್ರಿಗಳು ಎಲ್ಲರೂ ಒಟ್ಟಿಗೆ ಚರ್ಚೆ ಮಾಡಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಇಲ್ಲಿಗೆ ಒಂದು ವರ್ಷವಾಯಿತು.
ಅದಕ್ಕಾಗಿ ಲಿಂಗಾಯತ ಮಠಾಧೀಪತಿಗಳ ಒಕ್ಕೂಟ ಸೆಪ್ಡಂಬರ ೧ರಂದು ಬಸವ ಸಂಸ್ಕೃತಿ ಅಭಿಯಾನ ಪ್ರಾರಂಭಿಸಿ ಅದು ಇಲ್ಲಿಯವರೆಗೆ ಬಂದು ಶ್ರೀ ಮಠದಲ್ಲಿ ನಿಂತಿದೆ. ಬಸವಸಂಸ್ಕೃತಿ ಅಭಿಯಾನವು ಬಸವನ ಬಾಗೇವಾಡಿಯಲ್ಲಿ ಪರಿಣಾಮಕಾರಿಯಾಗಿ ಆರಂಭವಾಗಿ ಇಂದು ಚಿತ್ರದುರ್ಗ ಮುರುಘಾ ಮಠದಲ್ಲಿ ಅದರ ಎತ್ತರವನ್ನು ಕಂಡಿದೆ.
ಬಸವಾದಿ ಶರಣರತತ್ವ ಸಿದ್ಧಾಂತಗಳನ್ನು ಜನಮನದಲ್ಲಿ ತುಂಬುವ ಕಾರ್ಯ ಮಾಡುವ ದೃಷ್ಟಿಯಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಉದ್ದೇಶವೇನೆಂದರೆ, ನಾಡಿನ ಪ್ರಗತಿ ಮುಂತಾದ ವಿಚಾರಗಳಲ್ಲಿ ಮುಕ್ತವಾದ ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಉತ್ತರವನ್ನು ಪಡೆಯುದಾಗಿದೆ.

ಕಾರ್ಯಕ್ರಮದಲ್ಲಿ ಎಸ್.ಜೆ.ಎಂ ವಿದ್ಯಾಪೀಠ ಹಾಗೂ ಬೃಹನ್ಮಠದ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಎಸ್.ಜೆ.ಎಂ ವಿದ್ಯಾಪೀಠ ಹಾಗೂ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಎರೆಹೊಸಹಳ್ಳಿ ಯೋಗಿ ವೇಮನ ಗುರುಪೀಠದ ಜಗದ್ಗುರು ವೇಮನಾನಂದ ಸ್ವಾಮಿಗಳು, ತಲಸಂಗದ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭುಸ್ವಾಮಿಗಳು, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಜಗದ್ಗುರು ಶಾಂತಭೀಷ್ಮ ಅಂಬಿಗರ ಚೌಡಯ್ಯ ಮಹಾಸ್ವಾಮಿಗಳು, ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವಸ್ವಾಮಿಗಳು, ಚಿತ್ರದುರ್ಗದ ಸದ್ಗುರು ಕಬೀರನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು, ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಚಿತ್ರದುರ್ಗದ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶ್ರೀಗಳು, ಕೂಡಲಸಂಗಮದ ಗಂಗಾ ಮಾತಾಜಿ, ಹುಲಸೂರಿನ ಶಿವಾನಂದಸ್ವಾಮಿಗಳು ಕೂಡಲಸಂಗಮದ ರಾಜೇಶ್ವರಿ ಮಾತಾಜಿ, ಹರಿಹರದ ಹರಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮಿಗಳು, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸ್ವಾಗತಿಸಿದರು. ತೋಟಪ್ಪ ಉತ್ತಂಗಿ ಬಳಗದಿಂದ ಬಸವ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಶೈಲಾಜ ಜಯಕುಮಾರ್ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಇದೊಂದು ಉತ್ತಮವಾದ ಬೆಳವಣಿಗೆ, ಇದು ನಮ್ಮ ಮಕ್ಕಳಲ್ಲಿ ಹಿರಿಯರಲ್ಲಿ ಈ ಒಂದು ಸಂಸ್ಕೃತಿ ಬೆಳೆಯಬೇಕು.
ಚಿತ್ರದುರ್ಗ ಶ್ರೀ ಮುರುಘಾಮಠವು ಬಸವತತ್ವವನ್ನು ಸುಮಾರು ದಶಕಗಳಿಂದ ನಡೆಸಿಕೊಂಡು ಬಂದಿದೆ. ಈ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಠವು ದಾಖಲೆರೂಪಿಸುವ ಮಟ್ಟದಲ್ಲಿ ಸಹಕರೀಸದ್ದಕ್ಕಾಗಿ ವಿದ್ಯಾರ್ಥಿಗಳಿಗೆ, ಮಠದ ಆಡಳಿತ ಮಂಡಳಿಗೆ ಧನ್ಯವಾದಗಳು. ಶರಣು, ಶರಣಾರ್ಥಿಗಳು 🙏🙏