ಬಸವಣ್ಣ ಎಲ್ಲರಿಗೂ ಆದರ್ಶ: ಮಾಸಿಕ ವಚನ ಮಂಟಪ ಕಾರ್ಯಕ್ರಮದಲ್ಲಿ ಗಂಗಾ ಮಾತಾಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬಸವಣ್ಣನವರು ಜಗಕ್ಕೆ ಜ್ಯೋತಿಯಾಗಿದ್ದರು. ಅವರ ಅನುಯಾಯಿಗಳು ವೈಯಕ್ತಿಕ ಬದುಕಿನಲ್ಲಾದರೂ ಜ್ಯೋತಿಯಾಗಬೇಕು ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ನುಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ವಚನ ಮಂಟಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಜಗಜ್ಯೋತಿ ಎನಿಸಿಕೊಂಡ ಏಕೈಕ ಮಹಾ ಪುರುಷರು. ಆ ಪದವಿ ಇನ್ನಾರಿಗೂ ಇಲ್ಲ ಎಂದು ಹೇಳಿದರು.

ಬಸವರಾಜ ಧನ್ನೂರ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಚನಗಳ ಚಿಂತನ- ಮಂಥನಕ್ಕಾಗಿ ಮಾಸಿಕ ವಚನ ಮಂಟಪ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದರು.

ಬಸವಣ್ಣನವರು 12ನೇ ಶತಮಾನದಲ್ಲಿ ಮರ್ತ್ಯದ ಮಹಾಮನೆ ಕಟ್ಟಿದ್ದರು. ಆ ಮಹಾ ಮನೆ ಪ್ರೀತಿ, ಆನಂದ, ಮಾನವೀಯತೆ, ಸಮಾನತೆಯಿಂದ ತುಂಬಿ ತುಳುಕುತ್ತಿತ್ತು ಎಂದು ‘ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾ ಮನೆಯ ಕಟ್ಟಿದೆ’ ಕುರಿತು ಮಾತನಾಡಿದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಅಂತಹ ಮಹಾಮನೆ ಕಟ್ಟಿದ್ದಕ್ಕಾಗಿಯೇ ಜನರು ಬಸವಣ್ಣನವರತ್ತ ಆಕರ್ಷಿತರಾದರು. ಜಗತ್ತಿನ ಮೂಲೆ ಮೂಲಗಳಿಂದ ಕಲ್ಯಾಣದೆಡೆಗೆ ಬಂದರು ಎಂದು ತಿಳಿಸಿದರು.

ಬಸವಣ್ಣವರ ತತ್ವಗಳು ಬಹಳ ಶ್ರೇಷ್ಠವಾಗಿವೆ. ತತ್ವಕ್ಕೆ ಸಮರ್ಪಿಸಿಕೊಂಡವರು ಎಂತಹ ಪರಿಸ್ಥಿತಿ ಎದುರಾದರೂ ವಿಚಲಿತರಾಗದೆ ತತ್ವ ಪಾಲಿಸಬೇಕು ಎಂದು ಉದ್ಘಾಟನೆ ನೆರವೇರಿಸಿದ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಹೇಳಿದರು.

ಇಂದು ಬಸವ ತತ್ವದ ಮೇಲೆ ದಾಳಿಗಳು ನಡೆಯುತ್ತಿವೆ. ಬಸವಪರ ಸಂಘಟನೆಗಳು ಸಂಘಟಿತರಾಗಬೇಕು. ಬಸವಾನುಯಾಯಿಗಳು ಜಾಗೃತರಾಗಿರಬೇಕು. ಬಸವ ತತ್ವದ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸದ್ಯ ಬಸವ ತತ್ವ ಪ್ರಚಾರ ಹೆಚ್ಚಾಗಿ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಪಸರಿಸಲು ಮಠ ಮಾನ್ಯಗಳು ಬಹುಭಾಷಾ ತತ್ವ ಪ್ರಚಾರಕರನ್ನು ತಯಾರು ಮಾಡಬೇಕಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ಹಿಂದಿ, ಇಂಗ್ಲಿಷ್‍ನಲ್ಲಿ ಬಸವ ತತ್ವದ ಪ್ರವಚನ ಮಾಡುವವರ ಕೊರತೆ ಇದೆ. ಅದನ್ನು ನೀಗಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.

ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡ ಹಿರಿಯ ಸಿವಿಲ್ ಎಂಜಿನಿಯರ್ ಹಾವಶೆಟ್ಟಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಆದಿತ್ಯ ಪಾಂಚಾಳ ವಚನ ಗಾಯನ ನಡೆಸಿಕೊಟ್ಟರು. ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಖಜಾಂಚಿ ಬಂಡೆಪ್ಪ ಗಡ್ಡೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಗೌರವ ಸಲಹೆಗಾರ ಶರಣಪ್ಪ ಮೈಲೂರಕರ್ ಲಾಡಗೇರಿ ಉಪಸ್ಥಿತರಿದ್ದರು.

ಉಚಾ ಮಿರ್ಚೆ ಸ್ವಾಗತಿಸಿದರು. ಸ್ವರೂಪರಾಣಿ ಪಾಟೀಲ ನಿರೂಪಿಸಿದರು. ಉಮೇಶ ಗಾಯಗೊಂಡ ವಂದಿಸಿದರು. ರಾಜಪ್ಪ ಹಜ್ಜರಗಿ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *