ಬೆಂಗಳೂರು
‘ಶ್ರಾವಣ ಮಾಸದ ಪ್ರಯುಕ್ತ ಮಕ್ಕಳಲ್ಲಿ ವಚನ ಬಿತ್ತನೆ ನಡೆಸಿರುವುದು ಸಾರ್ಥಕ ಕಾರ್ಯ’ ಎಂದು ಮಹಾಂತೇಶ ಬಿರಾದಾರ ಶ್ಲಾಘಿಸಿದರು.
ವಚನಜ್ಯೋತಿ ಬಳಗ ವಿಜಯ ನಗರದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಮಾರೋಪದಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿಯೇ ವಚನ ಶ್ರಾವಣ ನಡೆಸಿ ಅವುಗಳ ಅರ್ಥವನ್ನು ಮನದಟ್ಟು ಮಾಡಿಕೊಟ್ಟಿರುವುದರಿಂದ ವಿದ್ಯಾರ್ಥಿಗಳು ಸುಂದರ ಬದುಕನ್ನು ರೂಪಿಸಿಕೊಳ್ಳಲು ಅನುಕೂಲ ಆಗುತ್ತದೆ. ಕರ್ನಾಟಕದಾದ್ಯಂತ ವಚನ ಶ್ರಾವಣ ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಂಜುನಾಥಸ್ವಾಮಿ ಮಾತನಾಡಿ, ‘ವಚನಗಳ ತಿರುಳು ಮಕ್ಕಳ ಮನ ಮುಟ್ಟಿದರೆ ಅದರ ವ್ಯಾಪಕತೆ ಬಹುದೊಡ್ಡದಾಗಿ ಬೆಳೆದು ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣ ಬಯಸಿದ ಕಲ್ಯಾಣ ರಾಜ್ಯಕ್ಕೆ ವಚನ ಶ್ರಾವಣ ಮುನ್ನುಡಿಯಾಗಿದೆ’ ಎಂದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಕನ್ನಡ ನಾಡಿನಲ್ಲಿ ವಿಚಾರ ಕ್ರಾಂತಿಯನ್ನು ಬಿತ್ತಿ, ವರ್ಣ ಭೇದವನ್ನು ನಿರ್ಮೂಲನಗೈದು, ಸ್ತ್ರೀಗೆ ಸಮಾನತೆ ನೀಡಿ ಕಾಯಕದ ಮಹಾಮಂತ್ರವನ್ನು ಉಸುರಿ, ದಾಸೋಹ ಪ್ರೇಮವನ್ನು ಹರಡಿ, ತಿಳಿಗನ್ನಡದಲ್ಲಿ ವಚನಗಳನ್ನು ನೀಡಿದ ಮಹಾತ್ಮ ಬಸವಣ್ಣ. ಅವರ ಸಂದೇಶವನ್ನು ಶ್ರಾವಣ ಮಾಸದಲ್ಲಿ ವಚನ ಶ್ರಾವಣದ ಮೂಲಕ ಮೂವತ್ತಾರು ಅಂಗಳಗಳಲ್ಲಿ ನಡೆಸಿ ಮೌಢ್ಯಾಚರಣೆಗಳ ವಿರುದ್ದ ಜಾಗೃತಿ ಮೂಡಿಸಲಾಗಿದೆ’ ಎಂದು ತಿಳಿಸಿದರು.

ಗುರುವಣ್ಣದೇವರ ಮಠದ ನಂಜುಂಡ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಬಳಗದ ಗೌರವಾಧ್ಯಕ್ಷ ಮಹೇಶ ಬೆಲ್ಲದ, ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ, ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಉಪಾಧ್ಯಕ್ಷ ಮುನಿರಾಜಪ್ಪ, ಪ್ರಸನ್ನ ಮತ್ತಿತರರು ಇದ್ದರು. ಕಲ್ಯಾಣ ಬಡಾವಣೆಯ ಶರಣೆಯರು ವಚನ ಗಾಯನ ಮಾಡಿದರು.