ಕಲಬುರ್ಗಿ
ಶರಣ ಸಂಕುಲಕ್ಕೆ ಕಿಂಕರರಾಗಿರಬೇಕು. ಎನಗಿಂತ ಕಿರಿಯರಿಲ್ಲ ಶರಣರಿಗಿಂತ ಹಿರಿಯರಿಲ್ಲ ಎಂಬ ಸದುವಿನಯ ಬೆಳೆಸಿಕೊಳ್ಳಬೇಕು. ದೇವರು ಎಲ್ಲಾ ಭಕ್ತರಿಗೆ ಪರಿಚಿತನಾಗಿರುತ್ತಾನೆ, ನಿಜವಾದ ಭಕ್ತನಿಗೆ ದೇವರು ಕೂಡ ಗುರುತು ಹಿಡಿಯುತ್ತಾನೆ ಎಂದು ಶರಣತತ್ವ ಚಿಂತಕಿ ಜಯಶ್ರೀ ಚಟ್ನಳ್ಳಿ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಬಸವರಾಜ ಸಗರ ಸ್ಮರಣಾರ್ಥ ಜರುಗಿದ 869 ನೆಯ ದತ್ತಿ ಕಾರ್ಯಕ್ರಮದಲ್ಲಿ ಶರಣರ ಪಾದಕ್ಕೆ ಕೀಳಾಗಿರಿಸು ವಿಷಯದ ಕುರಿತು ಅವರು ಮಾತನಾಡಿದರು.

ಹಸುವಿನ ಹಾಲು ಹಿಂಡಲು ಅದರ ಕಾಲ ಹತ್ತಿರ ಕೆಳಗಡೆ ಕುಳಿತುಕೊಳ್ಳಬೇಕಾಗುತ್ತದೆ. ನಾವು ಹಸುವಿಗೆ ವಿನಯಶೀಲತೆ ತೋರಿಸಿದಾಗ ಮಾತ್ರ ಅದು ಹಾಲು ನೀಡುತ್ತದೆ. ಹಸುವಿನ ಹಾಲು ಪಡೆಯಲು ಅಹಂಕಾರದಿಂದ ಹಸುವಿನ ಮೇಲೆ ಕುಳಿತರೆ ಹಾಲು ದೊರೆಯುವುದಿಲ್ಲ. ಶರಣರ ಪಾದಕ್ಕೆ ವಿನಯಶೀಲರಾಗಿರಬೇಕು ಆಗ ಮಾತ್ರ ನಾವು ಅಧ್ಯಾತ್ಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪಾರಮಾರ್ಥ ದೊರಕುತ್ತದೆ.
ಪಂಚಭೂತಗಳಿಂದ ಆತ್ಮ ಅಂಗನಾದ, ಅಂಗನು ವಿನಯಗುಣ ಬೆಳೆಸಿಕೊಂಡು ಲಿಂಗವಾಗಬೇಕು. ಅಹಂಕಾರ ಅಳಿಯಬೇಕು ವಿನಯ ಗುಣ ಬೆಳೆಯಬೇಕು. ಮೂಲದಲ್ಲಿ ಶರಣನಿದ್ದವನು ಕಲ್ಮಶಗಳು ಬಂದು ಮಾನವನಾಗುತ್ತಾನೆ. ಅವನು ಮತ್ತೆ ಶರಣನಾಗುವ ಮಾರ್ಗವೇ ಲಿಂಗಮಾರ್ಗ. ಅದೇ ಅವನ ಅಧ್ಯಾತ್ಮ ಸಾಧನೆಯಾಗಿದೆ. ನಾನೆಂಬುವುದು ಅಂಗವಲ್ಲ, ನಾನೆಂಬುವುದು ದೇವರು ಎಂದು ಅರಿಯಬೇಕು. ಅರಿಶಡ್ವರ್ಗಗಳು ಅಳಿದವನು ಶರಣನಾಗುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷೆ ಡಾ. ವಿಲಾಸ್ವತಿ ಕೂಬಾ , ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ದತ್ತಿ ದಾಸೋಹಿಗಳಾದ ಸಾವಿತ್ರಿ ಸಗರ, ಡಾ. ಕೆ. ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದ್ದರು.