ತಿಂಥಣಿ ಮೌನೇಶ್ವರರ ಅಂಕಿತ ನಾಮ ಬಸವಣ್ಣ
ಸುರಪುರ
ಇಂದು ಕೆಲವರು ಮೌನೇಶ್ವರರ ಚರಿತ್ರೆಯನ್ನೇ ಬದಲಿಸಿ ಅವರ ವೈಚಾರಿಕ ಚಿಂತನೆಗಳು, ಸಮಾಜಮುಖಿ ವಚನ ಸಾಹಿತ್ಯ ಹಾಗೂ ಅವರು ಎತ್ತಿಹಿಡಿದ ಜ್ಯಾತ್ಯಾತೀತ ಮೌಲ್ಯಗಳನ್ನು ಮಣ್ಣುಪಾಲು ಮಾಡಿಬಿಟ್ಟಿದ್ದಾರೆ.
ಮೌನೇಶ್ವರರು ಒಬ್ಬ ವಚನಕಾರರು ಎಂದು ಹೇಳಿ ಜನಸಾಮಾನ್ಯರಿಗೆ ಅವರ ವಚನಗಳನ್ನು ತಿಳಿಸಿ ಜಾಗೃತಿ ಮೂಡಿಸುವುದರ ಬದಲಾಗಿ ಅವರ ಹೆಸರಿನಲ್ಲಿ ಜನರಿಗೆ ಮೌಢ್ಯತೆ, ಕಂದಾಚಾರ ಬಿತ್ತಿ, ತೇರು ಎಳೆಯುತ್ತಿದ್ದಾರೆ.
ತಮ್ಮ ವಚನಗಳ ಮೂಲಕ ಸಾರಿ ಜನಜಾಗೃತಿಗೊಳಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ ಶ್ರೀ ಮೌನೇಶ್ವರರನ್ನು ದೇವರನ್ನಾಗಿಸಿ ಕೂರಿಸಿದ್ದಾರೆ.
ಮಹಾ ಸೂಫಿ, ಶರಣ, ವಚನಕಾರ ತಿಂಥಣಿ ಮೌನೇಶ್ವರರು ಸುರಪುರ ತಾಲೂಕಿನ ದೇವರ ಗೋನಾಲದಲ್ಲಿ ಜನಿಸಿ, ತಿಂಥಣಿಯ ಪಕೃತಿಯಲ್ಲಿ ಲೀನವಾದರು. ಇವರ ವಚನಗಳ ಅಂಕಿತ ನಾಮ ಬಸವಣ್ಣ.
ಮೂಲತಃ ಕಮ್ಮಾರರಾದ ಇವರು ಕಾಯಕ ಮಾಡುತ್ತ, ತಮ್ಮ ವಚನಗಳ ಮೂಲಕ ಸಮಾಜದ ಶೋಷಣೆಯ ವಿರುದ್ಧ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡಿದ್ದಾರೆ.
ಇವರ ಕಾಲಮಾನ 16 ನೇ ಶತಮಾನ.
ಶರಣ ಮೌನೇಶ್ವರರು ಜನರ ಆಡು ಭಾಷೆಯಲ್ಲಿ ಸುಮಾರು 600ಕ್ಕೂ ಹೆಚ್ಚು ವಚನಗಳನ್ನು ರಚನೆ ಮಾಡಿದ್ದಾರೆ. ಇವರ ಕೆಲವು ವಚನಗಳನ್ನು ನೋಡಿ:
ಉಚ್ಚಿಯ ಕುಣಿಯೊಳಗೆ ಉಚ್ಚಿಬಿದ್ದುದು ನಾಬಲ್ಲೆ,
ಹೆಚ್ಚು ಕಡಿಮೆ ಎಂದವಗೆ ಮೊಚ್ಚಿಮೊಚ್ಚಿಲೆ ಹೊಡೆ ಎಂದ ಬಸವಣ್ಣ!!
ಲಿಂಗವಾದರೇನು ಜಂಗಮವಾದರೇನು
ಸಂಗಯ್ಯನಾದರೆ ನನಗೇನು, ನಾ ನನ್ನ
ಕಂಗಳಲಿ ಕಂಡಂತೆ ಉಸುರುವೆನು!!
ಇಕ್ಕಳವೇ ಕುಲದೈವ ಸುತ್ತಿಗೆ ಮನೆದೈವ
ಬೊಕ್ಕಸದಗೋಲು ಜಗದಂಡ ತೆತ್ತೀಸ,
ಕೋಟಿ ದೇವಾಧಿ ದೇವರ್ಕಳ ನಿರ್ಮಿಸಿದ
ಮೇಲೆ ಕೆಟ್ಟಕುಲ ಎನಬಹುದೇ??
ಇದು ಅಲ್ಲಮನ ಕುಲ ಬಸವಣ್ಣ!!
ಅಕ್ಕನಾಗಲಿಯ ಮಗ ಚಿಕ್ಕ ಚನ್ನ ಬಸವಣ್ಣ
ಅರ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು
ಮರ್ತ್ಯದ ಲೆಕ್ಕಕ್ಕೆ ಜಡತಿ ಕೇಳಬೇಕೆಂದು,
ಮರ್ತ್ಯಕ್ಕೆ ಬೆಕ್ಕು ಬಂದೈತಿ ಇಲಿ ಜತನ, ಕುಕ್ಕು
ಬಂದೈತಿ ಮೊಲ ಜತನ ಅಂದನು ಕಕ್ಕಯ್ರನವರ
ಪ್ರಸಾದಿ!!
ಮುಚ್ಚಿ ಮುಚ್ಚಿ ಆಡುವ ಮುಚ್ಚಿಗರ ಮಗನಲ್ಲ,
ಅಚ್ಚ ಲಿಂಗಾಂಗಿಗೆ ಪರಬ್ರಹ್ಮ. ಕೆಲಸದ ಮಚ್ಚು
ಒರೆಗಲ್ಲು ಪಿಡಿದು ನಿಂತಿರ್ದಾತ ಅಚ್ಯುತನು
ಚನ್ನಬಸವಣ್ಣ, ಬಂದುದು ಲೋಕದ ಹುಚ್ಚರಿರಾ
ನಿಮಗೆ ತಿಳಿಯದು.
