ಮಕ್ಕಳು ಮತ್ತು ಇತರೆ ಸಮುದಾಯದ 70 ಸದಸ್ಯರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.
ಚಂದ್ರಪುರ
ವಿದರ್ಭದ ಚಂದ್ರಪುರ ಜಿಲ್ಲೆಯ ಸೇಂಗಾಂವ್ ಜಿವಾಟಿಯಲ್ಲಿ ಮಕ್ಕಳಿಗಾಗಿ ಬಸವ ಪ್ರಬೋಧನ ಶಿಬಿರವನ್ನು ಬಸವ ಭಾರತಿ ಸಂಘಟನೆ ವತಿಯಿಂದ ನಡೆಸಲಾಯಿತು. ಚಂದ್ರಪುರವು ಲಾತೂರ್ ಮತ್ತು ನಾಂದೇಡ್ನಿಂದ ಸುಮಾರು 400 ರಿಂದ 450 ಕಿಮೀ ದೂರದಲ್ಲಿದೆ.

ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳು ಮತ್ತು ಪೋಷಕರಿಗೆ ಬಸವಣ್ಣನವರ ಜೀವನ ಚರಿತ್ರೆ ಮತ್ತು ಲಿಂಗಾಯತ ಧರ್ಮದ ತತ್ವಶಾಸ್ತ್ರವನ್ನು ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಶಿಬಿರದ ತರಬೇತುದಾರ, ಕೀರ್ತನಕಾರರು ಆದ ಶರಣ ಶಿವಾನಂದ ದಾಬಶೇಡ್ಕರ್ ಮಾತನಾಡುತ್ತಾ, ಬಸವ ತತ್ವವನ್ನು ಸ್ವೀಕರಿಸಲು ಜಗತ್ತು ಸಿದ್ಧವಾಗಿದೆ. ನಾವು ಸಮಾಜದ ಮಧ್ಯೆ ಹೋಗಬೇಕು ಅಷ್ಟೇ. ಫೇಸ್ಬುಕ್, ವ್ಯಾಟ್ಸಪ್ ಅಲ್ಲಿ ಮಿಂಚುವುದು ಮತ್ತು ಅದರಲ್ಲಿ ಹೆಸರು ಗಳಿಸುವುದು ಮಾತ್ರವಲ್ಲ, ಸಮಾಜಕ್ಕೆ ಅವಶ್ಯಕವಾದ ಕೆಲಸ ಮಾಡುವುದು ಮುಖ್ಯ. ಅದಕ್ಕಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಸವಣ್ಣನವರ ವಿಚಾರಗಳನ್ನು ಜನ ಸ್ವಾಗತಿಸುವುದನ್ನು ನೋಡುವುದೇ ತುಂಬಾ ಸಂತಸಕರವಾಗಿದೆ ಎಂದರು.

ನಮಗೆಲ್ಲ ಮಾರ್ಗದರ್ಶಕರು ಮತ್ತು ಸ್ಫೂರ್ತಿಯೆಂದರೆ ಭಾಲ್ಕಿಯ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಉಸ್ತೂರಿ ವಿರಕ್ತಮಠದ ಪೂಜ್ಯ ಕೋರಣೇಶ್ವರ ಅಪ್ಪಾಜಿ ಎಂದು ದಾಬಶೇಡ್ಕರ್ ಹೇಳಿದರು.

ಮೇ 19 ರಿಂದ 23, 2025ರವರೆಗೆ ನಡೆದ ಶಿಬಿರದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಬಸವಣ್ಣನವರ ಸಾರ್ವತ್ರಿಕ ಮಾನವೀಯತೆ, ಸಹೋದರತ್ವ, ಸಮಾನತೆಯ ತತ್ವ ಮತ್ತು ಲಿಂಗಾಯತ ಧಾರ್ಮಿಕ ತತ್ವಶಾಸ್ತ್ರ ಮತ್ತು ಧರ್ಮಗ್ರಂಥಗಳನ್ನು ಬೋಧಿಸಲಾಯಿತು ಎಂದು ವ್ಯವಸ್ಥಾಪಕ ಸಂಜಯ ಲೋನಾಳೆ ತಿಳಿಸಿದರು.
ಮಹತ್ತರವಾದ ಅಣ್ಣ ಬಸವಣ್ಣನವರ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮವನ್ನು ಲಾತೂರನ ಶರಣ ಸದಾಶಿವ ಪಾಟೀಲ ನಡೆಸಿಕೊಟ್ಟರು. ಮಕ್ಕಳು ಮತ್ತು ಇತರ ಸಮುದಾಯದ 70 ಸದಸ್ಯರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಗ್ರಾಮದ ಸರಪಂಚ್ ನರಸಿಂಗ್ ಹ್ಯಾಮ್ (ಉಪ ಸರಪಂಚ್), ಪೊಲೀಸಪಾಟೀಲ ರಮಾಕಾಂತ ಮಾನೆ, ಮಾಧವ ದೋಯಿಪೋಡೆ, ವಿವಿಧ ಧರ್ಮಗಳ ಸಾಮಾಜಿಕ ಕಾರ್ಯಕರ್ತರು, ವ್ಯಾಪಾರಸ್ಥರಾದ ಶಬ್ಬೀರಬಾಯಿ ಜಹಗೀರದಾರ, ಅಮೋಲ ಕಾಂಬಳೆ, ಶಂಕರ ಖಂಡಾರೆ, ದೇವಿದಾಸ್ ವಾರೆ, ಗಣ್ಯರಾದ ಬಾಲಾಜಿ ಗಿರ್ಮೆ, ವೀರಭದ್ರ ಶೆಂಬಡೆ ರಾಮಚಂದ್ರ ಕೌತಾಳೆ ಶೇಷರಾವ್ ಖಂಡಾರೆ, ಮಹಿಳಾ ಸಮುದಾಯದ ವಿಜಯಲಕ್ಷ್ಮೀ ಖಂಡಾರೆ, ಸಂತೋಷಿ ಧೋಂಡೆ, ಛಾಯಾ ಕೌತಾಳೆ, ಸಾಮಾಜಿಕ ಕಾರ್ಯಕರ್ತೆ ಮಹಾದೇವಿ ಬಿರಾದಾರ್ ಸೇರಿದಂತೆ ಹಲವರಿದ್ದರು.

ಶರಣರಾದ ಸದಾಶಿವ ಪಾಟೀಲ ಲಾತೂರ್, ಸಂಜಯಕುಮಾರ ಲೋನಾಲೆ, ಶಿವಲಿಂಗ ಹತ್ತೆ, ಶಿವಾನಂದ ದಾಬಶೇಡಕರ ಅವರ ಪತ್ನಿ ಶರಣಿ ಜ್ಯೋತಿ ದಾಬಶೆಟಕರ್ ಅವರು ಶಿಬಿರಕ್ಕೆ ಮಾರ್ಗದರ್ಶನ ನೀಡಿದರು.
ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಶಿಬಿರ ಸಂಪನ್ನಗೊಂಡಿತು.