
ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 7 ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಡಾ. ಬಸವರಾಜ ಟಿ. ಹೆಚ್. ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.
1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ?
ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಛೇರಿಯಿಂದ ಅಭಿಯಾನದ ಕುರಿತು ಮಾಹಿತಿ ಬಂದ ಮೇಲೆ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಬಸವಪರ ಸಂಘಟನೆಗಳ ಮತ್ತು ಸಮಾನ ಮನಸ್ಕರ ಸಭೆ ನೆಡೆಸಿ, ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಭೇಟಿಕೊಟ್ಟು ಅಭಿಯಾನದ ಪೂರ್ವಬಾವಿ ಸಭೆಗೆ ಆಹ್ವಾನ ಮಾಡಲು ತೀರ್ಮಾನಿಸಲಾಯಿತು.
ಅದರಂತೆ ಎಲ್ಲಾ ತಾಲೂಕುಗಳಿಗೆ ಭೇಟಿ ಕೊಟ್ಟು ಬಸವಪರ ಸಂಘಟನೆಗಳೊಂದಿಗೆ ಸಭೆ ನಡೆಸಿ ಅಭಿಯಾನದ ಧೇಯ ಉದ್ದೇಶ ತಿಳಿಸಿ ಪೂರ್ವಬಾವಿ ಸಭೆಗೆ ಬರುವಂತೆ ವಿನಂತಿಸಲಾಯಿತು.
ಆಗಸ್ಟ್ 23 ಶನಿವಾರ ಸಂಜೆ 6 ಗಂಟೆಗೆ ಹೊಸಪೇಟೆಯ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಗದಗಿನ ಪೂಜ್ಯ ಸಿದ್ಧರಾಮ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ 2025ರ ಪೂರ್ವಬಾವಿ ಸಭೆ ನಡೆಯಿತು.
ಕೊಟ್ಟೂರು ಸ್ವಾಮಿ ಮಠದ ಪೂಜ್ಯ ಕೊಟ್ಟೂರು ಬಸವಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಆರು ತಾಲೂಕಿನ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ಹಡಗಲಿಯ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸ್ವತಂತ್ರ ಲಿಂಗಾಯತ ಧರ್ಮದ ಕುರಿತು ಪ್ರಸ್ತಾಪಿಸಿ ಸಂಚಲನ ಉಂಟುಮಾಡಿದರು.
ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ತಾಲೂಕಿನ ಜನ ಹರ್ಷಚಿತ್ತರಾಗಿ ಅಭಿಯಾನದ ಆಯೋಜನೆಗೆ ಶ್ರಮಿಸುವುದಾಗಿ ಹೇಳಿದರು. ಅಭಿಯಾನದ ದಿನ ತಮ್ಮ ಮಾತಿನಂತೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡರು.

2) ಜನರ ಸ್ಪಂದನೆ ಹೇಗಿತ್ತು?
ಹೊಸಪೇಟೆಯ ಬಸವ ಭಕ್ತರು ಉದಾರವಾಗಿ ದಾಸೋಹ ಮಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು, ಸ್ವಾಗತ ಸಮಿತಿಯ ನಿರ್ದೇಶನದಂತೆ ತಮಗೆ ವಹಿಸಿದ ಜವಾಬ್ದಾರಿ ನಿಭಾಯಿಸಿ ವಿಶ್ವಾಸ ತುಂಬಿದರು.
3) ಅಭಿಯಾನದ ಬಗ್ಗೆ ಅವರ ನಿರೀಕ್ಷೆಗೆ ಏನಿತ್ತು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?
ಅಭಿಯಾನ ಬಸವ ಮನಸ್ಸುಗಳ ಒಗ್ಗೂಡುವಿಕೆಗೆ ವೇದಿಕೆಯಾಯಿತು. ಸ್ಥಳೀಯ ಮಠದ ನೀರಸ ಪ್ರತಿಕ್ರಿಯೆ ನೀಡಿದರೂ ಮೀರಿ ಅಭಿಯಾನ ಯಶಸ್ವಿಯಾಯಿತು. ನಮ್ಮ ನಿರೀಕ್ಷೆಗೆ ತಕ್ಕಂತೆ ಜನ ಸೇರಿದರು ಮತ್ತು ಸಕ್ರಿಯವಾಗಿ ಪಾಲ್ಗೊಂಡರು.
4) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?
ಸಂವಾದ ಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳು ಗಮನ ಸೆಳೆದವು ಮತ್ತು ಪ್ರಶ್ನೆಗಳಿಗೆ ಸ್ವಾಮಿಗಳು ಉತ್ತರಿಸಿದ ರೀತಿ ಅನುಕರಣೀಯ.
5) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?
ಲಿಂಗಾಯತ ಸಮಾಜ ಬಸವಣ್ಣನವರ ಹೆಸರಿನಲ್ಲಿ ಸಂಘಟಿತವಾದರೆ ಮಾತ್ರ ಎಲ್ಲಾ ಸವಾಲುಗಳನ್ನು ನಿಭಾಯಿಸಿ ಸಶಕ್ತವಾಗಬಹುದು ಎನ್ನುವ ಸಂದೇಶ ರವಾನೆಯಾಯಿತು.
6) ಅಭಿಯಾನ ಜನರ ಮೇಲೆ, ಬಸವ ಸಂಘಟನೆಗಳ ಮೇಲೆ ಮಾಡಿರುವ ಪರಿಣಾಮವೇನು?
ಬಸವಪರ ಸಂಘಟನೆಗಳು ತಾತ್ವಿಕವಾಗಿ ಗಟ್ಟಿಯಾಗುವ ಬಗ್ಗೆ ಚಿಂತನೆಗೆ ಹಚ್ಚಿತು.

7) ಅಭಿಯಾನದಲ್ಲಿ ಮಠಾಧೀಶರ ಒಕ್ಕೊಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?
ಅಭಿಯಾನದಲ್ಲಿ ಆರಂಭದಿಂದಲು ಮಠಾಧೀಶರು ತಮ್ಮ ಸರಳತೆಯಿಂದ ನಮಗೆ ಸ್ಪೂರ್ತಿಯಾದರು. ಯಾವುದೇ ವಿಶೇಷ ಸೌಕರ್ಯಗಳನ್ನು ಬಯಸದೇ, ಯಾವುದರ ಕುರಿತಾಗಿಯೂ ತಕರಾರು ಮಾಡದೆ, ನಮ್ಮದೇ ಊರಿನವರಂತೆ ಲವಲವಿಕೆಯಿಂದ ಎಲ್ಲರೊಂದಿಗೆ ಬೆರೆತು ಹೆಜ್ಜೆಹಾಕಿದ್ದು ಅವಿಸ್ಮರಣೀಯ.
ಬಸವಪರ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ಸಂಘಟಿತರಾದದ್ದು ಮತ್ತು ಹೊಸಮುಖಗಳು, ಮುಖ್ಯವಾದ ವ್ಯಕ್ತಿಗಳು ಸಂಘಟನೆಯೊಂದಿಗೆ ಗುರುತಿಸಿಕೊಂಡು ಶಕ್ತಿ ತುಂಬಿದ್ದು, ಕೆಲವರು ಪರೋಕ್ಷವಾಗಿ ಸಹಕಾರ ವಿಸ್ತರಿಸಿದ್ದು ವಿಶೇಷ.
8) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?
ಮುಂದಿನ ಅಭಿಯಾನವನ್ನು ಖಂಡಿತಾ ಮಾಡಲೇಬೇಕು. ಜಿಲ್ಲಾ ಕೇಂದ್ರ ಹೊರತುಪಡಿಸಿ ಎಲ್ಲರ ಅಭಿಪ್ರಾಯ ಪಡೆದು ತಾಲೂಕು ಮಟ್ಟದಲ್ಲಿ ಆಯೋಜಿಸಬೇಕು.
I had sent Rs1000/-on 23/8/25 to Basava media but it is not mentioned in the list
ಸರ್
ಈಗ ಹಾಕಿದ್ದೀವಿ ದಯವಿಟ್ಟು ನೋಡಿ
ದಾಸೋಹ ಮಾಡುವವರು ದಯವಿಟ್ಟು ನಿಮ್ಮ ಹೆಸರು, ಊರು ಫೋನ್ ನಂಬರ್ ಜೊತೆ ಒಂದು ಸ್ಕ್ರೀನ್ ಶಾಟ್ ವಾಟ್ಸ್ ಆಪ್ ಮಾಡಿಬಿಡಿ. ಹಾಕಲು ಸುಲುಭವಾಗುತ್ತದೆ.
ನಿಮ್ಮ ಬೆಂಬಲಕ್ಕೆ ಧನ್ಯವಾದ