ಮಂಗಳವಾರ
‘ಬಸವಾದಿ ಶರಣರ ವಚನಗಳನ್ನು ರಕ್ಷಿಸುವುದೇ ವಿರಕ್ತಮಠಗಳ ಉದ್ದೇಶ’ ಎಂದು ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಂಗಳವಾರ ಹೇಳಿದರು. ಶ್ರೀ ಮಠದ ಆಯೋಜಿಸಲಾಗಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
‘ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಯರು ಬಸವಣ್ಣನವರ ವಚನ ಶಿಲಾಶಾಸನ ಮಂಟಪ ನಿರ್ಮಿಸಿ ವಚನ ಸಂರಕ್ಷಣೆ ಮಾಡಿದರು,’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ಶಿವಾನಂದ ಪಾಟೀಲ ಹೇಳಿದರು.

ಧಾರವಾಡ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಇಂಗಳೇಶ್ವರ ವಿರಕ್ತಮಠದ ವಚನ ಶಿಲಾಶಾಸನ ಮಂಟಪ ಸ್ಥಾಪನೆ ಮಾಡಿದ್ದು ಶ್ಲಾಘನೀಯ ಕಾರ್ಯ. ಬಸವಾದಿ ಶರಣರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,’ ಎಂದು ಹೇಳಿದರು.
ಇಂಗಳೇಶ್ವರದ ವಿರಕ್ತಮಠದ ಆವರಣದಲ್ಲಿ ನಿರ್ವಿುಸಿರುವ ಈ ವಚನ ಶಿಲಾಶಾಸನ ಮಂಟಪ 96 ವರ್ಷದ ಚೆನ್ನಬಸವ ಶ್ರೀಗಳ 40 ವರ್ಷಗಳ ನಿರಂತರ ಶ್ರಮದ ಫಲ.
ಗುರುಗಳು ಲೋಕಪರ್ಯಟನೆಗೆ ತೆರಳಿದಾಗ ಉಂಟಾದ ಸ್ಪೂರ್ತಿಯಿಂದಾಗಿ, ಶರಣರ ವಚನಗಳನ್ನು ಶಾಶ್ವತವಾಗಿ ಉಳಿಸುವ ಉದ್ದೇಶಕ್ಕೆ ಕೈಹಾಕಿದರು. ಶೆಲ್ಲಿಕೇರಿ ಕಲ್ಲಿನಲ್ಲಿ 1.60 ಲಕ್ಷಕ್ಕೂ ಅಧಿಕ ಅಕ್ಷರಗಳಲ್ಲಿ ಬಸವಣ್ಣನವರು ಹಾಗೂ ವಿವಿಧ ಶರಣರ 1500ಕ್ಕೂ ಹೆಚ್ಚು ವಚನಗಳನ್ನು ಹಲವಾರು ಶಿಲ್ಪಿಗಳಿಂದ ಕೆತ್ತಿಸಿ, ಅದನ್ನು ಮಂಟಪದಲ್ಲಿ ಅಳವಡಿಸಿದ್ದಾರೆ.

ಅಥರ್ಗಾ ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ, ಕುದುರೆಮುಖ ಸ್ವಾಮೀಜಿ, ಪಡೇಕನೂರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹರಸೂರ ಕಲ್ಮಠ ಕರಿಸಿದ್ದೇಶ್ವರ ಸ್ವಾಮೀಜಿ, ಹೂವಿನ ಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ, ಚಡಚಣ ವಿರಕ್ತಮಠದ ಷಡಕ್ಷರಿ ಸ್ವಾಮೀಜಿ, ವಡವಡಗಿ ವಿರಕ್ತಮಠ ವೀರಸಿದ್ಧ ಸ್ವಾಮೀಜಿ, ಲೋಟಗೇರಿ ಗುರುಮೂರ್ತಿ ಶಾಸ್ತ್ರೀಗಳು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಇತರರು ಇದ್ದರು.