ದಾವಣಗೆರೆ
ಬಸವತತ್ವಗಳನ್ನು ಆಚರಣೆ ಮಾಡಿದ್ದೇ ಆದಲ್ಲಿ ಜಗತ್ತಿನಲ್ಲಿ ಯುದ್ಧಗಳು ಆಗಲು ಸಾಧ್ಯವೇ ಇಲ್ಲ. ಬಸವತತ್ವ ಆಚರಣಗಳಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಮಾಧಾನಿಯಾಗಿರುತ್ತಾರೆ ಎಂದು ವಿರಕ್ತಮಠ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶಿವಯೋಗಿ ಮಂದಿರದ ಆವರಣದಲ್ಲಿ ಬಸವ ಜಯಂತಿ ಯುಶಸ್ಸಿಗಾಗಿ, ಶ್ರಮಿಸಿದವರಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿ, ಯುದ್ಧ ಮತ್ತು ಅಶಾಂತಿಗೆ ಬಸವ ತತ್ವಗಳಲ್ಲಿ ಪರಿಹಾರ ಅಡಗಿದೆ ಎಂದರು.

ಜೀವನ ಉದ್ಧಾರ ಮಾಡುವಂತಹ ಕಾಯಕ, ದಾಸೋಹ ಹಾಗೂ ಸಮಾನತೆ ತತ್ವ ಆಚರಿಸಲು ಬಸವಣ್ಣ ತಿಳಿಸಿಕೊಟ್ಟಿದ್ದಾರೆ. ಇದರ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ ಎಂದು ನುಡಿದರು.
ಬಸವ ಜಯಂತಿ ಈ ವರ್ಷ ಕೂಡ ಯಶಸ್ವಿಯಾಗಿದೆ. ಇನ್ನು ಮುಂದೆ ಬಸವ ಜಯಂತಿ ಕಾರ್ಯಕ್ರಮವನ್ನು ಬಸವ ಜಯಂತಿ ಆಚರಣಾ ಸಮಿತಿಯಿಂದಲೇ ಆಯೋಜಿಸಲು ತೀರ್ಮಾನಿಸಲಾಗಿದೆ. ಎಲ್ಲ ಬಸವಭಕ್ತರು ಒಂದಾಗಿ ಕಾರ್ಯಕ್ರಮ ನಡೆಸಬೇಕು. ಆದ್ದರಿಂದ ಸಂಘಟನೆ ಸದಾ ಜೀವಂತವಾಗಿರಬೇಕು. ಈ ಹಿನ್ನಲೆಯಲ್ಲಿ ಪ್ರತಿ ತಿಂಗಳು ಶರಣರ ಜಯಂತಿ, ಸ್ಮರಣೋತ್ಸವ ಆಚರಿಸಲಾಗುವುದು ಎಂದರು.

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಜಗತ್ತು ಇಂದು ಯುದ್ಧೋನ್ಮಾದದಿಂದ ನಲಗುತ್ತಿದೆ. ಪ್ರಸ್ತುತ ಯುದ್ದಪೀಡಿತ ದೇಶಗಳಲ್ಲಿ ಬಸವ ಪ್ರಭಾತ್ ಪೇರಿ ಮಾಡಿದರೆ ಶಾಂತಿ ನೆಲೆಸಬಹುದು ಎಂದರು.
ವಿರಕ್ತಮಠದಿಂದ ಪ್ರತಿವರ್ಷ ನಡೆಯುವ ಬಸವ ಜಯಂತಿ ಮತ್ತು ಬಸವ ಪ್ರಭಾತ್ ಪೇರಿಗಳು ಯಶಸ್ವಿಯಾಗಿ ಜರುಗಿವೆ. ಈ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಇದೀಗ ನಡೆಯುತ್ತಿರುವ 7 ದಿನಗಳ ಪ್ರಭಾತ್ ಪೇರಿ ಬರುವ ವರ್ಷಗಳಲ್ಲಿ 1 ತಿಂಗಳ ಕಾಲ ನಿರಂತರವಾಗಿ ನಡೆದರೆ ಸಮಾಜದಲ್ಲಿ ಮತ್ತಷ್ಟು ಶಾಂತಿ ಸಲೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ ಮಾತನಾಡಿ, ಕಳೆದ 20 ವರ್ಷಗಳಿಗೂ ಅಧಿಕ ಕಾಲದಿಂದ ವಿನೋಬ ನಗರದ ಮೂಲಕ ಕೂಡ ಬಸವ ಪ್ರಭಾತ್ ಪೇರಿ ಹಾದು ಹೋಗುತ್ತದೆ. ಈ ಮೂಲಕ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಶ್ರೀಮಠ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಎನ್. ಶಿವಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾದ್ಯಕ್ಷ ಆವರಗೆರೆ ರುದ್ರಮುನಿ, ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ, ಅಭಾವೀಲಿಂ ಮಹಾಸಭಾ ಅಧ್ಯಕ್ಷ ಐಗೂರು ಚಂದ್ರಶೇಖರ್, ಕಣಕುಪ್ಪಿ ಮುರುಗೇಶಪ್ಪ ಮಾತನಾಡಿದರು.

ದೂಡಾ ಸದಸ್ಯೆ ವಾಣಿ ಬಕ್ಕೇಶ, ವೀಣಾ ಮಂಜುನಾಥ್, ಕುಸುಮಾ ಲೋಕೇಶ್, ಎಸ್. ಓಂಕಾರಪ್ಪ, ಎಂ. ಶಿವಕುಮಾರ್, ಸೋಗಿ ಶಾಂತಕುಮಾರ, ಅಂದನೂರು ಮುಪ್ಪಣ್ಣ, ಪ್ರಭು ಕಲಬುರಗಿ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ, ದಾಸೋಹಿಗಳಿಗೆ ಶ್ರೀ ಮಠದಿಂದ ಅಭಿನಂದಿಸಿ, ಸತ್ಕರಿಸಲಾಯಿತು.