ಹಿರಿಯ ವಿದ್ವಾಂಸ ಡಾ. ಬಿ.ವಿ. ಶಿರೂರ ಅವರಿಗೆ ಗಂಗಾಂಬಿಕಾ ಬಳಗದಿಂದ ಸತ್ಕಾರ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ

ನಗರದ ಅಕ್ಷಯ ಕಾಲೋನಿಯ ಶರಣೆ ಗಂಗಾಂಬಿಕಾ ಬಳಗದಿಂದ ನಾಡಿನ ಹಿರಿಯ ವಿದ್ವಾಂಸರು, ಸಂಶೋಧಕರು, ಸಾಹಿತಿಗಳಾದ ಡಾ. ಬಸವರಾಜ ವೀರಭದ್ರಪ್ಪ ಶಿರೂರ ಅವರನ್ನು ಅವರ ಸ್ವಗೃಹದಲ್ಲಿ ಸತ್ಕರಿಸಲಾಯಿತು.

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಶೋಧನೆ, ಇತಿಹಾಸ, ಸಂಪಾದನೆ, ವಿಮರ್ಶಾ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆಗಾಗಿ ಪ್ರಸಕ್ತ 2024 ನೇ ಸಾಲಿನ ಶ್ರೇಷ್ಠ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ, ಡಾ. ಸಂ.ಶಿ. ಭೂಸನೂರಮಠ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಡಾ. ಬಿ. ವ್ಹಿ. ಶಿರೂರ ಭಾಜನರಾಗಿರುವರು.

ಶಿರೂರ ಅವರ ಓದು, ಬರವಣಿಗೆಯೇ ಸದಾಶಿವನ ಪೂಜೆಯಾಗಿದೆ, ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವವು ಇಂದಿನ ಬರಹಗಾರರಿಗೆ ಮಾದರಿಯಾದುದು ಎಂದು ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ ಅವರು ಬಣ್ಣಿಸಿದರು.

ಶರಣರಾದ ಶಿರೂರ ಅವರು ಮೌನ ಯೋಗಿಯಾಗಿದ್ದು, ಅವರ ವಿದ್ವತ್ತು, ಬಹುಮುಖ ಪ್ರತಿಭೆಯನ್ನು ಗುರುತಿಸಿದ ಸಮಾಜ, ಸರ್ಕಾರ, ಸಂಘ ಸಂಸ್ಥೆಗಳು ಪುರಸ್ಕರಿಸಿರುವುದು ಅತ್ಯಂತ ಸಮಂಜಸವಾಗಿದೆ. ಅವರ ಸಾಮಾಜಿಕ ಸೇವೆಯೂ ಗಣನೀಯವಾಗಿದೆ ಎಂದು ಪ್ರೊ. ಶೋಭಾ ಹಿತ್ತಲಮನಿಯವರು ಹೇಳಿದರು.

ಸನ್ಮಾನವನ್ನು ಸ್ವೀಕರಿಸಿದ ಡಾ. ಶಿರೂರ ಅವರು ಮಕ್ಕಳ ದಿನಾಚರಣೆಯಂದು ನೀವೆಲ್ಲ ತಾಯಂದಿರು ಬಂದು, ಮಗನಾದ ನನ್ನನ್ನು ಗೌರವಿಸಿ ಆಶೀರ್ವದಿಸಿದಿರಿ, ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ ಎಂದು ಸಂತೋಷ ವ್ಯಕ್ತ ಪಡಿಸಿ ಭಾವುಕರಾದರು.

ಗಂಗಾಂಬಿಕಾ ಬಳಗದ ಸದಸ್ಯೆಯರು ಉಪಸ್ಥಿತರಿದ್ದರು. ಶರಣೆ ದಾಕ್ಷಾಯಣಿ ಕೋಳಿವಾಡ ಶರಣು ಸಮರ್ಪಣೆಗೈದರು.

Share This Article
Leave a comment

Leave a Reply

Your email address will not be published. Required fields are marked *