ಅಣ್ಣಿಗೇರಿ
ಶಿವಶರಣರು ರಚಿಸಿದ ವಚನ ಸಾಹಿತ್ಯ ಜನ ಸಾಮಾನ್ಯರು ಸಹಜ ರೀತಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ವಚನಗಳಲ್ಲಿನ ನಡೆ ನುಡಿ ವಿಚಾರಧಾರೆ ಸುಂದರ ಬದುಕಿನ ಅಡಿಪಾಯವಾಗಿದೆ ಎಂದು ನಾಡಿನ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪೂರ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಣ್ಣಿಗೇರಿ ತಾಲೂಕಾ ಘಟಕವು ಸ್ಥಳೀಯ ಸರ್ವಜ್ಞ ನಗರದಲ್ಲಿ ತಾಲೂಕಾ ಶಸಾಪ ಯುವ ಘಟಕದ ಅಧ್ಯಕ್ಷ ಕಿರಣ ಬೂದಿಹಾಳ ಅವರ ಮಹಾಮನೆ ಬಸವ ಚೇತನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಮತ್ತು ಲಿಂ. ಬಸನಗೌಡ ಪಾಟೀಲ (ಅಡ್ನೂರು) ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶರಣರ ಬದುಕು ಆದರ್ಶ ಪ್ರಾಯವಾದುದು. ವೈಯಕ್ತಿಕತೆಗಿಂತ ಸಾಮುದಾಯಿಕ ಕ್ಷೇಮವನ್ನೇ ತಮ್ಮ ನಡೆ ನುಡಿಗಳಲ್ಲಿ ಹಾಸುಹೊಕ್ಕಾಗಿಸಿಕೊಂಡಿದ್ದ ಶರಣರು ಅಭಿಮಾನಕ್ಕಿಂತ ಅಭಿವೃದ್ಧಿ ದೊಡ್ಡದೆಂದು ಸಾಧಿಸಿ ತೋರಿಸಿದರು. ಮನುಷ್ಯ ಜನ್ಮಕ್ಕೆ ಪರಮಾನಂದ ಪ್ರಾಪ್ತಿಯಾಗುವದು ಪರಿಶ್ರಮದಿಂದ ಮಾತ್ರ ವೆಂಬುದನ್ನು ತೋರಿಸಿದವರು ನಮ್ಮ ಶರಣರು ಎಂದು ಹೇಳಿದರು.
ದತ್ತಿ ದಾನಿ ಅಡ್ನೂರಿನ ಬಸನಗೌಡ ಪಾಟೀಲ ಸ್ಮರಣಾರ್ಥ ಜಾನಪದ ಹಾಡುಗಳಲ್ಲಿ ಶರಣರ ನೆನಹು ಎಂಬ ವಿಷಯದ ಮೇಲೆ ಜಾನಪದ ತಜ್ಞ ಡಾ. ರಾಮೂ ಮೂಲಗಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಎಸ್. ಎಸ್. ಹರ್ಲಾಪೂರ ಮಾತನಾಡಿ, ನಾಳಿನ ನಾಗರಿಕರಾಗುವ ಮಕ್ಕಳಿಗೆ ವಚನಾಧ್ಯಯನದಲ್ಲಿ ಆಸಕ್ತಿ ಹುಟ್ಟಿಸಿ ಸದೃಢ ಸಮಾಜ ಕಟ್ಠಲು ಪಾಲಕರು ಶ್ರಮಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಎಸ್.ಆರ್. ರಾಚಣ್ಣವರ, ನವಲಗುಂದ ಶಸಾಪ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿದರು. ಅಣ್ಙಿಗೇರ ತಾಲೂಕ ಶಸಾಪ ಅಧ್ಯಕ್ಷ ಎನ್. ಎಂ. ಯಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕಾ ಶಸಾಪ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರಿಂದ ಸೇವಾ ದೀಕ್ಷೆಯ ಪ್ರಮಾಣ ಪತ್ರ ವಿತರಿಸಲಾಯಿತು.
ದತ್ತಿ ದಾನಿ ಶ್ರೀ ಶಿವುನಗೌಡ ಪಾಟೀಲ ಚಂದ್ರಶೇಖರ ಕೊಟ್ಟೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಚಂದ್ರಶೇಖರ ಸುರಕೋಡ ಸ್ವಾಗತಿಸಿದರು. ಡಾ. ಶಾಂತಾ ಲಕ್ಷ್ಮೇಶ್ವರ ವಚನ ಪ್ರಾರ್ಥನೆ ಮಾಡಿ ನಿರೂಪಿಸಿದರು. ವಿಜಯಲಕ್ಷ್ಮಿ ಹರ್ತಿಮಠ ವಚನ ಗಾಯನಗೈದರು. ವೀರಪ್ಪ ಗುದ್ದಿನ ವಂದಿಸಿದರು.