ನ್ಯಾಯಾಲಯದ ಹೊರಗೆ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆಯಲು ‘ನ್ಯಾಯವೆಂಬ ಬೆಳಕು’ ಸಹಾಯ ಮಾಡಲಿದೆ.
ಬೆಳಗಾವಿ
ಲಿಂಗಾಯತ ಸಂಘಟನೆ, ಬೆಳಗಾವಿ ವತಿಯಿಂದ ಫ.ಗು. ಹಳಕಟ್ಟಿ ಭವನದಲ್ಲಿ “ನ್ಯಾಯವೆಂಬ ಬೆಳಕು” ಪರ್ಯಾಯ ವಿವಾದ ಇತ್ಯರ್ಥ ಕೇಂದ್ರದ ಕಚೇರಿ ರವಿವಾರದಂದು ಉದ್ಘಾಟನೆಯಾಯಿತು.
ಸಂಘಟನೆ ಅಧ್ಯಕ್ಷರಾದ ಈರಣ್ಣ ದೇಯಣ್ಣವರ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಲಿಂಗಾಯತ ಸಂಘಟನೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಸಂಸ್ಥೆ ಪರ್ಯಾಯ ವಿವಾದ ಇತ್ಯರ್ಥದ ಮೂಲಕ, ನ್ಯಾಯಾಲಯದ ಹೊರಗೆ ಜನರಿಗೆ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆಯಲು ಅನುಕೂಲವಾಗಲಿದೆ.
ಸಾರ್ವಜನಿಕರು ಇಲ್ಲಿ ಮಧ್ಯಸ್ಥಿಕೆ, ಅನುಸಂಧಾನ, ಸಮಾಲೋಚನೆ, ರಾಜಿ ವಿಧಾನಗಳ ಮೂಲಕ ತಮ್ಮ ಯಾವುದೇ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯನ್ನು ಹುಟ್ಟು ಹಾಕುವಲ್ಲಿ ಶ್ರಮಿಸಿದ ನ್ಯಾಯವಾದಿ ಸುನೀಲ ಎಸ್. ಸಾಣೇಕೊಪ್ಪ ಅವರು ಮಾತನಾಡಿ, ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುವ ಸದುದ್ದೇಶ ಹೊಂದಿರುವ ಈ ಸಂಸ್ಥೆ ತಮ್ಮ ಕನಸಿನ ಕೂಸಾಗಿದ್ದು, ಅದನ್ನು ಲಿಂಗಾಯತ ಸಂಘಟನೆಯ ಆಶ್ರಯದಲ್ಲಿ ನಡೆಸುವುದು ಸಂತಸದ ಸಂಗತಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶರಣರಾದ ಸಂಗಮೇಶ ಅರಳಿ, ಸೋಮಶೇಖರ ಕತ್ತಿ, ರಮೇಶ ಕಳಸಣ್ಣವರ, ಸತೀಶ ಪಾಟೀಲ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಸಿದ್ದಪ್ಪ ಸಾರಪುರಿ, ವಿಜಯ ಹುದಲಿಮಠ, ಎಫ್.ಎಸ್. ಪಾಟೀಲ, ವ್ಹಿ.ಕೆ. ಪಾಟೀಲ, ಬಿ.ಪಿ. ಜೇವಣಿ, ಎಮ್.ವೈ. ಮೆಣಸಿನಕಾಯಿ, ಶಿವಾನಂದ ನಾಯಕ, ಅನೀಲ ರಘುಶೆಟ್ಟಿ, ಬಸವರಾಜ ಮತ್ತಿಕಟ್ಟಿ, ವಿರುಪಾಕ್ಷ ದೊಡ್ಡಮನಿ, ಜ್ಯೋತಿ ಬಾದಾಮಿ, ಸುಜಾತ ಮತ್ತಿಕಟ್ಟಿ , ಸುದೀಪ ಪಾಟೀಲ, ಶೇಖರ ವಾಲಿಇಟಗಿ, ಬಾಬಣ್ಣ ತಿಗಡಿ, ಗಂಗಪ್ಪ ಉಣಕಲ ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.