ಚಿತ್ರದುರ್ಗ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ೨೦೨೫ರ ಅಂಗವಾಗಿ ಶಿವ ಶರಣರ ಕುರಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಎರಡನೇ ದಿನವಾದ ಮಂಗಳವಾರ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ೧೨ನೇ ಶತಮಾನದಲ್ಲಿ ಒಬ್ಬ ವ್ಯಕ್ತಿಯ ಸುತ್ತ ಇದ್ದ ಶರಣರುಗಳು ಕಾಯಕ ಜೀವಿಗಳಾಗಿದ್ದರು. ಕಾಯಕವೇ ಕೈಲಾಸ ಎಂಬ ವಾಕ್ಯಕ್ಕೆ ಬದ್ದರಾಗಿದ್ದರು. ಅಂತಹ ಶರಣರ ಕೇಂದ್ರ ಬಿಂದುವಾಗಿದ್ದವರು ಬಸವಣ್ಣನವರು.

ಅವರ ಬಗ್ಗೆ ಎಷ್ಟು ವಿಚಾರಗಳನ್ನು ತಿಳಿದುಕೊಂಡರೂ ಕಡಿಮೆಯೇ. ನಾಡಿನ ಹಲವಾರು ಕವಿಗಳು, ದಾರ್ಶನಿಕರು, ವಿಚಾರವಾದಿಗಳು ಬಸವಣ್ಣನವರ ಬಗ್ಗೆ ಹೇಳಿದ ಮಾತುಗಳನ್ನು ಗಮನಿಸಿದಾಗ ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಅರಿವಾಗುತ್ತದೆ ಎಂದು ನುಡಿದರು.

ಶ್ರೀಮಠದ ಅನುಭವ ಮಂಟಪದಲ್ಲಿ ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣ ವಿಷಯಾಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಕೊಪ್ಪಳ ವಿಜಯನಗರ ಶಿವಮೊಗ್ಗ ರಾಯಚೂರು ಗುಲ್ಬರ್ಗ ಹಾಗೂ ನಾಡಿನ ವಿವಿಧ ಜಿಲ್ಲೆಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯದ ಭಾಷಣ ಸ್ಪರ್ಧೆಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯ ಉಸ್ತುವಾರಿಯನ್ನು ಡಾ.ಬಿ.ರೇವಣ್ಣ, ಡಾ.ಎಸ್.ಹೆಚ್. ಪಂಚಾಕ್ಷರಿ, ಶ್ರೀ ರುದ್ರಮೂರ್ತಿ, ನವೀನ್ ಮಸ್ಕಲ್ ಹಾಗೂ ಎಸ್.ಜೆ.ಎಂ.ಕಾಲೇಜಿನ ಸಿಬ್ಬಂದಿ ವರ್ಗದವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀಬಸವಲಿಂಗಮೂರ್ತಿ ಸ್ವಾಮೀಗಳು, ತಿಳಿವಳ್ಳಿಯ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮಿಗಳು ಹಾಗೂ ಕಲ್ಕರೆಯ ಶ್ರೀ ಪೂರ್ಣನಂದಾ ಸ್ವಾಮಿಗಳು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು, ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.